
ಗದಗ, 01 ಮಾರ್ಚ್ (ಹಿ.ಸ.):
ಆ್ಯಂಕರ್: “ಶಿವನನ್ನು ನಂಬಿದವರಿಗೆ ಎಂದಿಗೂ ಕೆಡುಕಿಲ್ಲ. ಶಿವಭಕ್ತಿಯೇ ಜೀವನದ ಅಂತಿಮ ಗುರಿ ಹಾಗೂ ನಿಜವಾದ ಮುಕ್ತಿ” ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿಂದು ವೀರಶೈವ–ಲಿಂಗಾಯತ ಧರ್ಮದ ಪಂಚಾಚಾರ್ಯರಲ್ಲಿ ಪ್ರಮುಖರಾದ ಶ್ರೀ ರೇಣುಕಾಚಾರ್ಯರು ಅವರ ಜಯಂತಿ ಅಂಗವಾಗಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತ್ ವತಿಯಿಂದ ಆಯೋಜಿಸಿದ್ದ ಪೂಜಾ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜ ಸುಧಾರಣೆಗೆ ಒತ್ತು ನೀಡಿದ ಮಹಾನ್ ಪುರುಷರಾದ ರೇಣುಕಾಚಾರ್ಯರು ಮಾನವನಿಗೆ ನೀತಿಧರ್ಮ, ಭಕ್ತಿಮಾರ್ಗ ಹಾಗೂ ಸಾತ್ವಿಕ ಜೀವನದ ಮೌಲ್ಯಗಳನ್ನು ಬೋಧಿಸಿದ್ದಾರೆ. ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆ ಮತ್ತು ಶಾಂತಿಯ ಸಂದೇಶವನ್ನು ಸಾರುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದ ವೇಳೆ ಶ್ರೀಗಳ ಆಶೀರ್ವಾದ ಪಡೆದು ಭಕ್ತರು ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ಧಾರ್ಮಿಕ ಘೋಷಣೆಗಳ ಮಧ್ಯೆ ನಗರದ ಪ್ರಮುಖ ರಸ್ತೆಗಳಲ್ಲಿ ಪೂಜಾ ಮೆರವಣಿಗೆ ಸಂಭ್ರಮದಿಂದ ಸಾಗಿತು.
ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹಿರಿಯ ನಾಯಕ ಗೋವಿಂದ ಎಂ. ಕಾರಜೋಳ ಹಾಗೂ ಚಳವಡಿ ನಾರಾಯಣಸ್ವಾಮಿ ಸೇರಿದಂತೆ ಅನೇಕ ಗಣ್ಯರು ಜಯಂತಿ ಶುಭಾಶಯಗಳನ್ನು ಕೋರಿದರು.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರೇಣುಕಾಚಾರ್ಯರ ಜಯಂತಿ ಆಚರಣೆ ಭಕ್ತಿಪೂರ್ವಕವಾಗಿ ನೆರವೇರಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP