
ನವದೆಹಲಿ, 21 ಮಾರ್ಚ್ (ಹಿ.ಸ.):
ಆ್ಯಂಕರ್:
ಚೈತ್ರ ನವರಾತ್ರಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಗನ್ಮಾತೆ ಶ್ರೀ ಚಾಮುಂಡೇಶ್ವರಿ ತಾಯಿಯನ್ನು ಸ್ಮರಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಕನ್ನಡದ ದಿಗ್ಗಜ ನಟ ಡಾ.ರಾಜಕುಮಾರ ಅಭಿನಯದ ಭಕ್ತಿಗೀತೆಯ ವಿಡಿಯೋವನ್ನು ಸೇರಿಸಲಾಗಿದೆ.
ಪ್ರಧಾನಿ ಹಂಚಿಕೊಂಡಿರುವ ವಿಡಿಯೋದಲ್ಲಿ ಡಾ.ರಾಜಕುಮಾರ, ಜಯಂತಿ ಹಾಗೂ ನರಸಿಂಹರಾಜು ಅಭಿನಯಿಸಿರುವ ಶ್ರೀ ಕೃಷ್ಣದೇವರಾಯ ಚಿತ್ರದ ಚಾಮುಂಡೇಶ್ವರಿ ತಾಯಿಯ ಮಹಿಮೆ ಸಾರುವ ಪ್ರಸಿದ್ಧ ಗೀತೆಯಾಗಿದೆ.
ಮೋದಿ ಅವರು ಪೋಸ್ಟ್ಗೆ ಹಿಂದಿಯಲ್ಲಿ ಭಕ್ತಿಯ ಅರ್ಥ ಸಾರುವ ಎರಡು ಸಾಲುಗಳನ್ನು ಬರೆದು, “ಜಗನ್ಮಾತೆಯ ಮೇಲಿನ ನಂಬಿಕೆ ಭಕ್ತರಲ್ಲಿ ಹೊಸ ಚೈತನ್ಯ ಮತ್ತು ಪ್ರಜ್ಞೆಯನ್ನು ತುಂಬುತ್ತದೆ” ಎಂಬ ಸಂದೇಶವನ್ನು ನೀಡಿದ್ದಾರೆ.
ಇಂದಿನ ದಿನದ ವಿಶೇಷತೆ
ಮಾರ್ಚ್ 21ರಂದು ಚೈತ್ರ ನವರಾತ್ರಿಯ ಮೂರನೇ ದಿನವಾಗಿದ್ದು, ಈ ದಿನ ದೇವಿಯ ಚಂದ್ರಗಂಟಾ ರೂಪವನ್ನು ಪೂಜಿಸಲಾಗುತ್ತದೆ. ಈ ರೂಪವು ಶಕ್ತಿ ಮತ್ತು ಧೈರ್ಯದ ಸಂಕೇತವೆಂದು ನಂಬಲಾಗಿದೆ.
ಇದೇ ದಿನ ಯುಗಾದಿ ಹಾಗೂ ವಸಂತೋತ್ಸವವೂ ಆಚರಿಸಲಾಗುತ್ತಿರುವ ಹಿನ್ನೆಲೆ, ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುವ ಪರಂಪರೆ ಇದೆ. ಈ ಪವಿತ್ರ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕನ್ನಡ ಭಕ್ತಿಗೀತೆಯ ಮೂಲಕ ದೇವಿಯನ್ನು ಸ್ಮರಿಸಿರುವುದು ವಿಶೇಷ ಗಮನಸೆಳೆಯುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa