
ಕೊಪ್ಪಳ, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಹಸುಗೂಸುಗಳನ್ನು ಅಥವಾ ಬೇಡವಾದ ಮಕ್ಕಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಕೃತ್ಯವೆಸಗುವವರವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಎಲಿಗಾರ ಅವರು ತಿಳಿಸಿದ್ದಾರೆ.
ಶಿವಪುರ ಗ್ರಾಮದ ಕಾಲುವೆಯಲ್ಲಿ ನವಜಾತ ಗಂಡು ಮಗುವಿನ ಮೃತ ದೇಹವು ತೇಲಿಕೊಂಡು ಬ0ದಿದ್ದು, ಈ ಕಳೇಬರವನ್ನು ಗಮನಿಸಿ, ತಿಳಿದೂ, ತಿಳಿಯದೆಯೋ ಅಂತ್ಯ ಸಂಸ್ಕಾರ ಮಾಡಿರುತ್ತಾರೆಂದು ಏಪ್ರಿಲ್ 6ರಂದು ಕೆಲವು ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ಗಮನಿಸಿದ ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಮುನಿರಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂ:103/2026 ರಲ್ಲಿ ಮಗುವನ್ನು ತೊರೆದು ಹೋದವರ ಮತ್ತು ಮಗುವಿನ ಅಂತ್ಯ ಸಂಸ್ಕಾರ ನೆರವೇರಿಸಿದವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
ಭಾರತ ಸಂವಿಧಾನದ ಪರೀಚ್ಛೇಧ 21ರಲ್ಲಿ ದೇಶದ ಸಮಸ್ತ ನಾಗರಿಕರು ಮತ್ತು ಜೀವಿಗಳಿಗೆ ಜೀವಿಸುವ ಹಕ್ಕನ್ನು ನೀಡಿದೆ. ನವಜಾತ ಶಿಶು, ಗರ್ಭದಲ್ಲಿರುವ ಬ್ರೂಣಕ್ಕೂ ಸಹ ಈ ಹಕ್ಕು ಅನ್ವಯವಾಗುತ್ತದೆ.
ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರನ್ವಯ ಮಗು ಬೇಡವೆಂದಾದಲ್ಲಿ ಮಕ್ಕಳ ಕಲ್ಯಾಣ ಸಮಿತಿಗೆ ಅಂತಹ ಮಗುವನ್ನು ಹಾಜರಪಡಿಸಬಹುದಾಗಿದೆ. ಮಗುವನ್ನು ಹಾಜರಪಡಿಸಿದವರ ವಿರುದ್ಧ ಯಾವುದೇ ರೀತಿಯಲ್ಲಿ ಕಾನೂನು ಕ್ರಮವನ್ನು ಜರುಗಿಸಲು ಅವಕಾಶವಿರುವುದಿಲ್ಲ.
ಆದರೆ, ಬೇಡವಾದ ಮಗುವನ್ನು ಮಗುವಿನ ಜೀವಕ್ಕೆ ಎರವಾಗುವಂತೆ ಎಲ್ಲೆಂದರಲ್ಲಿ ತೊರೆದು ಹೋಗುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ರೀತಿಯಲ್ಲಿ ಮಗುವನ್ನು ತೊರೆದು ಹೋಗಿ ಮಗು ಮೃತಪಟ್ಟಲ್ಲಿ ಭಾರತೀಯ ನ್ಯಾಯ ಸಂಹಿತೆ-2023 ಕಲಂ 91ರನ್ವಯ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.
ತೊರೆದು ಹೋದ ಮಗು ಮೃತಪಟ್ಟಲ್ಲಿ, ಒಂದು ವೇಳೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡದೇ ಮಗುವಿನ ಕಳೆಬರಹವನ್ನು ಶವಸಂಸ್ಕಾರ ಮಾಡಿದಲ್ಲಿ ಅಥವಾ ಮಾಡಿದವರ ವಿರುದ್ಧ ಭಾರತೀಯ ನ್ಯಾಯ ಸಂಹಿತಿ-2023ರ ಕಲಂ 94ರಡಿಯಲ್ಲಿ 2 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಆದ್ದರಿಂದ ತೊರೆದು ಹೋದ ಮಗುವಿನ ಬಗ್ಗೆ ಮಾಹಿತಿಯನ್ನು ಹೊಂದಿರುವವರು, ತತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ತುರ್ತು ಸಹಾಯವಾಣಿ-112 ಅಥವಾ ಮಕ್ಕಳ ಸಹಾಯವಾಣಿ-1098ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು.
ಬೇಡವಾದ ಮಗುವನ್ನು ಎಲ್ಲೆಂದರೆಲ್ಲಿ ತೊರೆದು ಹೋಗಿ ಶಿಕ್ಷೆಗೆ ಗುರಿಯಾಗದೆ, ಅಂತಹ ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಪಡಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್