
ವಿಜಯಪುರ, 12 ಮೇ (ಹಿ.ಸ.) :
ಆಂಕರ್ : ವಿಜಯಪುರ ನಗರದಲ್ಲಿ ಬೀದಿನಾಯಿಗಳ ಹಾವಳಿ ಮುಂದುವರಿದಿರುವ ಬೆನ್ನಲ್ಲೇ ದುಷ್ಕರ್ಮಿಗಳು ಬೀದಿನಾಯಿಗಳಿಗೆ ವಿಷಾಹಾರ ನೀಡಿದ್ದು, ಆರು ಬೀದಿನಾಯಿಗಳು ನರಳಿ ನರಳಿ ಪ್ರಾಣಬಿಟ್ಟಿರುವಆತಂಕಕಾರಿ ಘಟನೆ ಶಾಂತಿ ನಗರದಲ್ಲಿ ನಡೆದಿದೆ.
ಎರಡು ನಾಯಿಗಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಶಾಂತಿ ನಗರದಲ್ಲಿ ಈವರೆಗೆ ನಾಯಿಗಳ ದಾಳಿ ಪ್ರಕರಣ ವರದಿಯಾಗದಿದ್ದರೂ ವಿಷಾಹಾರ ನೀಡಿರುವುದು ಮಾತ್ರ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ವಿಷ ಹಾಕಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.
- ವಿಜಯಪುರದಲ್ಲಿ ಬೀದಿನಾಯಿಗಳಿಗೆ ವಿಷಾಹಾರ
- ಅಪರಿಚಿತರ ಅಮಾನವೀಯ ಕೃತ್ಯಕ್ಕೆ ಪ್ರಾಣಿಪ್ರಿಯರು ಆಕ್ರೋಶ
- ಶ್ವಾನಪಾಲನಾ ಕೇಂದ್ರ ನಿರ್ಮಾಣಕ್ಕೆ ಆಗ್ರಹ
ಮೇ 6ರಂದು ರಾಜಕುಮಾರ ಲೇಔಟ್ನಲ್ಲಿ ಮೂರು ವರ್ಷದ ಬಾಲಕನ ಮೇಲೆ ಬೀದಿನಾಯಿ ದಾಳಿ ಮಾಡಿತ್ತು. ಕಚ್ಚಿಕೊಂಡು ಎಳೆದುಕೊಂಡು ಹೋಗಿದ್ದ ಶ್ವಾನದಿಂದ ಸ್ಥಳೀಯರು ಬಾಲಕನನ್ನು ರಕ್ಷಣೆ ಮಾಡಿದ್ದರು. ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ಮಧ್ಯೆ ಬಾಲಕ ಹೋರಾಡುತ್ತಿದ್ದಾನೆ.
ಇಂದು ಶಾಂತಿ ನಗರದಲ್ಲಿ ಬೀದಿನಾಯಿಗಳಿಗೆ ವಿಷಪ್ರಾಶನ ಮಾಡಲಾಗಿದೆ. ಅಪರಿಚಿತರಿಂದ ಬೀದಿ ನಾಯಿಗಳಿಗೆ ವಿಷಾಹಾರ ನೀಡಲಾಗಿದ್ದು, 6 ಬೀದಿನಾಯಿಗಳು ಪ್ರಾಣ ಬಿಟ್ಟಿವೆ. ಈ ಶಾಂತಿ ನಗರದಲ್ಲಿ ಸಾರ್ವಜನಿಕರಿಗೆ, ಮಕ್ಕಳಿಗೆ ಯಾವುದೇ ಬೀದಿನಾಯಿಗಳು ಕಚ್ಚಿಲ್ಲ, ದಾಳಿ ಮಾಡಿಲ್ಲ, ಆದರೂ ವಿಷ ಹಾಕಿರುವುದಕ್ಕೆ ಪ್ರಾಣಿ ಪ್ರಿಯರು ತೀವ್ರ ಅಸಮಾಧಾನ ಹೊರ ಹಾಕಿದ್ಧಾರೆ.
ಅಸ್ವಸ್ಥ ನಾಯಿಗಳನ್ನ ಕಸದ ವಾಹನದಲ್ಲಿ ಹಾಕಿದ ಆರೋಪ
ಇನ್ನು ಕಳೆದ ಕೆಲ ದಿನಗಳ ಹಿಂದೆ ಯಾರೋ ಅಪರಚಿತರು ಬೀದಿನಾಯಿಗಳಿಗೆ ವಿಷ ಹಾಕಿ ಹೋಗಿದ್ದರಂತೆ. ಆಗ 2 ಬೀದಿನಾಯಿಗಳು ಅಸುನೀಗಿದ್ದವು. ನಿನ್ನೆ ರಾತ್ರಿ ಮತ್ತೆ ಬೀದಿನಾಯಿಗಳಿಗೆ ವಿಷಾಹಾರ ನೀಡಲಾಗಿದೆ. ಆ ಮೂಲಕ 6 ಬೀದಿನಾಯಿಗಳನ್ನು ವಿಷಾಹಾರ ಹಾಕಿ ಕೊಲ್ಲಲಾಗಿದೆ. ವಿಷಹಾರ ತಿಂದ ಕೆಲ ಬೀದಿನಾಯಿಗಳು ತೀವ್ರ ಅಸ್ವಸ್ಥವಾಗಿದ್ದವು. ಆದರೆ ಅಸ್ವಸ್ಥಗೊಂಡ ಬೀದಿನಾಯಿಗಳನ್ನು ಪಾಲಿಕೆಯವರು, ಪಶುಸಂಗೋಪನೆ ಇಲಾಖೆ ಸಿಬ್ಬಂದಿ, ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಬದಲು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕಸದ ವಾಹನದಲ್ಲಿ ಎಸೆದಿದ್ದಾರೆ. ಇದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಜೀವಂತವಿರುವ ಬೀದಿನಾಯಿಯನ್ನು ನಿರ್ದಯವಾಗಿ ಕಸದ ವಾಹನದಲ್ಲಿ ಹಾಕಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಬೀದಿನಾಯಿಗಳ ನಿಯಂತ್ರಣ, ಸಾಗಾಟ, ಪಾಲನೆಗೆ ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ ಮಾಡಬೇಕಿದೆ. ಆದರೆ ಪಾಲಿಕೆ ಸಿಬ್ಬಂದಿ ಹಾಗೂ ಸಂಬಂಧಿಸಿದ ಇಲಾಖೆ ಸಿಬ್ಬಂದಿ ಸುಪ್ರೀಂ ಕೋರ್ಟ್ ಸೂಚನೆಗಳನ್ನು ಪಾಲಿಸುತ್ತಿಲ್ಲ. ಬೀದಿನಾಯಿಗಳಿಗೆ ವಿಷ ಹಾಕಿದವರ ಮೇಲೆ ಕಾನೂನು ಕ್ರಮತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಶ್ವಾನಪಾಲನಾ ಕೇಂದ್ರಕ್ಕೆ 2ಕೋಟಿ ರೂ ಅನುದಾನ
ಒಂದೆಡೆ ಬೀದಿನಾಯಿಗಳು ದಾಳಿ ಮಾಡುತ್ತಿದ್ದರೆ, ಮತ್ತೊಂದೆಡೆ ಮಾನವೀಯತೆ ಮರೆತು ಬೀದಿನಾಯಿಗಳಿಗೆ ವಿಷಾಹಾರ ಹಾಕಿ ಕೊಲ್ಲಲಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಶ್ವಾನ ಪಾಲನಾ ಕೇಂದ್ರ ನಿರ್ಮಾಣ ಮಾಡಬೇಕಿದೆ. ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಶ್ವಾನಪಾಲನಾ ಕೇಂದ್ರಕ್ಕೆ 2ಕೋಟಿ ರೂ ಅನುದಾನ ಮಂಜೂರು ಮಾಡಿದ್ದಾರೆ. ನಿರ್ಮಾಣ ಕಾಮಗಾರಿ ಆದಷ್ಟು ಬೇಗ ಮುಗಿಸಿ ಬೀದಿನಾಯಿಗಳಿಗೆ ಆಶ್ರಯ ನೀಡಬೇಕಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande