




ಕೊಪ್ಪಳ, 10 ಮೇ (ಹಿ.ಸ.) :
ಆ್ಯಂಕರ್ : ಸಂಸಾರದ ಜಂಜಾಟಗಳ ನಡುವೆಯೂ ಭಕ್ತಿ ಮತ್ತು ಸಹನೆಯಿಂದ ಅಧ್ಯಾತ್ಮದ ಉತ್ತುಂಗಕ್ಕೇರಿದ ಹೇಮರೆಡ್ಡಿ ಮಲ್ಲಮ್ಮನವರ ಜೀವನ ಇಂದಿನ ಆಧುನಿಕ ಯುಗದ ಸ್ತ್ರೀಯರಿಗೆ ಹಾಗೂ ಸಮಾಜಕ್ಕೆ ದಾರಿದೀಪವಾಗಿದೆ. ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ತಿಲಕ ಎಂದು ಸಿಂಧನೂರಿನ ನಿವೃತ್ತ ಶಿಕ್ಷಕರು ಹಾಗೂ ಜಾನಪದ ಸಾಹಿತಿಗಳಾದ ವೆಂಕನಗೌಡ ವಟಗಲ್ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಕನ್ನಡದ ಭಕ್ತಿ ಪರಂಪರೆಯ ಮಹಾನ್ ಶಿವಶರಣೆಯಾದ ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಗೌರವ ಅರ್ಪಿಸಿ ಅವರು ಮಾತನಾಡಿದರು.
ಇಂದಿನ ತಾಂತ್ರಿಕ ಯುಗದಲ್ಲಿ ಮನುಷ್ಯ ಸಣ್ಣ ಪುಟ್ಟ ಕಷ್ಟಗಳಿಗೂ ಧೃತಿಗೆಡುತ್ತಿದ್ದಾನೆ. ಅಂತಹ ಸಂದರ್ಭದಲ್ಲಿ ಮಲ್ಲಮ್ಮನವರ ಬದುಕು ನಮಗೆ ಸ್ಥಿತಪ್ರಜ್ಞೆಯನ್ನು ಕಲಿಸುತ್ತದೆ. ಸ್ತ್ರೀ ಶಕ್ತಿಯ ಸಂಕೇತವಾಗಿರುವ ಅವರು, ಸಂಸಾರದಲ್ಲಿದ್ದುಕೊ0ಡೇ ಆಧ್ಯಾತ್ಮದ ಉತ್ತುಂಗವನ್ನು ಹೇಗೆ ತಲುಪಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದು ಹೇಳಿದರು.
ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ 604 ನೇ ಜಯಂತಿ ಕಾರ್ಯಕ್ರಮದಲ್ಲಿ 2025-26 ನೇ ಸಾಲಿನ ಪಿಯುಸಿ ದ್ವಿತೀಯ ಹಾಗೂ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಾಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ, ಕೊಪ್ಪಳ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ರೆಡ್ಡಿ ಸಮಾಜದ ಮುಖಂಡರಾದ ಜಗದೀಶಪ್ಪ, ಮಹಲಿಂಗಪ್ಪ, ಹೇಮರೆಡ್ಡಿ ಬಿಸರಳ್ಳಿ, ಕಾಶಿನಾಥ ರೆಡ್ಡಿ, ಶಂಕರಗೌಡ ಹಿರೇಗೌಡ್ರು, ಅಂಬರೀಶ್ ಪಾಟೀಲ್, ವೆಂಕರೆಡ್ಡಿ ವಕೀಲರು, ಶರಣಪ್ಪ ವಕೀಲರು, ಸುಭಾಷ್ ರೆಡ್ಡಿ, ಮಹಾಲಿಂಗ ಹರಿಕೇರಿ ಸೇರಿದಂತೆ ರೆಡ್ಡಿ ಸಮಾಜದ ಬಂಧುಗಳು ಉಪಸ್ಥಿತರಿದ್ದರು. ಯಮನೂರಪ್ಪ ಭಜಂತ್ರಿ ಕಲಾ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್