



ಬಳ್ಳಾರಿ, 08 ಏಪ್ರಿಲ್ (ಹಿ.ಸ.)
ಆ್ಯಂಕರ್ : ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.5 ರಷ್ಟು ಮೀಸಲಾತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಂಧ್ರಪ್ರದೇಶದ ಕರ್ನೂಲ್ - ಅನಂತಪುರ ಜಿಲ್ಲೆಯ ಕನ್ನಡ ಶಿಕ್ಷಕರು ಮತ್ತು ಕನ್ನಡ ಸಂಘದ ಸದಸ್ಯರು ಜಿಲ್ಲಾಡಳಿತದ ಮೂಲಕ ಕರ್ನಾಟಕ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ಕನ್ನಡ ಶಿಕ್ಷಕ ಎಂ. ಗಿರಿಜಾಪತಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕರ್ನೂಲ್ - ಅನಂತಪುರ ಜಿಲ್ಲೆಯ ಕನ್ನಡ ಶಿಕ್ಷಕರು ಮತ್ತು ಕನ್ನಡ ಸಂಘದ ಸದಸ್ಯರು, ಕರ್ನಾಟಕದ ಗಡಿ ಜಿಲ್ಲೆ ಆಗಿರುವ ಬಳ್ಳಾರಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಕರ್ನೂಲು ಹಾಗೂ ಅನಂತಪುರ ಜಿಲ್ಲೆಯ ಆಲೂರು, ಆದೋನಿ, ರಾಯದುರ್ಗ ಹಾಗೂ ಮಡಕಶಿರ ತಾಲೂಕುಗಳಲ್ಲಿ ಕನ್ನಡವನ್ನು ಭಾಷೆಯಾಗಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ.
1956ರ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ಸಂದರ್ಭದಲ್ಲಿ ಅಚ್ಚ ಕನ್ನಡ ಮಾತನಾಡುವ ಈ ಪ್ರದೇಶಗಳು ಆಂಧ್ರಪ್ರದೇಶಕ್ಕೆ ಸೇರ್ಪಡೆಯಾದವು. ಭೌಗೋಳಿಕವಾಗಿ ಕನ್ನಡಿಗರು ಆಂಧ್ರದಲ್ಲಿ ಇದ್ದರೂ ಸಾಂಸ್ಕøತಿಕವಾಗಿ ಮತ್ತು ಭಾವನಾತ್ಮಕವಾಗಿ ಕರ್ನಾಟಕದ ಜೊತೆ ನಿರಂತರ ಸಂಬಂಧಗಳನ್ನು ಹೊಂದಿದ್ದಾರೆ. ಕರ್ನೂಲ್ ಮತ್ತು ಅನಂತಪುರ ಜಿಲ್ಲೆಯಲ್ಲಿ 65ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿದ್ದು 12,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನೇ ಉಸಿರಾಗಿಸಿಕೊಂಡು ಕಲಿಯುತ್ತಿದ್ದಾರೆ.
10ನೇ ತರಗತಿಯ ನಂತರ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬರುವ ಕನ್ನಡ ಕಲಿತ ವಿದ್ಯಾರ್ಥಿಗಳಿಗೆ `ಹೊರನಾಡು ಕನ್ನಡಿಗರು' ಅಥವಾ `
ಕರ್ನಾಟಕೇತರರು' ಎಂಬ ಹಣೆಪಟ್ಟಿ ಹಚ್ಚಿ, ವೃತ್ತಿಪರ ಕೋರ್ಸ್ಗಳಲ್ಲಿ ಬಿಎಡ್, ಇಂಜಿನಿಯರಿಂಗ್, ಮೆಡಿಕಲ್ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ.
ಕಾರಣ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಭವಿಷ್ಯದ ಭರವಸೆ ಕಳೆದುಕೊಳ್ಳುತ್ತಿದ್ದಾರೆ.
ಕರ್ನಾಟಕದ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಾಗ ಆಂಧ್ರಪ್ರದೇಶದ ಕನ್ನಡ ಭಾಷೆ ಕಲಿತ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಅಲ್ಲದೆ, ಇವರಿಗೆ ಕರ್ನಾಟಕದ ಸರ್ಕಾರಿ ವಸತಿ ನಿಲಯಗಳಲ್ಲಿ ಪ್ರವೇಶ ಮತ್ತು ಕರ್ನಾಟಕ ಸರ್ಕಾರದಿಂದ ವಿದ್ಯಾರ್ಥಿ ವೇತನ ಬಿಡುಗಡೆ ಆಗುತ್ತಿಲ್ಲ.
ಆಂಧ್ರಪ್ರದೇಶದ ಕಂದಾಯ ಅಧಿಕಾರಿಗಳು ನೀಡಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪರಿಗಣಿಸಬೇಕು ಎಂದು ಅವರು ಕೋರಿದ್ದಾರೆ.
ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಗಣಿತ, ವಿಜ್ಞಾನ ಮತ್ತು ಕನ್ನಡ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಕರ್ನಾಟಕ ಸರ್ಕಾರ ಖಾಲಿ ಹುದ್ದೆಗಳಲ್ಲಿ ಖಾಯಂ ಅಥವಾ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕು.
ವಿದ್ಯಾರ್ಥಿಗಳ ಕೊರತೆಯ ಕಾರಣ ನೀಡಿ ಆಂಧ್ರಪ್ರದೇಶ ಸರ್ಕಾರ ಕಳೆದ ವರ್ಷ ಆದೋನಿಯಲ್ಲಿ 3 ಕನ್ನಡ ಶಾಲೆಗಳನ್ನು ಮುಚ್ಚಿವೆ. ಆಂಧ್ರದಲ್ಲಿ ಕನ್ನಡದ ಅಸ್ತಿತ್ವಕ್ಕೆ ಸಂಚಕಾರ ತಂದಿದೆ. ಕಾರಣ ಕರ್ನಾಟಕ ಸರ್ಕಾರ ತ್ವರಿತವಾಗಿ ಆಂಧ್ರದಲ್ಲಿರುವ ಕನ್ನಡ ಭಾಷಾ ವಿದ್ಯಾರ್ಥಿಗಳ ನೆರವಿಗೆ ಬರಬೇಕು ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿ. ದೊಡ್ಡಬಸಪ್ಪ, ಎಚ್.ಎಂ. ಶಾಂತವೀರಮೂರ್ತಿ, ಪಿ. ಕಬೀರಸಾಬ್, ಡಿ. ರಾಮದಾಸ್, ಜೆ. ಗವಿಸಿದ್ದಪ್ಪ, ಜೆ. ಮಂಜುನಾಥ, ಡಿ. ಸಿದ್ದನಗೌಡ, ಕೆ. ಆರ್. ನಾಗರಾಜ ಶೆಟ್ಟಿ, ಈರಾಳಪ್ಪ, ಡಿ. ದೇವರಾಜ ನಾಯಕ್, ಜಿ. ಬಸಣ್ಣ, ಜಿ. ತಿಪ್ಪೇಸ್ವಾಮಿ, ಎಂ. ಶಶಿಧರ, ಹೊನ್ನೂರಪ್ಪ, ಗಂಜಿ ಪಂಪಾಪತಿ, ಅಯ್ಯಣ್ಣ, ಶ್ರೀನಾಥ್, ನಾಗರಾಜ್, ಶ್ರೀರಾಮ್ ವೀರೇಶ್, ವೀರೇಶ್, ಕೃಷ್ಣ ನಾಯಕ್, ಕೃಷ್ಣ, ಹನುಮಂತಪ್ಪ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್