


ಕೊಪ್ಪಳ, 21 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನಗರಸಭೆ ಆವರಣದ ಬಲ್ಡೋಟ ತೊಲಗಿಸಿ ಧರಣಿ 173ನೇ ದಿನ ಪೂರೈಸಿತು. ಹೋರಾಟಕ್ಕೆ ಬೆಂಬಲಿಸಿದ ಭಾರತೀಯ ಕ್ರಾಂತಿಕಾರಿ ಕಿಸಾನ ಸಭಾ ಅಧ್ಯಕ್ಷ ಎಂ.ಎನ್. ಕುಕನೂರು ಮಾತನಾಡಿ, ತುಂಗಭದ್ರಾ ಜಲಾಶಯ ಹಿನ್ನೀರಿನ ಪುನರ್ವಸತಿ ಗ್ರಾಮಗಳು ವಿಷಾನಿಲ ಉಗುಳುವ ಕಾರ್ಖಾನೆಗಳಿಂದ ಮತ್ತೊಮ್ಮೆ ಸಂತ್ರಸ್ತವಾಗುತ್ತಿವೆ. ಜಲಾಶಯದಲ್ಲಿ ಮುಳುಗಡೆಯಾದಾಗ ತಮ್ಮ ಬದುಕು ಕಳೆದುಕೊಂಡು ಸರ್ಕಾರ ಪುನರ್ವಸತಿ ಕಲ್ಪಿಸಿದ ಜಾಗದಲ್ಲಿ ಜೀವನ ಕಟ್ಟಿಕೊಂಡ ಈ 22 ಹಳ್ಳಿಗಳು ಪುನಃ ಸಂತ್ರಸ್ತವಾಗುವುದೆಂದರೆ ಏನರ್ಥ. ಈಗ ಇವರ ಕೃಷಿ, ಜೀವ, ಆರೋಗ್ಯ ಅಪಾಯಕ್ಕೆ ಸಿಲುಕಿದೆ. ಇದರ ಹೊಣೆ ಯಾವ ಸರ್ಕಾರ ಹೊತ್ತುಕೊಳ್ಳುತ್ತದೆ? ಈ ಜನರ ಜೀವ ಹೋಗುವಾಗ 'ಇಲಿಗೆ ಪ್ರಾಣ ಸಂಕಟವಾದರೆ ಬೆಕ್ಕಿಗೆ ಚೆಲ್ಲಾಟ ಎನ್ನುವಂತೆ' ಕಾರ್ಖಾನೆಗಳು ಮತ್ತಷ್ಟು ವಿಸ್ತರಣೆ ಬಯಸಿ ತಮ್ಮನ್ನು ಯಾರೂ ತಡೆಯಲಾರರು ಎನ್ನೂವಂತೆ ನಡೆದುಕೊಳ್ಳುತ್ತಿವೆ. ಇವುಗಳನ್ನು ಬೇಸತ್ತ ಜನರು ಓಡಿಸುತ್ತಾರೆ. ಅಲ್ಲಿಯವರೆಗೆ ಈ ಹೋರಾಟ ಮುಂದುವರಿಯಲಿ. ನಾವು ರಾಜ್ಯ ಮಟ್ಪದಲ್ಲಿ ಧ್ವನಿ ಎತ್ತುತ್ತೇವೆ. ಜಿಲ್ಲಾ ಬಂದ್ ಕರೆಯುತ್ತೇವೆ ಎಂದರು.
ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಗುರುವಾರ ಎ. 23ರಂದು ಧರಣಿ 175ನೇ ದಿನ ತಲುಪುತ್ತದೆ. ಅಂದು ಧರಣಿ ಸ್ಥಳದಲ್ಲಿ ವಿಶೇಷ ಸಮಾವೇಶ ಜರುಗಿಸಿ ಮುಂದಿನ ಹಂತದಲ್ಲಿ ತೀವ್ರತರದ ಹೋರಾಟ ರೂಪಿಸಲು ತೀರ್ಮಾನ ತೆಗೆದುಕೊಳ್ಳಲಾಗುವುದು. ಆ ದಿನ ವಿಶೇಷ ಅತಿಥಿಯಾಗಿ ನಾಡಿನ ಖ್ಯಾತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕುಂ. ವೀರಭದ್ರಪ್ಪ, ಆಳಂದ ವಿರಕ್ತ ಮಠದ ಶ್ರೀ ಕೋರಣೇಶ್ವರ ಸ್ವಾಮಿಗಳು, ಧಾರವಾಡ ನಿವಾಸಿ ಮಹಿಳಾ ಪರ ಅಂಕಣಕಾರ್ತಿ ಶಾರದಾ ಗೋಪಾಲ್ ಅವರು ಆಗಮಿಸಿ, ಬಾಧಿತ ಹಿರೇಬಗನಾಳ ಮುಂತಾದ ಹಳ್ಳಿಗಳಿಗೆ ಭೇಟಿ ನೀಡಿ ಬಂದು ಧರಣಿಗೆ ಬೆಂಬಲಿಸಿ ಮಾತನಾಡುವರು. ಅಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಕೊಪ್ಪಳ-ಭಾಗ್ಯನಗರ ನಾಗರಿಕರು, ಬಾಧಿತ ಗ್ರಾಮಗಳ ರೈತರು ಧರಣಿ ಸ್ಥಳಕ್ಕೆ ಬಂದು ಸಮಾವೇಶಕ್ಕೆ ಬರಬೇಕೆಂದು ಕೋರಿಕೊಂಡರು. ಭಾ.ಕ್ರಾ.ಕಿ.ಸೇನಾ ಮುಖಂಡರಾದ ಹನುಮಪ್ಪ ನಾಗರಾಳ, ಪಿಡ್ಠನಗೌಡ ಮಾಲಿಪಾಟೀಲ್ ಮಾತನಾಡಿದರು.
ಧರಣಿಯಲ್ಲಿ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಶಂಭುಲಿಂಗಪ್ಪ ಹರಗೇರಿ, ಎಲ್. ಎಫ್. ಪಾಟೀಲ್, ರವಿ ಕಾಂತನವರ, ರಾಜಶೇಖರ ಏಳುಬಾವಿ, ಹನುಮನಗೌಡ ಮಾಲಿಪಾಟೀಲ, ಆನಂದ ಗುಡದೂರು, ಮಂಜುನಾಥ ನರಸಾಪುರ, ಮಾರುತಿ ಬಿಂಗಿ, ಕಾಸೀಮಸಾಬ ಹಿರೇಮನಿ, ದುರುಗಪ್ಪ ಕಲ್ಲೂರು, ರಮೇಶ ಪೂಜಾರಿ, ಪ್ರವೀಣ ವಡ್ಡರ್, ಕನಕಪ್ಪ ವಾಲ್ಮೀಕಿ, ದ್ಯಾಭಣ್ಣ ಕಲ್ಲೂರು, ಎಸ್.ಎಂ.ಅಜ್ಮೀರ್, ಹನುಮಂತ ಬೇವುರು, ಸದಾಶಿವ ಪಾಟೀಲ, ಗಾಳೆಪ್ಪ ಪೂಜಾರ, ಗಂಗಮ್ಮ ಕುರುಗೋಡು, ರತ್ನಮ್ಮ ದೊಡ್ಡಮನಿ, ವಿಜಯಮಹಾಂತೇಶ ಹಟ್ಟಿ, ಮಹಾದೇವಪ್ಪ ಮಾವಿನಮಡು, ಶಿವಪ್ಪ ಹಲಗೇರಿ, ಮಂಜುನಾಥ ಕವಲೂರು, ನಾಗರಾಜ ಕುಷ್ಟಗಿ, ಶಿವಪ್ಪ ಜಲ್ಲಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್