
ಬೆಂಗಳೂರು, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಗಂಭೀರವಾಗಿ ಹದಗೆಟ್ಟಿದೆ ಎಂದು ಆರೋಪಿಸಿರುವ ಬಿಜೆಪಿ ಕರ್ನಾಟಕ ಘಟಕ, ಬಡವರಿಗಾಗಿ ಇರುವ ಆಸ್ಪತ್ರೆಗಳು ‘ಐಸಿಯು’ ಸ್ಥಿತಿಗೆ ತಲುಪಿವೆ ಎಂದು ತೀವ್ರ ಟೀಕೆ ವ್ಯಕ್ತಪಡಿಸಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ, ಔಷಧಿಗಳ ಕೊರತೆ, ರೋಗಿಗಳಿಗೆ ಸೂಕ್ತ ಹಾಸಿಗೆಗಳ ಅಭಾವ ಹಾಗೂ ವೈದ್ಯರ ಕೊರತೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಟೀಕಿಸಿರುವ ಬಿಜೆಪಿ, “ಬಜೆಟ್ನಲ್ಲಿ ಹೊಸ ಆಸ್ಪತ್ರೆಗಳ ಘೋಷಣೆ ಮಾಡುವುದರಲ್ಲೇ ಸರ್ಕಾರ ತಲ್ಲೀನವಾಗಿದೆ” ಎಂದು ಆರೋಪಿಸಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಉದ್ದೇಶಿಸಿ, ಬಡವರ ಜೀವದೊಂದಿಗೆ ನಿರ್ಲಕ್ಷ್ಯ ತೋರಿಸಲಾಗುತ್ತಿದೆ ಎಂದು ಹೇಳಿರುವ ಬಿಜೆಪಿ, ಮೂಲಸೌಕರ್ಯ ಒದಗಿಸಲು ವಿಫಲವಾದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದೆ.
ಈ ಆರೋಪಗಳನ್ನು ಒಳಗೊಂಡ ವ್ಯಂಗ್ಯಚಿತ್ರವನ್ನೂ ಬಿಜೆಪಿ ತನ್ನ ಪೋಸ್ಟ್ನಲ್ಲಿ ಹಂಚಿಕೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa