
ಕೊಪ್ಪಳ, 28 ಮಾರ್ಚ್ (ಹಿ.ಸ.)
ಆ್ಯಂಕರ್: ನಾಗರಿಕ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಜೆಡಿಎಸ್ ಪಕ್ಷದ ನಿಯೋಗವು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿತು.
ಮುಖ್ಯ ರಸ್ತೆಗಳಲ್ಲಿ ನೆರಳಿನ ಪರದೇ ಅಳವಡಿಸುವುದು, ಗವಿಮಠದ ಕೆರೆ ಪಕ್ಕದಲ್ಲಿ ರುದ್ರಭೂಮಿ, ಕುಣಕೇರಿ, ಹಾಲವರ್ತಿ, ಹೂವಿನಾಳ, ಕುಣಿಕೇರಿ ತಾಂಡಾ ಗ್ರಾಮಗಳಿಗೆ ಹೋಗುವ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸುವುದು, ಗಂಗಾವತಿ-ಹೊಸಪೇಟೆ ರಸ್ತೆ, ಕುಷ್ಟಗಿ ರಸ್ತೆ, ಲೇಬರ್ ಸರ್ಕಲ್, ಭಾಗ್ಯನಗರ ರಸ್ತೆ, ಗಡಿಯಾರ ಕಂಬ, ಸಿಂದೋಗಿ ರಸ್ತೆ, ಕುಣಿಕೇರಿ ಕ್ರಾಸ್ ರಸ್ತೆ ಪ್ರದೇಶಗಳಲ್ಲಿ ಬಸ್ ತಂಗುದಾಣ ನಿರ್ಮಾಣ, ಪಾರ್ಕ್ ನಿರ್ಮಾಣ,
ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ನಾಲೆ ವ್ಯವಸ್ಥೆ, ಚರಂಡಿಗಳ ಸ್ವಚ್ಛತೆ ಸೇರಿದಂತೆ ಇತರೆ ಕಾಮಗಾರಿಗಳನ್ನು ಈ ಕೂಡಲೇ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಮೂಲಭೂತ ಸೌಕರ್ಯಗಳು ಇಲ್ಲದೆ ಇರುವುದರಿಂದ ನಾಗರಿಕರಿಗೆ ತೀವ್ರ ತೊಂದರೆಯಾಗಿದೆ. ಇದನ್ನು ಜಿಲ್ಲಾಡಳಿತ ಕೂಡಲೇ ಗಮನಿಸಿ ಕಾರ್ಯ ಪ್ರವೃತ್ತವಾಗಬೇಕೆಂದು ಆಗ್ರಹಿಸಿದರು.
ಅಪರ ಜಿಲ್ಲಾಧಿಕಾರಿ ಸಿದ್ದರಾಮಯ್ಯ ಅವರು ಮನವಿ ಪತ್ರ ಸ್ವೀಕರಿಸಿ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪಕ್ಷದ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ ನೇತೃತ್ವದ ನಿಯೋಗದಲ್ಲಿ ಗೌರವ ಅಧ್ಯಕ್ಷಸಿದ್ದಪ್ಪ ಕವಲೂರು, ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಮುಖಂಡರಾದ ಮಂಜುನಾಥ ಅಳವoಡಿ ವದಗನಾಳ, ಮಹೇಶ್ ಕಂದಾರಿ, ಮಹಿಳಾ ನಗರ ಅಧ್ಯಕ್ಷೆ ನಿರ್ಮಲಾ ಮೇದಾರ, ನಗರ ಕಾನೂನು ಅಧ್ಯಕ್ಷ ಬಸವರಾಜ್ ಎಸ್, ನಗರ ಉಪಾಧ್ಯಕ್ಷರಾದ ಗಂಗಾಧರ ವಸ್ತ್ರದ್, ನಗರ ಪ್ರಧಾನ ಕಾರ್ಯದರ್ಶಿ ಸಿದ್ದೇಶ ಇಂಗಳದಾಳ, ನಗರ ಮಹಿಳಾ ವಿದ್ಯಾರ್ಥಿ ವಿಭಾಗ ಅಧ್ಯಕ್ಷ ಜಯಶ್ರೀ ಬಸವರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್