
ನವದೆಹಲಿ, 31 ಮಾರ್ಚ್ (ಹಿ.ಸ.):
ಆ್ಯಂಕರ್:
ಸುರಿನಾಮ್ನ ಮಾಜಿ ಅಧ್ಯಕ್ಷ ಚಂದ್ರಿಕಾ ಪ್ರಸಾದ್ ಸಂತೋಖಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. ಇದು ಸುರಿನಾಮ್ಗೆ ಮಾತ್ರವಲ್ಲದೆ ಜಾಗತಿಕ ಭಾರತೀಯ ವಲಸಿಗ ಸಮುದಾಯಕ್ಕೂ ತುಂಬಲಾಗದ ನಷ್ಟ ಎಂದು ಅವರು ಹೇಳಿದ್ದಾರೆ.
ಪ್ರಧಾನಿಯವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ, ಸಂತೋಖಿ ತಮ್ಮ ಆಪ್ತ ಸ್ನೇಹಿತರಾಗಿದ್ದು, ಅವರೊಂದಿಗಿನ ಭೇಟಿಯ ನೆನಪುಗಳು ಸದಾ ಜೀವಂತವಾಗಿರುತ್ತವೆ ಎಂದು ತಿಳಿಸಿದ್ದಾರೆ. ಸುರಿನಾಮ್ ದೇಶದ ಸೇವೆಗೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಭಾರತ–ಸುರಿನಾಮ್ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಸಂತೋಖಿ ಭಾರತೀಯ ಸಂಸ್ಕೃತಿಯ ಮೇಲೆ ಅಪಾರ ಒಲವು ಹೊಂದಿದ್ದು, ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅನೇಕ ಜನರ ಮನ ಗೆದ್ದಿದ್ದರು ಎಂದು ಪ್ರಧಾನಿಯವರು ಸ್ಮರಿಸಿದ್ದಾರೆ. ಈ ಮೂಲಕ ಅವರು ಭಾರತೀಯ ಮೂಲದ ವಲಸಿಗ ಸಮುದಾಯದ ಹೆಮ್ಮೆಯ ನಾಯಕರಾಗಿದ್ದರು ಎಂದು ಹೇಳಿದ್ದಾರೆ.
ಈ ದುಃಖದ ಸಂದರ್ಭದಲ್ಲಿ ಸಂತೋಖಿ ಅವರ ಕುಟುಂಬ ಸದಸ್ಯರು ಹಾಗೂ ಸುರಿನಾಮ್ ದೇಶದ ಜನತೆಗೆ ಪ್ರಧಾನಿ ಮೋದಿ ತಮ್ಮ ಸಂತಾಪವನ್ನು ತಿಳಿಸಿ, ಅಗಲಿದ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಹಿನ್ನೆಲೆ: 1959ರ ಫೆಬ್ರವರಿ 3ರಂದು ಜನಿಸಿದ ಸಂತೋಖಿ, ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದು, ನಂತರ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. 2020ರಲ್ಲಿ ಸುರಿನಾಮ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವರು, ದೇಶದಲ್ಲಿ ಕಾನೂನು-ಸುವ್ಯವಸ್ಥೆ ಸುಧಾರಣೆ ಮತ್ತು ಆಡಳಿತಾತ್ಮಕ ಪಾರದರ್ಶಕತೆಗೆ ಒತ್ತು ನೀಡಿದರು. ಭಾರತ–ಸುರಿನಾಮ್ ಸಂಬಂಧಗಳನ್ನು ಬಲಪಡಿಸಲು ಅವರು ನಿರಂತರವಾಗಿ ಕೆಲಸ ಮಾಡಿದ್ದು, ಭಾರತೀಯ ಸಾಂಸ್ಕೃತಿಕ ಪರಂಪರೆಯ ಮೇಲೆ ವಿಶೇಷ ಆಸಕ್ತಿ ತೋರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa