

ಕೊಪ್ಪಳ, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಷ್ಟಿಯ ಹಸ್ತಪ್ರತಿ ಸಮೀಕ್ಷೆಯು ಮಾರ್ಚ್ನಲ್ಲಿ ಆರಂಭವಾಗಿದ್ದು ಮೇ 2026 ರವರೆಗೆ ನಡೆಯಲಿದೆ. ಸಮೀಕ್ಷೆಯ ಸಮರ್ಪಕ ಜಾರಿಗೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ದೇಶದಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು ಹಾಗೂ ಐತಿಹಾಸಿಕ ದಾಖಲೆಗಳನ್ನು ಸಂರಕ್ಷಿಸಿ ಡಿಜಿಟಲೀಕರಣ ಮಾಡುವ ಮಹತ್ತರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಶಾಶ್ವತವಾಗಿ ಉಳಿಸುವುದರ ಜೊತೆಗೆ ಸಾರ್ವಜನಿಕರಿಗೆ ಒಂದೇ ರಾಷ್ಟಿçÃಯ ವೇದಿಕೆಯ ಮೂಲಕ ಪ್ರವೇಶ ಕಲ್ಪಿಸುವುದಾಗಿದೆ. ಈ ಯೋಜನೆಯಡಿ ಹಸ್ತಪ್ರತಿಗಳ ಸಮೀಕ್ಷೆ, ಸಂರಕ್ಷಣೆ, ರಕ್ಷಣೆ, ಡಿಜಿಟಲೀಕರಣ, ನೋಂದಣಿ, ವಿಮರ್ಶಾತ್ಮಕ ಸಂಪಾದನೆ ಮತ್ತು ಪ್ರಕಟಣೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮೂಲಕ ದೇಶದಾದ್ಯಂತ ಇರುವ ಹಸ್ತಪ್ರತಿಗಳ ಮಾಹಿತಿಯನ್ನು ಅಪ್ಲೋಡ್ ಮಾಡಿ, ರಾಷ್ಟಿಯ ಹಸ್ತಪ್ರತಿ ಭಂಡಾರದಲ್ಲಿ ಸಂಗ್ರಹಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಹಂಚಿಕೊಳ್ಳುವ ಯೋಜನೆ ರೂಪಿಸಲಾಗಿದೆ. ಕೇಂದ್ರ ಸಂಸ್ಕೃತಿ ಮಂತ್ರಾಲಯದ ಮಾರ್ಗದರ್ಶನದಂತೆ, ಜಿಲ್ಲಾ ಮಟ್ಟದಲ್ಲಿ ಹಸ್ತಪ್ರತಿಗಳ ಸಮೀಕ್ಷೆ ಕಾರ್ಯಕ್ಕೆ ಹೆಚ್ಚಿನ ಪ್ರಚಾರ ಮತ್ತು ಜಾಗೃತಿ ಮೂಡಿಸಲು ಸೂಚನೆ ನೀಡಲಾಗಿದೆ. ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲಿನ ಹಸ್ತಪ್ರತಿಗಳ ಸಂಗ್ರಹಣೆಗೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಎಂದು ಅವರು ಹೇಳಿದರು.
ಅಧಿಕಾರಿಗಳು ಗ್ರಂಥಾಲಯಗಳು, ದೇವಾಲಯಗಳು, ಮಠಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ಸಂಗ್ರಹಗಳಲ್ಲಿ ಹಸ್ತಪ್ರತಿಗಳ ಗುರುತುಪಡಿಸುವಿಕೆ, ಸಂಗ್ರಹ ಸ್ಥಳಗಳಿಗೆ ಪ್ರವೇಶ ಕಲ್ಪಿಸಿ ಸಮೀಕ್ಷೆಗೆ ಸಹಕಾರ ಒದಗಿಸಬೇಕು. ದಾಖಲೀಕರಣ ಮತ್ತು ಪಟ್ಟಿಮಾಡುವಿಕೆ ಕಾರ್ಯಗಳಿಗೆ ಸಹಾಯ, ಸ್ಥಳೀಯ ಸಂಸ್ಥೆಗಳು ಹಾಗೂ ಸಂರಕ್ಷಕರಲ್ಲಿ ಜಾಗೃತಿ ಮೂಡಿಸುವಿಕೆ, ನಿಯಮಿತ ಪ್ರಗತಿ ವರದಿ ಸಲ್ಲಿಕೆ, ಅಗತ್ಯ ಆಡಳಿತಾತ್ಮಕ ಮತ್ತು ಲಾಜಿಸ್ಟಿಕ್ ಬೆಂಬಲ ಒದಗಿಸಬೇಕು. ತಂತ್ರಜ್ಞಾನ ಆಧಾರಿತ ವಿಧಾನದಲ್ಲಿ ಸಮೀಕ್ಷೆ ನಡೆಯಲಿದ್ದು, ದತ್ತಾಂಶದ ಗುಣಮಟ್ಟ ಮತ್ತು ನಕಲಿ ನಿವಾರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಸಂಗ್ರಹ ನಕ್ಷೆಗೊಳಿಸುವಿಕೆ, ಕ್ಷೇತ್ರ ಸಮೀಕ್ಷೆ, ಮೆಟಾಡೇಟಾ ದಾಖಲಾತಿ, ಡಿಜಿಟಲ್ ಅಪ್ಲೋಡ್ ಹಾಗೂ ಪರಿಶೀಲನೆ ಹಂತಗಳನ್ನು ಒಳಗೊಂಡಿದೆ. ಡಿಜಿಟಲ್ ಸೌಲಭ್ಯಗಳ ಕೊರತೆಯಿರುವ ಪ್ರದೇಶಗಳಲ್ಲಿ ಕೈಪಿಡಿ ಸಮೀಕ್ಷೆಯನ್ನೂ ನಡೆಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಮೀಕ್ಷೆಯು ಮಾರ್ಚ್ 2026ರಿಂದ ಆರಂಭವಾಗಿದ್ದು, ಮೇ 2026 ರವರೆಗೆ ಮೂರು ತಿಂಗಳ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದರ ಫಲವಾಗಿ ರಾಜ್ಯವಾರು ಸಮಗ್ರ ಹಸ್ತಪ್ರತಿ ದತ್ತಾಂಶ ಭಂಡಾರ ನಿರ್ಮಾಣವಾಗುವುದರ ಜೊತೆಗೆ ಅಪರೂಪದ ಮತ್ತು ಅಪಾಯದಲ್ಲಿರುವ ಹಸ್ತಪ್ರತಿಗಳ ಗುರುತಿಸುವಿಕೆ ಸಾಧ್ಯವಾಗಲಿದೆ. ಜೊತೆಗೆ ಜಿಐಎಸ್ ಆಧಾರಿತ ರಾಷ್ಟಿಯ ಹಸ್ತಪ್ರತಿ ನಕ್ಷೆ ಅಭಿವೃದ್ಧಿಯಾಗಲಿದ್ದು, ಸಂರಕ್ಷಣೆಯಲ್ಲಿ ಸಂಸ್ಥೆಗಳು ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಪುರಾತತ್ವ ಇಲಾಖೆಯ ಉಪನಿರ್ದೇಶಕ ಶ್ರೀಜೇಶ್ವರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಆನೆಗುಂದಿಯ ರಾಜ ವಂಶಸ್ಥರಾದ ಶ್ರೀಕೃಷ್ಣ ದೇವರಾಯ, ವಿದ್ವಾನ್ ಶಿವರಾಮ್ ಕೃಷ್ಣಾನಂದ್ ಸ್ವಾಮೀಜಿ, ವಿದ್ವಾನ್ ಪ್ರಾಣೇಶಾಚಾರ್, ಕೊಪ್ಪಳ ಕ್ಲಸ್ಟರ್ ಕೇಂದ್ರದ ಸಂಯೋಜಕ ಪ್ರಮೋದ್ ಆಚಾರ್ಯ ಪೂಜಾರ್, ಗಂಗಾವತಿಯ ಪ್ರಾಚಾರ್ಯರು ಮತ್ತು ಇತಿಹಾಸ ಸಂಶೋಧಕರಾದ ಡಾ.ಶರಣಬಸಪ್ಪ ಕೋಲ್ಕಾರ್, ಡಾ.ರವಿ ಚವ್ಹಾಣ, ಕೊಪ್ಪಳದ ಉಪನ್ಯಾಸಕರು ಹಾಗೂ ಇತಿಹಾಸ ಸಂಶೋಧಕರಾದ ಡಾ.ಸಿದ್ದಲಿಂಗಪ್ಪ ಕೋಟ್ನೆಕಲ್, ಕನಕಗಿರಿ ಇತಿಹಾಸ ಸಂಶೋಧಕರಾದ ಡಾ.ಗೀತಾ ಪಾಟೀಲ್, ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್