
ಬಳ್ಳಾರಿ, 10 ಮಾರ್ಚ್ (ಹಿ.ಸ.)
ಆ್ಯಂಕರ್: ಜಿಲ್ಲೆಯಲ್ಲಿ ರೂಪ್ಚಂದ್ ಮೀನು ಸಾಕಾಣಿಕೆ ಮಾಡಬಯಸುವ ಪ್ರತಿಯೊಬ್ಬ ರೈತರು ಮತ್ತು ಮೀನು ಕೃಷಿಕರು ಮೀನುಗಾರಿಕೆ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಮೀನುಗಾರಿಕೆ ಉಪನಿರ್ದೇಶಕ ಶಿವಣ್ಣ ಅವರು ತಿಳಿಸಿದ್ದಾರೆ.
ಜಿಲ್ಲೆಯ ಸಿರುಗುಪ್ಪ, ಕಂಪ್ಲಿ ಮತ್ತು ಕುರುಗೋಡು ತಾಲ್ಲೂಕುಗಳಲ್ಲಿ ಕೆಲವು ಸ್ಥಳೀಯ, ಆಂಧ್ರ ಮೂಲದ ವ್ಯಕ್ತಿಗಳು ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ ಮೀನು ಕೃಷಿ ಕೊಳಗಳನ್ನು ನಿರ್ಮಿಸಿಕೊಂಡು ಅನಧಿಕೃತವಾಗಿ ರೂಪ್ ಚಂದ್ ಜಾತಿಯ ಮೀನು ಸಾಕಾಣಿಕೆ ಮಾಡುತ್ತಿರುವುದು ಮತ್ತು ಕೊಳಗಳಲ್ಲಿ ಚಿಕನ್ ವೇಸ್ಟ್, ಸತ್ತ ಕೋಳಿ, ಕೊಳೆತ ಮೊಟ್ಟೆ, ಮಾಂಸದ ಹೋಟೆಲ್ ಮತ್ತು ಹಾಸ್ಟೆಲ್ ವೇಸ್ಟ್ ಇತ್ಯಾದಿ ನಿಷೇಧಿತ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಈ ಕುರಿತು ಸಾರ್ವಜನಿಕರು ಮತ್ತು ಮೀನುಗಾರಿಕೆ ಸಹಕಾರ ಸಂಘದವರು ದೂರುಗಳನ್ನು ಸಹ ನೀಡಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ಯಾರಾದರೂ ಮೀನು ಕೃಷಿ ಕೊಳಗಳಲ್ಲಿ ನಿಷೇಧಿತ ಆಹಾರ ಪದಾರ್ಥಗಳನ್ನು ರೂಪ್ ಚಂದ್ ಮೀನುಗಳಿಗೆ ಆಹಾರವನ್ನಾಗಿ ಬಳಸುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್