

ಕೊಪ್ಪಳ, 14 ಮಾರ್ಚ್ (ಹಿ.ಸ.)
ಆ್ಯಂಕರ್: 135ನೇ ದಿನದ ಬಲ್ಡೋಟ ತೊಲಗಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ, ಸ್ಪಾಂಜ್ ಐರನ್ ಕಾರ್ಖಾನೆ ಬಾಧಿತ 20 ಹಳ್ಳಿಗಳ ಜೀವ ಉಳಿಸಿ ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಧರಣಿ ಹೋರಾಟವನ್ನು ಬಿಜಾಪುರದ ಚಿಂತಕ ಅಪ್ಪಾಸಾಹೇಬ ಯರನಾಳ ಬೆಂಬಲಿಸಿ ಮಾತನಾಡಿದರು. ಈ ಹೋರಾಟ ಜೀವ, ಆರೋಗ್ಯ ಉಳಿಸಿಕೊಳ್ಳಲು ಇಷ್ಟೊಂದು ಸುದೀರ್ಘ ಕಾಲದಿಂದ ನಡೆದರೂ ಸರ್ಕಾರ ತನ್ನದೇನೂ ಜವಾಬ್ದಾರಿ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ. ಜನರ ಹಿತ ಕಾಪಾಡುವುದು ಆಗಿಲ್ಲ ಎಂದಾದರೆ ಯಾವ ಅಧಿಕಾರ ಇದ್ದರೇನು ಪ್ರಯೋಜನವಾಗುವುದಿಲ್ಲ. ನೀವು ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟದ ನಿರ್ದೇಶನ ಪಡೆಯಬೇಕು ಎಂದು ಸಲಹೆ ನೀಡಿದರು.
ರಾಯಚೂರು ಜಿಲ್ಲಾ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ನಾಗೋಜಿರಾವ್ ಕರಾಡೆ ಬೆಂಬಲಿಸಿ ಮಾತನಾಡಿ, ತುಂಗಭದ್ರಾ ಜಲಾಶಯದ ಲೆಕ್ಕವಿಲ್ಲದಷ್ಟು ನೀರು ಕಾರ್ಖಾನೆಗಳು ಬಳಸಿಕೊಳ್ಳುವುದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಕೊರತೆಯಾಗಿ ಒಂದು ಬೆಳೆಗೆ ಸೀಮಿತವಾಗಿದೆ. ಮುಂದೊಂದು ದಿನ ಈ ನೀರು ಕೂಡ ಸಿಗುವ ಲಕ್ಷಣಗಳಿಲ್ಲ. ಈ ಹೋರಾಟವನ್ನು ನಾವು ಕೂಡ ಆರಂಭ ಮಾಡುತ್ತೇವೆ ಎಂದರು.
ಹಾಲವರ್ತಿ ರೈತ ಗವಿಸಿದ್ದರಡ್ಡಿ ಧರಣಿಯಲ್ಲಿ ಮಾತನಾಡಿ, ಬಲ್ಲೋಟ ಕಂಪನಿ ತನ್ನ ಹತಾಶೆಯಿಂದ ಕಂಪನಿ ಮ್ಯಾನೇಜರ್ ಮೂಲಕ ಸಾಲ ಕೊಡಿಸುತ್ತೇನೆ ಎಂದು ತಹಸೀಲ್ದಾರ್ ಕಚೇರಿಗೆ ಕರೆತಂದು ಬಲ್ಡೋಟ ಸ್ಥಾಪಿಸಿ ಎನ್ನುವ ಟೆಂಟಿನಲ್ಲಿ ಕೂರಿಸಿ ಪೋಟೋ ತೆಗೆದು ಜನರಿಗೆ ಮತ್ತು ಸರ್ಕಾರಕ್ಕೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಇದೊಂದು ಬಲ್ಡೋಟ ಕಂಪನಿಯ ಹೇಯ ಕೃತ್ಯವಾಗಿದೆ. ಅಮಾಯಕರನ್ನು ಹೋರಾಟ ಎನ್ನುವ ಸ್ಥಳಕ್ಕೆ ಕರೆತಂದು ಮುಜುಗರ ಉಂಟು ಮಾಡುವ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ಬಲ್ಡೋಟ ಕಂಪನಿ ನಾಟಕವನ್ನು ಯಾರೂ ನಂಬಬಾರದು, 100 ಹೋರಾಟ ಮಾಡಿದ್ದೇವೆ ಎನ್ನುತ್ತಿರುವ ಅವರು ಅರ್ಧದಷ್ಟು ಮಾಡಿಲ್ಲ, ರಜೆಯಲ್ಲಿ ಮಜಾ ಮಾಡುವ ಅಲ್ಲಿನ ಹೋರಾಟಗಾರರಿಗೆ ರೈತರ ಹಿತ ಬೇಕಿಲ್ಲ ಎಂದರು. ಧರಣಿಯಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ಬೆಂಗಳೂರಿನ ಸುಧಾ ಎಸ್, ಹಿರಿಯ ಚಲನಚಿತ್ರ ನಿರ್ದೇಶಕ ರಮೇಶ ಸುರ್ವೆ, ಡಾ. ಬಸವರಾಜ ಪೂಜಾರ, ಎಲ್. ಎಫ್. ಪಾಟೀಲ್, ಸುಭಾನ್ ಸಾಬ್ ನೀರಲಗಿ, ಭಾಗ್ಯನಗರದ ಗ್ಯಾನೇಶ ಹ್ಯಾಟಿ, ಈಶ್ವರಪ್ಪ ಕೊರ್ಲಹಳ್ಳಿ, ರಾಘವೇಂದ್ರರಾವ್ ಪವಾರ, ಬಿ.ಜಿ. ಕರಿಗಾರ, ಜಿ.ಬಿ. ಪಾಟೀಲ್, ಶಂಭುಲಿಂಗಪ್ಪ ಹರಗೇರಿ, ಶ್ರೀನಿವಾಸ ಎಚ್. ಕಾಸನಕಂಡಿ, ಮಾರುತಿ ಹಡಪದ ಕಾಸನಕಂಡಿ, ಜಿ. ಶ್ರೀನಿವಾಸ, ಮಂಗಳೇಶ ರಾಠೋಡ್, ಎಸ್.ಕೆ. ಸಿದ್ನೆಕೊಪ್ಪ, ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು, ರಾಜಶೇಖರ ಏಳುಬಾವಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ವಿಜಯ ಮಹಾಂತೇಶ ಹಟ್ಟಿ, ಪಂಪಣ್ಣ ಚಿಂತಪಲ್ಲಿ, ವೈ. ಸತ್ಯನಾರಾಯಣ, ನಾಗರಾಜ ಕುಷ್ಟಗಿ, ರಾಮಲಿಂಗಯ್ಯ ಶಾಸ್ತ್ರಿಮಠ, ಅಮರೇಶ ಗೌಡರ, ಮೌಲಪ್ಪ ಎಸ್.ಎಚ್, ಪರಿಸರ ಇಂಜಿನೀಯರ್ ವಿನಯ್ ಸಜ್ಜನ್ ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್