ಬಳ್ಳಾರಿ : 2030ರ ವೇಳೆಗೆ ಜಿಲ್ಲೆಯನ್ನು ಮಲೇರಿಯಾ ಮುಕ್ತವಾಗಿಸಲು ಆರೋಗ್ಯ ಇಲಾಖೆ ಸಂಕಲ್ಪ
ಬಳ್ಳಾರಿ, 30 ಏಪ್ರಿಲ್ (ಹಿ.ಸ.) : ಆ್ಯಂಕರ್ : ಜಿಲ್ಲೆಯನ್ನು 2030ರ ವೇಳೆಗೆ ಮಲೇರಿಯಾ ಮುಕ್ತವಾಗಿಸಲು ಆರೋಗ್ಯ ಇಲಾಖೆ ಸಂಕಲ್ಪ ಹೊಂದಲಾಗಿದೆ. ಮಲೇರಿಯಾ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜಿಲ್ಲೆಯ ಜನತೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಅವರ
ಬಳ್ಳಾರಿ : 2030ರ ವೇಳೆಗೆ ಜಿಲ್ಲೆಯನ್ನು ಮಲೇರಿಯಾ ಮುಕ್ತವಾಗಿಸಲು ಆರೋಗ್ಯ ಇಲಾಖೆ ಸಂಕಲ್ಪ


ಬಳ್ಳಾರಿ, 30 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯನ್ನು 2030ರ ವೇಳೆಗೆ ಮಲೇರಿಯಾ ಮುಕ್ತವಾಗಿಸಲು ಆರೋಗ್ಯ ಇಲಾಖೆ ಸಂಕಲ್ಪ ಹೊಂದಲಾಗಿದೆ. ಮಲೇರಿಯಾ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜಿಲ್ಲೆಯ ಜನತೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.

“ಮಲೇರಿಯಾವನ್ನು ಅಂತ್ಯಗೊಳಿಸಲು ಸಂಕಲ್ಪ ಮಾಡೋಣ: ನಮಗಿದು ಸಾಧ್ಯವಿದೆ. ನಾವು ಇದನ್ನು ಮಾಡಬೇಕು” ಎಂಬ ಘೋಷವಾಕ್ಯದೊಂದಿಗೆ ವಿಶ್ವ ಮಲೇರಿಯಾ ದಿನವನ್ನು ಜಿಲ್ಲೆಯಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ.

ಬಳ್ಳಾರಿ ಜಿಲ್ಲೆಯು ಮಲೇರಿಯಾ ನಿಯಂತ್ರಣದಲ್ಲಿ ರಾಜ್ಯದಲ್ಲೇ ಮಾದರಿ ಸಾಧನೆ ಮಾಡಿದೆ. 2015 ರಿಂದ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಅತ್ಯಲ್ಪ ಸಂಖ್ಯೆಯಲ್ಲಿದ್ದು, ಕಳೆದ ಮೂರು ವರ್ಷಗಳಿಂದ ಶೂನ್ಯ ಸ್ಥಳೀಯ ಮಲೇರಿಯಾ ಪ್ರಕರಣಗಳನ್ನು ದಾಖಲಿಸುವ ಮೂಲಕ ಜಿಲ್ಲೆಯು ಮೈಲಿಗಲ್ಲು ಸಾಧಿಸಿದೆ ಎಂದು ಹೇಳಿದ್ದಾರೆ.

2027ರ ವೇಳೆಗೆ ಸ್ಥಳೀಯ ಪ್ರಕರಣಗಳನ್ನು ಸಂಪೂರ್ಣ ಶೂನ್ಯಗೊಳಿಸಿ, 2030ರ ವೇಳೆಗೆ ಜಿಲ್ಲೆಯನ್ನು ಸಂಪೂರ್ಣ ಮಲೇರಿಯಾ ಮುಕ್ತವಾಗಿಸುವ ಗುರಿಯನ್ನು ಇಲಾಖೆ ಹೊಂದಿದೆ ಎಂದಿದ್ದಾರೆ.

ಸಾರ್ವಜನಿಕರಿಗೆ ಸೂಚನೆಗಳು:

ಮಲೇರಿಯಾವು ಪ್ಲಾಸ್ಮೋಡಿಯಂ ಪರಾವಲಂಬಿಗಳಿಂದ ಬರುವ ಕಾಯಿಲೆಯಾಗಿದ್ದು, ಹೆಣ್ಣು ಅನಾಫಿಲೀಸ್ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಇದನ್ನು ತಡೆಗಟ್ಟಲು ಸಾರ್ವಜನಿಕರು ಅಗತ್ಯ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ತಿಳಿಸಿದ್ದಾರೆ.

ಶೀಘ್ರ ಪತ್ತೆ ಮತ್ತು ಚಿಕಿತ್ಸೆ: ಜ್ವರ ಬಂದ ತಕ್ಷಣ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿರುವ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಸಂಪೂರ್ಣ ಚಿಕಿತ್ಸೆ ಪಡೆಯಿರಿ.

ಸೊಳ್ಳೆ ಉತ್ಪತ್ತಿ ತಡೆಗಟ್ಟಿ: ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಿ. ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ಸಮುದಾಯದ ಸಹಭಾಗಿತ್ವ ಅತ್ಯಗತ್ಯ.

ಕೀಟನಾಶಕ ಸಿಂಪಡಣೆ: ಆರೋಗ್ಯ ಇಲಾಖೆಯ ವತಿಯಿಂದ ಕೈಗೊಳ್ಳಲಾಗುವ ಒಳಾಂಗಣ ಕೀಟನಾಶಕ ಸಿಂಪಡಣಾ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು.

ವೈಯಕ್ತಿಕ ರಕ್ಷಣೆ: ಕೀಟನಾಶಕ ಸಂಸ್ಕರಿಸಿದ ಸೊಳ್ಳೆ ಪರದೆಗಳನ್ನು ಬಳಸಿ. ಸೊಳ್ಳೆ ನಿವಾರಕಗಳು ಮತ್ತು ವಿವಿಧ ಸ್ವಯಂ ರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೊಳ್ಳೆ ಕಡಿತದಿಂದ ಪಾರಾಗಿ ಎಂದು ಹೇಳಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಇಂದಿನ ದಿನಗಳಲ್ಲಿ ಮಲೇರಿಯಾ ನಿರ್ಮೂಲನೆ ಕಷ್ಟವೇನಲ್ಲ. ಲಸಿಕೆಗಳು, ಸುಧಾರಿತ ಚಿಕಿತ್ಸೆ ಮತ್ತು ಸಮುದಾಯದ ಜಾಗೃತಿ ಇದ್ದರೆ ನಮ್ಮ ಜೀವಿತಾವಧಿಯಲ್ಲೇ ಮಲೇರಿಯಾವನ್ನು ಕೊನೆಗಾಣಿಸಬಹುದು. ಸಣ್ಣ ಕಡಿತವು ಭಾರಿ ಪರಿಣಾಮ ಬೀರಬಲ್ಲದು, ಹಾಗಾಗಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು.

ಈ ವರ್ಷದ ಅಭಿಯಾನವು ರಾಜಕೀಯ ಇಚ್ಛಾಶಕ್ತಿ, ಆರ್ಥಿಕ ಹೂಡಿಕೆ ಮತ್ತು ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಒತ್ತು ನೀಡಿದೆ. ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ 2030ರ ಮಲೇರಿಯಾ ಮುಕ್ತ ಗುರಿಯನ್ನು ತಲುಪಲು ಸಹಕರಿಸಬೇಕು ಎಂದು ಡಾ.ಯಲ್ಲಾ ರಮೇಶ್ ಬಾಬು ಅವರು ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande