ಕೋಲ್ಕತ್ತಾದಲ್ಲಿ ಟಿಎಂಸಿ ಅಭ್ಯರ್ಥಿಗಳ ಮನೆ ಮೇಲೆ ಐಟಿ,ಇಡಿ ದಾಳಿ
ಕೋಲ್ಕತ್ತಾ, 17 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಡುವೆಯೇ ಕೋಲ್ಕತ್ತಾದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ದಾಳಿ ಮುಂದುವರಿದಿದೆ. ಜಾರಿ ನಿರ್ದೇಶನಾಲಯ (ಇಡಿ) ರಿಯಲ್ ಎಸ್ಟೇಟ್ ಹಾಗೂ ನಿರ್ಮಾಣ ಕಂಪನಿಗಳ ಮೇಲೆ ಶೋಧ ನಡೆಸಿದರೆ, ಆದಾಯ ತೆರಿಗೆ ಇಲಾಖೆ ತೃಣಮೂಲ ಕಾಂಗ್ರೆಸ
ED


ಕೋಲ್ಕತ್ತಾ, 17 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಡುವೆಯೇ ಕೋಲ್ಕತ್ತಾದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ದಾಳಿ ಮುಂದುವರಿದಿದೆ. ಜಾರಿ ನಿರ್ದೇಶನಾಲಯ (ಇಡಿ) ರಿಯಲ್ ಎಸ್ಟೇಟ್ ಹಾಗೂ ನಿರ್ಮಾಣ ಕಂಪನಿಗಳ ಮೇಲೆ ಶೋಧ ನಡೆಸಿದರೆ, ಆದಾಯ ತೆರಿಗೆ ಇಲಾಖೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ದೇಬಾಶಿಶ್ ಕುಮಾರ್ ಅವರ ಮನೆ ಸೇರಿ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದೆ.

ಶುಕ್ರವಾರ ಬೆಳಗ್ಗೆ ಸಿಜಿಒ ಸಂಕೀರ್ಣದಿಂದ ಹೊರಟ ಹಲವು ಇಡಿ ತಂಡಗಳು ಕೇಂದ್ರ ಭದ್ರತಾ ಪಡೆಗಳೊಂದಿಗೆ ಕೋಲ್ಕತ್ತಾ ಹಾಗೂ ಸಾಲ್ಟ್ ಲೇಕ್ನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಶೋಧ ಕಾರ್ಯಾಚರಣೆ ಆರಂಭಿಸಿವೆ.

ಇಡಿ ಅಧಿಕಾರಿಗಳು ರಿಯಲ್ ಎಸ್ಟೇಟ್ ಕಂಪನಿಯ ಕಚೇರಿಗಳ ಜೊತೆಗೆ ಮತ್ತೊಂದು ನಿರ್ಮಾಣ ಕಂಪನಿಯ ಕಚೇರಿಗಳ ಮೇಲೂ ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ, ಈ ಶೋಧ ಕಾರ್ಯಾಚರಣೆ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದ್ದು, ಚುನಾವಣೆಗೆ ಮುನ್ನ ಅಕ್ರಮ ಹಣಕಾಸು ವಹಿವಾಟುಗಳನ್ನು ಪತ್ತೆಹಚ್ಚುವುದು ಮತ್ತು ಭೂ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಕೆಲವು ದಿನಗಳ ಹಿಂದೆಯೂ ಇದೇ ನಿರ್ಮಾಣ ಕಂಪನಿಗೆ ಸಂಬಂಧಿಸಿದ ಮನೆಗಳು, ಫ್ಲ್ಯಾಟ್ಗಳು ಮತ್ತು ಕಚೇರಿಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ಆದಾಯ ತೆರಿಗೆ ಇಲಾಖೆ ಶುಕ್ರವಾರ ಬೆಳಗ್ಗೆ ರಾಸ್ಬೆಹರಿ ಕ್ಷೇತ್ರದ ತೃಣಮೂಲ ಅಭ್ಯರ್ಥಿ ಹಾಗೂ ಹಾಲಿ ಶಾಸಕ ದೇಬಾಶಿಶ್ ಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿದೆ.

ಮನೋಹರ್ಪುಕೂರ್ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ತಲುಪಿದ ಐಟಿ ಅಧಿಕಾರಿಗಳು, ಅಲ್ಲಿನ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅವರ ಮನೆ ಮಾತ್ರವಲ್ಲದೆ, ಮನೋಹರ್ಪುಕೂರ್ ರಸ್ತೆಯಲ್ಲಿರುವ ಚುನಾವಣಾ ಕಚೇರಿ ಮತ್ತು ಮೋತಿಲಾಲ್ ನೆಹರು ರಸ್ತೆಯಲ್ಲಿರುವ ಮತ್ತೊಂದು ಕಚೇರಿಯ ಮೇಲೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಚುನಾವಣೆಗೆ ಮುನ್ನ ಕೇಂದ್ರ ಸಂಸ್ಥೆಗಳು ದ್ವಂದ್ವ ದಾಳಿ ನಡೆಸುತ್ತಿರುವುದನ್ನು ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪ್ರಶ್ನಿಸಿದೆ. ಕೇಂದ್ರ ಸರ್ಕಾರ ರಾಜಕೀಯ ಉದ್ದೇಶದಿಂದ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಪಕ್ಷದ ನಾಯಕರು ಆರೋಪಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande