
ಬೆಂಗಳೂರು, 11 ಮೇ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ವೈಜ್ಞಾನಿಕ ಸಾಧನೆಗಳು, ನಾವೀನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಗೌರವ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ಅವರು, “ಭಾರತದ ಐತಿಹಾಸಿಕ ತಾಂತ್ರಿಕ ಮೈಲಿಗಲ್ಲುಗಳಿಗೆ ಶಕ್ತಿ ತುಂಬಿದ ವೈಜ್ಞಾನಿಕ ಮನೋಭಾವ, ಧೈರ್ಯ ಮತ್ತು ನಾವೀನ್ಯತೆಯನ್ನು ನಾವು ಈ ದಿನ ಗೌರವಿಸುತ್ತೇವೆ” ಎಂದು ಹೇಳಿದ್ದಾರೆ.
ಇಂದಿನ ಯುಗದಲ್ಲಿ ಕೃತಕ ಬುದ್ಧಿಮತ್ತೆ , ಯಾಂತ್ರೀಕೃತ ತಂತ್ರಜ್ಞಾನ ಮತ್ತು ಹೊಸ ಡಿಜಿಟಲ್ ಗಡಿಗಳ ಮೂಲಕ ತಂತ್ರಜ್ಞಾನ ವೇಗವಾಗಿ ರೂಪಾಂತರಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಾವೀನ್ಯತೆ ವೈಜ್ಞಾನಿಕ ಮನೋಭಾವ, ಮಾನವ ಕಲ್ಯಾಣ ಮತ್ತು ಸಾಮಾಜಿಕ ಜವಾಬ್ದಾರಿಗಳಲ್ಲಿ ಬೇರೂರಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ತಂತ್ರಜ್ಞಾನವು ಅಸಮಾನತೆಗಳನ್ನು ಹೆಚ್ಚಿಸಬಾರದು. ಅದು ಜನರನ್ನು ಸಬಲೀಕರಣಗೊಳಿಸಬೇಕು, ಆಡಳಿತ ವ್ಯವಸ್ಥೆಯನ್ನು ಬಲಪಡಿಸಬೇಕು, ಪರಿಸರವನ್ನು ರಕ್ಷಿಸಬೇಕು ಮತ್ತು ಸುಸ್ಥಿರ ಅಭಿವೃದ್ಧಿಗೆ ದಾರಿಯಾಗಬೇಕು” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಜ್ಞಾನವು ಸಮಾಜಕ್ಕೆ ಸೇವೆ ಸಲ್ಲಿಸುವಂತೆ, ನಾವೀನ್ಯತೆ ಮಾನವೀಯ ಮೌಲ್ಯಗಳನ್ನು ಉನ್ನತೀಕರಿಸುವಂತೆ ಮತ್ತು ತಂತ್ರಜ್ಞಾನವು ಎಲ್ಲರನ್ನೂ ಒಳಗೊಂಡ ಬೆಳವಣಿಗೆಗೆ ಶಕ್ತಿಯಾಗುವ ಭವಿಷ್ಯವನ್ನು ನಿರ್ಮಿಸೋಣ ಎಂದು ಅವರು ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa