
ರಾಯಚೂರು, 26 ಮಾರ್ಚ್ (ಹಿ.ಸ.):
ಆ್ಯಂಕರ್ : ಭವಿಷ್ಯದಲ್ಲಿ ಹೆಣ್ಣು ಮಕ್ಕಳು ಗರ್ಭಕಂಠದ ಕ್ಯಾನ್ಸರ್ನಿಂದ ಬಳಲಬಾರದು. ಆದ್ದರಿಂದ ಸಂತಸದ ಜೀವನಕ್ಕಾಗಿ ಪ್ರಸ್ತುತ 14 ವರ್ಷದ ಹೆಣ್ಣು ಮಕ್ಕಳಿಗೆ ಪಾಲಕರು ಯಾವುದೆ ಹಿಂದೇಟು ಹಾಕದೆ ಹೆಚ್.ಪಿ.ವಿ ಲಸಿಕೆಯನ್ನು ಹಾಕಿಸಬೇಕು ಎಂದು ರಾಯಚೂರು ತಹಶೀಲ್ದಾರ ಸುರೇಶ ವರ್ಮಾ ಅವರು ಹೇಳಿದ್ದಾರೆ.
ನಗರದ ಡಿಹೆಚ್ಓ ಕಾರ್ಯಾಲಯದ ತುಂಗಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಮೂಲಕ ಹೆಚ್ಪಿವಿ ಲಸಿಕೆ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಲಸಿಕೆಯ ಬಗ್ಗೆ ತಪ್ಪು ಮಾಹಿತಿ, ಸುದ್ದಿಗಳಿಗೆ ಕಿವಿಗೊಡದೆ ಲಸಿಕೆ ಹಾಕಿಸಲು ಎಲ್ಲರೂ ಮುಂದೆ ಬರಬೇಕು. ಇದಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಶಿಕ್ಷಣ ಇಲಾಖೆ, ವಸತಿ ನಿಲಯಗಳನ್ನು ಹೊಂದಿರುವ ವಿವಿಧ ಕಲ್ಯಾಣ ಇಲಾಖೆಗಳು ಕೈಜೊಡಿಸಬೇಕು. ಸರಕಾರದ ಮಹತ್ವಾಕಾಂಕ್ಷಿ ಅಭಿಯಾನ ಯಶ ಕಾಣಬೇಕು ಎಂದರು.
ಯಾವುದೇ ಸರಕಾರ ಜನತೆಗೆ ಉತ್ತಮವಾದ, ದೀರ್ಘಾವಧಿಯಲ್ಲಿ ಸಮಾಜಕ್ಕೆ ಒಳ್ಳೆಯದಾಗುವ ಯೋಜನೆ ರೂಪಿಸುತ್ತವೆ. ಅದರಂತೆ ಪ್ರಸುತ್ತ 14 ವರ್ಷದ ಶಾಲಾ ಮಕ್ಕಳಿಗೆ ಹೆಚ್ಪಿವಿ ಲಸಿಕೆ ಹಾಕುವ ಉದ್ದೇಶವು ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವದಾಗಿದೆ. ಆದ್ದರಿಂದ ಶಾಲೆ, ಬಾಲಕಿಯರ ವಸತಿ ನಿಲಯಗಳಲ್ಲಿ ಈ ಕುರಿತು ತಿಳಿಸಿ ಸೂಕ್ತ ಕ್ರಿಯಾ ಯೋಜನೆ ರೂಪಿಸಿ ಕಾಲಮಿತಿಯಲ್ಲಿ ಅರ್ಹರಾದ ಎಲ್ಲ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದರು.
ಈ ವೇಳೆ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ನಂದೀತಾ ಎಮ್.ಎನ್. ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಡೆತಡೆ ಇಲ್ಲ. ಆದರೆ ನಗರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಪ್ರಗತಿ ನಿಧಾನವಾಗುತ್ತಿದ್ದು, ಅಂತ ಪ್ರದೇಶದ ಜನರಿಗೆ ಹಾಗೂ ಇತರರಿಗೂ ವ್ಯಾಪಕ ಪ್ರಚಾರವನ್ನು ನೀಡಲು ಧಾರ್ಮಿಕ ಮುಖಂಡರ, ಧರ್ಮ ಗುರುಗಳ ಸಹಾಯದೊಂದಿಗೆ ವಿಡಿಯೋ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೀಡಲು ಕ್ರಮ ವಹಿಸಲಾಗುತ್ತಿದ್ದು, ತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಜಿಂಗಲ್ಸ್ ಹಾಕಲಾಗುತ್ತಿದೆ ಎಂದರು.
ದಯವಿಟ್ಟು ಗರ್ಭಕಂಠದ ಕ್ಯಾನ್ಸರ್ ತಡೆಗೆ ಈ ಲಸಿಕೆ ಅತ್ಯಂತ ಉಪಯುಕ್ತವಾಗಿದೆ. ಮಾರುಕಟ್ಟೆಯಲ್ಲಿ ದೊರಕುವ ಲಸಿಕೆಗೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ಪಾವತಿಸಬೇಕು. ಸರಕಾರವೇ ಉಚಿತವಾಗಿ ಹಾಕುತ್ತಿರುವ ವ್ಯವಸ್ಥೆ ಕಲ್ಪಿಸಿದ್ದು, ಅನಗತ್ಯ ತಪ್ಪು ಮಾಹಿತಿಗಳಿಗೆ ಕಿವಿಗೊಡದೆ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಹೆಚ್.ಪಿ.ವಿ (ಹೂಮನ್ ಪ್ಯಾಪಿಲೋಮ ವೈರಸ್) ವಿರುದ್ಧದ ಲಸಿಕೆಯನ್ನು ಪೋಷಕರು ತಾವಾಗಿಯೇ ತಮ್ಮ ಮಕ್ಕಳಿಗೆ ತಪ್ಪದೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಲಸಿಕೆ ಹಾಕಿಸಬೇಕೆಂದರು.
ಇದೇ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಅಮೃತ ಹುಕ್ಕೇರಿ, ಶಿಕ್ಷಣ ಇಲಾಖೆಯ ಬಿಆರ್ಸಿ ಅಧಿಕಾರಿ ಯುನಸ್ ಬಾಬು, ಇಸಿಓ ರಾಮಕೃಷ್ಣ, ವೈದ್ಯಾಧಿಕಾರಿಗಳಾದ ಡಾ. ಪರ್ಹಾನ್ ನಸ್ರೀನ್ ಖಾಜಿ, ಡಾ.ಸುನೀಲ್, ಡಾ.ಗುಂಡಮ್ಮ, ಡಾ.ಅಸ್ಫಾಕ್ ಹುಸೇನ್, ಡಿಹೆಚ್ಇಓ ಈಶ್ವರ ಹೆಚ್ ದಾಸಪ್ಪನವರ, ಹಿರಿಯ ಹೆಚ್ಐಓ ಸುರೇಶ್, ಬಿಹೆಚ್ಇಓ ಸರೋಜಾ ಕೆ, ಹಿರಿಯ ಪಿಹೆಚ್ಸಿಓ ಈರಮ್ಮ, ಎಮ್ ಆ್ಯಂಡ್ಇ ಗುರುಗಂಪಾ, ಬಿಪಿಎಮ್ ವರಲಕ್ಷ್ಮೀ, ತಾಲೂಕಾ ಆಶಾ ಮೇಲ್ವಿಚಾರಕಿ ಮರಿಯಾಳಮ್ಮ ಸೇರಿದಂತೆ ಇತರರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್