
ಬೆಂಗಳೂರು, 31 ಮಾರ್ಚ್ (ಹಿ.ಸ.):
ಆ್ಯಂಕರ್:
ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಹೆದ್ದಾರಿ ಟೋಲ್ ದರ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಕೇಂದ್ರದ ಭಾರತೀಯ ಜನತಾ ಪಕ್ಷ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಇದು ಜನಸಾಮಾನ್ಯರ ಮೇಲೆ ಬೀಳುತ್ತಿರುವ ಬೆಲೆ ಏರಿಕೆಯ ಶಾಪ” ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುರ್ಜೆವಾಲಾ , “ಏಪ್ರಿಲ್ 1ರಿಂದ ಪ್ರಾರಂಭವಾಗುವ ಟೋಲ್ ದರ ಏರಿಕೆ ಜನರ ಜೇಬಿಗೆ ನೇರ ಹೊಡೆತ. ಇದು ‘ಹೆದ್ದಾರಿ ದರೋಡೆ’ ಹಾಗೂ ಜನಸಾಮಾನ್ಯರ ಹಣದ ಕಳ್ಳತನಕ್ಕೆ ಸಮಾನ” ಎಂದು ಹೇಳಿದ್ದಾರೆ. ಈ ಕ್ರಮದ ಮೂಲಕ ಶ್ರಮಜೀವಿಗಳು ಮತ್ತು ಮಧ್ಯಮ ವರ್ಗದ ಜನರನ್ನು ಆರ್ಥಿಕವಾಗಿ ಕುಗ್ಗಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಅವರು ನೀಡಿದ ಅಂಕಿ-ಅಂಶಗಳ ಪ್ರಕಾರ, 2019-20ರಿಂದ ಕರ್ನಾಟಕ ಒಂದರಲ್ಲೇ ಟೋಲ್ ತೆರಿಗೆ ಮೂಲಕ ಸುಮಾರು ₹23,000 ಕೋಟಿ ಸಂಗ್ರಹಿಸಲಾಗಿದೆ. ಇದೀಗ ಹೊಸದಾಗಿ 5% ಟೋಲ್ ದರ ಏರಿಕೆ ಜಾರಿಗೆ ಬಂದರೆ, ರಾಜ್ಯದ ಜನರ ಮೇಲೆ ಹೆಚ್ಚುವರಿ ₹250 ಕೋಟಿ ಹೊರೆ ಬೀಳಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನೀತಿಯನ್ನು ಟೀಕಿಸಿದ ಅವರು, “ಜನರ ಹಣವನ್ನು ಲೂಟಿ ಮಾಡಲು ಟೋಲ್ ದರ ಏರಿಕೆ ಒಂದು ಸಾಧನವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದಕ್ಕೆ ಉತ್ತರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa