
ವಿಜಯಪುರ, 02 ಮಾರ್ಚ್ (ಹಿ.ಸ.)
ಆ್ಯಂಕರ್: 2027ರ ಭಾರತೀಯ ಜನಗಣತಿ ಎರಡು ಹಂತದಲ್ಲಿ ನಡೆಯಲಿದ್ದು, ಹಂತ 1ರಲ್ಲಿ ಮನೆಪಟ್ಟಿ ಮತ್ತು ಮನೆ ಗಣತಿ ನಡೆಯಲಿದ್ದು, 2026ರ ಏಪ್ರಿಲ್ 01 ರಿಂದ ಏಪ್ರಿಲ್ 15 ದಿನಗಳವರೆಗೆ ಸ್ವಯಂ ಗಣತಿ ಅವಧಿ ನಿಗದಿಪಡಿಸಲಾಗಿದೆ. ಮೊದಲ ಬಾರಿಗೆ ಸ್ವಯಂ ಗಣತಿಗೆ ಡಿಜಿಟಲ್ ವ್ಯವಸ್ಥೆ ತರಲಾಗಿದ್ದು, ಈ ವ್ಯವಸ್ಥೆ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಭಾರತ ಜನಗಣತಿ 2027ರ ನಿಮಿತ್ತ ಸೋಮವಾರ ಇಲ್ಲಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು, ಇತರೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ
ಮೂರು ದಿನಗಳ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನಗಣತಿ ಸಮರ್ಪಕವಾಗಿ ನಡೆಸಲು ಜಿಲ್ಲಾಡಳಿತ ಮುಂಚೆಯೇ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳುವ ನಿಟ್ಟಿನಲ್ಲಿ ಮೂರು ದಿನಗಳ ಈ ತರಬೇತಿ ಶಿಬಿರ ಆಯೋಜಿಸಿದೆ. ಹಾಗಾಗಿ ಈ ಕಾರ್ಯದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಇದು ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯಲಿದೆ. ಈ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ವಹಿಸಿ ತರಬೇತಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
2026ರ ಏ.16ರಿಂದ ಮೇ 16ರವರೆಗೆ ಭಾರತದ ಜನಗಣತಿ- 2027ರ ನಿಮಿತ್ತ ಮನೆಪಟ್ಟಿ ಕ್ಷೇತ್ರ ಕಾರ್ಯ ನಡೆಯಲಿದೆ.
ಜನಗಣತಿ ಸಲುವಾಗಿ ಬ್ಲಾಕ್ ರಚಿಸಲಾಗುತ್ತಿದ್ದು,150 ರಿಂದ 200 ಮನೆಗಳು ಅಥವಾ 700 ರಿಂದ 800ಜನಸಂಖ್ಯೆಗೆ ಓರ್ವ ಗಣತಿದಾರರನ್ನು ಮತ್ತು ಪ್ರತಿ ಆರು ಜನ ಗಣತಿದಾರರಿಗೆ ಓರ್ವ ಮೇಲ್ವಿಚಾರಕರನ್ನು ನೇಮಿಸಲಾಗುವುದು ಹೇಳಿದರು.
ಎರಡನೇ ಹಂತವಾಗಿ ಫೆಬ್ರವರಿ 2027ರಲ್ಲಿ ಜನಸಂಖ್ಯಾ ಗಣತಿ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು. ಈ ಗಣತಿ ಕಾರ್ಯ ಡಿಜಿಟಲ್ ಆಗಿದ್ದು, ಮೊಬೈಲ್ ಆಪ್ ನಲ್ಲಿ ನಿಗದಿಪಡಿಸಿದ ಪ್ರಶ್ನಾವಳಿ ಮೂಲಕ ದತ್ತಾಂಶ ಸಂಗ್ರಹಿಸುವುದು ಈ ಜನಗಣತಿ ವಿಶೇಷವಾಗಿದೆ. ಡಿಜಿಟಲ್ ಮೋಡ್ ನಡೆಯುವ ಪ್ರಥಮ ಜನಗಣತಿಯಾಗಿದೆ. ಗಣತಿದಾರರ ಸ್ಮಾರ್ಟ ಫೋನ್ ಮೀಸಲಾದ ಮೊಬೈಲ್ ಆಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.
ಆರಂಭದಿಂದ ಮುಕ್ತಾಯದವರೆಗೆ ಜನಗಣತಿ ಮೇಲ್ವಿಚಾರಣಾ ಮತ್ತು ನಿರ್ವಹಣೆ ವ್ಯವಸ್ಥೆ ಸಿಎಂಎಂಎಸ್ ಪೋರ್ಟಲ್ ಮೂಲಕ ನಿರ್ವಹಿಸಲಾಗುತ್ತಿದೆ ಎಂದರು.
ಹಾಗಾಗಿ ಇಲ್ಲಿ ನಡೆಯುವ ತರಬೇತಿಯ ಸಂಪೂರ್ಣ ಮಾಹಿತಿ ಪಡೆದುಕೊಂಡು ಗೊಂದಲಗಳಿಗೆ ಅವಕಾಶ ನೀಡದಂತೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಗಣತಿದಾರರು ತಮಗೆ ವಹಿಸಿದ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳು ಗಣತಿದಾರರಿಗೆ ತರಬೇತಿ ನೀಡಬೇಕು.
ಈ ಜನಗಣತಿಯಿಂದ ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ದಿಕ್ಸೂಚಿಯಾಗಲಿದ್ದು, ಯಾವುದೇ ಲೋಪದೋಷಗಳಿಲ್ಲದೆ ಸಮೀಕ್ಷೆ ನಡೆಸಬೇಕೆಂದು ತಿಳಿಸಿದರು.
ಮನೆ ಪಟ್ಟಿ ಮಾಡುವಾಗ ಸರಿಯಾಗಿ ನಿರ್ವಹಿಸಬೇಕು. ಇದೊಂದು ಮಹತ್ವದ ಜವಾಬ್ದಾರಿಯಾಗಿದೆ. ಮೊದಲ ಹಂತದಲ್ಲಿ ಈ ಕಾರ್ಯವನ್ನು ಅತ್ಯಂತ ಸುಸೂತ್ರವಾಗಿ ನಿರ್ವಹಿಸಬೇಕು ಎಂದರು.
ಜನಗಣತಿ ಯೋಜನೆ ಹಾಗೂ ನೀತಿ ನಿರೂಪಣೆಯಲ್ಲಿ ಅದರ ಮಹತ್ವ ಬಹಳಷ್ಟಿದೆ. ಯಾವುದೇ ಮಾಹಿತಿ ಕೈಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು. ಜನಸಂಖ್ಯೆ ಪ್ರತಿ ಕುಟುಂಬ, ವ್ಯಕ್ತಿ ಮಾಹಿತಿ ಸಂಗ್ರಹಿಸಿ. ಸಮಗ್ರ ಹಾಗೂ ಸಂಪೂರ್ಣ ದತ್ತಾಂಶ ಸಂಗ್ರಹಿಸಿ
ನೀಡಿರುವ 33 ಪ್ರಶ್ನಾವಳಿಯನುಸಾರ ಪ್ರತಿ ಪ್ರಶ್ನೆ ಅರ್ಥಮಾಡಿಕೊಂಡು ದತ್ತಾಂಶ ಸಂಗ್ರಹಿಸಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ತಹಶೀಲ್ದಾರ ಹಾಗೂ ನಗರ ಪ್ರದೇಶಗಳಲ್ಲಿ ಮುಖ್ಯಾಧಿಕಾರಿಗಳು ಚಾರ್ಜ ಆಫೀಸರ್ ಆಗಿದ್ದು, ಇವರ ಕರ್ತವ್ಯ ಅತ್ಯಂತ ಜವಾಬ್ದಾರಿಯುತವಾಗಿದೆ ಎಂದ ಅವರು, ಇಲ್ಲಿ ನೀಡುವ ತರಬೇತಿ ಮಾಹಿತಿ ವಿವರ ಅರ್ಥೈಸಿಕೊಂಡು ಗಣತಿದಾರರಿಗೆ ಸಮರ್ಪಕ ತರಬೇತಿ ನೀಡಬೇಕು ಎಂದರು.
ಸಮಗ್ರ ದತ್ತಾಂಶ ಸಂಗ್ರಹಕ್ಕೆ ಒತ್ತುನೀಡಿ, ಮನೆ ಪಟ್ಟಿ ಮತ್ತು ಮನೆ ಗಣತಿ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದ್ದು, ಅಧಿಕಾರಿಗಳು , ನೀಡಿರುವ ನಿರ್ದೇಶನಗಳನ್ನು ತಿಳಿದುಕೊಳ್ಳಬೇಕು. ಹೌಸ್ ಲಿಸ್ಟ್ ಕಾರ್ಯ ಸರಿಯಾಗಿ ನಿರ್ವಹಿಸುವ ಮೂಲಕ ಸುಗಮ ಜನಸಂಖ್ಯಾ ಗಣತಿಗೆ ರಹದಾರಿ ಮಾಡಿಕೊಡಿ. ಉದ್ಭವಿಸುವ ಯಾವುದೇ ಸಂಶಯ, ಗೊಂದಲಗಳನ್ನು ತರಬೇತಿ ಅವಧಿಯಲ್ಲಿ ನಿವಾರಿಸಿಕೊಳ್ಳಬೇಕು ಎಂದರು.
ಅತ್ಯಂತ ಮಹತ್ವದ ಈ ಕಾರ್ಯದಲ್ಲಿ ತೊಡಗಿರುವ ತಾವು ಅತ್ಯಂತ ಶಿಸ್ತುಬದ್ಧತೆಯಿಂದ, ನೀಡಿರುವ ನಿರ್ದೇಶನಗಳನ್ನು ಪಾಲಿಸಿಕೊಂಡು ಸಂಶಯ ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಗೊಂದಲ ಪರಿಹರಿಸಿಕೊಂಡು ಕಾರ್ಯ ನಿರ್ವಹಿಸಿ,ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆಯ ಆಯುಕ್ತರು ಪ್ರಧಾನ ಜನಗಣತಿ ಅಧಿಕಾರಿಗಳಾಗಿದ್ದು, ಜಿಲ್ಲಾ ಜನಗಣತಿ ಅಧಿಕಾರಿಗಳಾಗಿ ಅಪರ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಜನಗಣತಿ ಅಧಿಕಾರಿಗಳಾಗಿ ಜಿಪಂ ಮುಖ್ಯ ಯೋಜನಾಧಿಕಾರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು,ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಿಜಯಪುರ ಹಾಗೂ ಇಂಡಿ ಉಪ ವಿಭಾಗಾಧಿಕಾರಿಗಳು ಉಪ ವಿಭಾಗ ಹಂತದ ಚಾರ್ಜ್ ಅಧಿಕಾರಿಗಳಾಗಿ, ಗ್ರಾಮೀಣ ಪ್ರದೇಶದ ಚಾರ್ಜ ಅಧಿಕಾರಿಗಳಾಗಿ ತಹಶೀಲ್ದಾರರು,ನಗರ ಪ್ರದೇಶಕ್ಕೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಚಾರ್ಜ ಅಧಿಕಾರಿಗಳಾಗಿರುತ್ತಾರೆ. ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೆ 13 ಹಾಗೂ ನಗರ ಪ್ರದೇಶಕ್ಕೆ 14 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 31 ಚಾರ್ಜ್ ಅಧಿಕಾರಿಗಳಿರಲಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ಚಾರ್ಜ್ ಅಧಿಕಾರಿಗಳನ್ನಾಗಿ ರಚಿಸಲಾಗಿದೆ ಡಿಸಿ ಮಾಹಿತಿ ನೀಡಿದರು.
ಮೂರು ದಿನಗಳ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಗಣತಿ ಜಿಲ್ಲಾ ನೋಡಲ್ ಅಧಿಕಾರಿಗಳಾದ ವಿಮೇಶ .ಪಿ,ಭಾರತ ಸರ್ಕಾರದ ಸಹಾಯಕ ನಿರ್ದೇಶಕರಾದ ಬ್ರಿಜೇಶ ಎ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ್ ಸೌದಾಗರ್, ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಕಾಂತ ಕುಂಬಾರ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಜ್ಯೋತಿ ದೇಶಪಾಂಡೆ, ಚಾರ್ಜ್ ಅಧಿಕಾರಿಗಳು, ಶಿರಸ್ತೇದಾರರು, ತಾಂತ್ರಿಕ ಸಹಾಯಕರು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತಿಯ ಸಿ.ಸಿ ಕುಲಕರ್ಣಿ ನಿರೂಪಿಸಿದರು.ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರರಾದ ಸಚ್ಚಿದಾನಂದ ತೇರದಾಳ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande