
ವಿಜಯಪುರ, 01 ಮಾರ್ಚ್ (ಹಿ.ಸ.):
ಆ್ಯಂಕರ್: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ ನಮ್ಮ ಸರಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಈ ಯೋಜನೆ ಅನುಷ್ಠಾನ ಮುಂದೂಡದೇ ಬರುವ ಎರಡ್ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಡಾ. ಎಂ.ಬಿ. ಪಾಟೀಲ ಅವರು ಹೇಳಿದರು.
ಜಲಸಂಪನ್ಮೂಲ ಇಲಾಖೆ,ಕೃಷ್ಣಾ ಭಾಗ್ಯ ಜಲ ನಿಗಮದ ಸಹಯೋಗದಲ್ಲಿ ರವಿವಾರ ಆಲಮಟ್ಟಿಯಲ್ಲಿ ನಿರ್ಮಾಣವಾದ ಜಲ ಮನೋರಂಜನಾ ಉದ್ಯಾನವನ ಉದ್ಘಾಟಿಸಿ ಅವರು ಮಾತನಾಡಿದರು. ಆಲಮಟ್ಟಿ ಅಣೆಕಟ್ಟನ್ನು 524 ಮೀಟರ್ ವರೆಗೆ ಎತ್ತರಿಸಲು ಸರಕಾರ ಬದ್ಧವಾಗಿದೆ. ಜಲಾಶಯವನ್ನು ಎತ್ತರಿಸುವುದರಿಂದ 75 ಸಾವಿರ ಎಕರೆ ಭೂಮಿ ಮುಳುಗಡೆಯಾಗುತ್ತದೆ. 20 ಹಳ್ಳಿಗಳು ಸ್ಥಳಾಂತರಗೊಳ್ಳುತ್ತವೆ. ಈ ಬೃಹತ್ ಯೋಜನೆ ಅನುಷ್ಠಾನಕ್ಕೆ ದೊಡ್ಡ ಪ್ರಮಾಣದ ಅನುದಾನ ಬೇಕಾಗುತ್ತದೆ ಇದನ್ನು ಅವಳಿ ಜಿಲ್ಲೆಯ ಜನಪ್ರತಿನಿಧಿಗಳೆಲ್ಲ ಸೇರಿ, ಸಚಿವ ಸಂಪುಟದಲ್ಲಿ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಈ ಯೋಜನೆ ಮುಂದೂಡಲಿಕ್ಕಾಗಲ್ಲ ಎಂಬ ಬೇಡಿಕೆಯನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾಗಿ ಸಚಿವರು ತಿಳಿಸಿದರು.
ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಅನುಷ್ಠಾನಗೊಳಿಸಿದ್ದರೆ, ಐತಿಹಾಸಿಕ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524 ಮೀಟರ್ ಗೆ ಏರಿಸುವ ಮೂಲಕ ಈ ಭಾಗಕ್ಕೆ ನ್ಯಾಯ ಕೊಡಲು ನಮ್ಮ ಸರಕಾರ ಬದ್ಧವಾಗಿದೆ ಎಂದರು.
ಜಲಾಶಯದ ಎತ್ತರ ಹೆಚ್ಚಿಸಲಿಕ್ಕೆ ಪ್ರಥಮ ಆದ್ಯತೆ ನೀಡುವ ಮೂಲಕ ನಮ್ಮ ಪಾಲಿನ ಶೇ. 90ರಷ್ಟು ನೀರನ್ನು ನಮ್ಮ ರೈತರಿಗೆ ಒದಗಿಸಲಾಗುವುದು ಎಂದರು. ಇದಕ್ಕೆ ಕೇವಲ 3 ವರ್ಷಗಳ ಗಡುವಿನಲ್ಲಿ ಈ ಭಾಗದ ಭೂಮಿ ಹಾಗೂ ಕಾಲುವೆಗೆ ನೀರು ಪೂರೈಸಲಿಕ್ಕೆ ನಾವೆಲ್ಲ ಐತಿಹಾಸಿಕ ನಿರ್ಣಯ ಕೈಗೊಂಡಿರುವುದಾಗಿ, ಆಲಮಟ್ಟಿ ಅಣೆಕಟ್ಟು ರಾಜ್ಯದಲ್ಲೇ ದೊಡ್ಡ ಜಲಾಶಯ. ಈ ಜಲಾಶಯದ ಎತ್ತರ ಹೆಚ್ಚಿಸಿದರೆ, ಈಗಿರುವ 130 ಟಿಎಂಸಿ ಬದಲಿಗೆ 233 ಟಿಎಂಸಿ ನೀರು ಸಂಗ್ರಹಿಸುವುದರೊಂದಿಗೆ ರಾಜ್ಯದಲ್ಲಿ ಅತೀ ದೊಡ್ಡ ಜಲಾಶಯ ನಮ್ಮದಾಗಲಿದೆ ಎಂದರು. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ರೈತರು 2ಲಕ್ಷ ಹೆಕ್ಟೇರ್ ಭೂಮಿ ಕಳೆದುಕೊಂಡಿದ್ದಾರೆ. ಬ್ರಿಜೇಶ್ ಕುಮಾರ ತೀರ್ಪನಿನ್ವಯ 6 ಲಕ್ಷ ಹೆಕ್ಟೇರ್ ನೀರಾವರಿಯಾಗಲು ಸಾಧ್ಯವಾಗುತ್ತದೆ ಎಂದ ಅವರು, 90 ಟಿಎಂಸಿಯಷ್ಟು ನೀರು ಬರುವ ಮೂಲಕ 6 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಯಾಗಲು ಸಾಧ್ಯವಿದೆ ಎಂದರು.
ಆಲಮಟ್ಟಿಯಲ್ಲಿ ನಾನಾ ಉದ್ಯಾನವನಗಳಿವೆ. ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕಗಳಿವೆ. ಪ್ರವಾಸೋದ್ಯಮ ಆಕರ್ಷಣೆಗೆ ಆಲಮಟ್ಟಿಯಲ್ಲಿ ಡಿಸ್ನಿ ಪಾರ್ಕ್ ಯಾತ್ರಿ ನಿವಾಸ, ಹಳ್ಳಿ ಜನರಿಗೆ ಡಾರ್ಮೆಟರಿ, ಕೇಬಲ್, ಪ್ಲಾನೇಟರಿ, ಡ್ಯಾಶ್ ಕಾರ್ಡ್, ಮ್ಯೂಸಿಕಲ್ ಫೌಂಟೇನ್ ಮಾಡಬೇಕಿದೆ. ಈ ದಿಶೆಯಲ್ಲಿ ನಾನು ಸೇರಿದಂತೆ ಸಚಿವ ಶಿವಾನಂದ ಪಾಟೀಲ ಸೇರಿ ಮಾಡುತ್ತೇವೆ ಎಂದರು.
3 ನೇ ಹಂತ ಪೂರ್ಣಗೊಳಿಸುವ ಹೊತ್ತಿಗೆ, ರಾಜ್ಯದ ಇತರೇ ಜಲಾಶಯಗಳಲ್ಲಿರುವ ಎಲ್ಲ ಅನುಕೂಲಗಳನ್ನು ಆಲಮಟ್ಟಿಯಲ್ಲಿ ಕಲ್ಪಿಸುವುದಾಗಿಯೂ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು, ಕೃಷ್ಣಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಲಿ ಎಂದ ಒ ಅವರು ಕೇಂದ್ರ ಹಾಗೂ ರಾಜ್ಯ ಕೇಂದ್ರ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ ಅವರು, ರಾಷ್ಟ್ರಕ್ಕೆ ಬಲು ದೊಡ್ಡ ಕೊಡುಗೆ ನೀಡಿದಂತಾಗುವುದು ಎಂದರು.
ಈ ಜಲಾಶಯದ ನೀರನ್ನು ವ್ಯರ್ಥವಾಗಿ ಸಮುದ್ರಕ್ಕೆ ಬಿಡುವ ಬದಲಿಗೆ, ಸದ್ಬಳಕೆ ಮಾಡಿಕೊಳ್ಳಬೇಕಿದೆ. ಆಲಮಟ್ಟಿ ಜಲಾಶಯ ಕೇವಲ ಕರ್ನಾಟಕದ ಯೋಜನೆಯಲ್ಲ. ನಾಲ್ಕು ರಾಜ್ಯಗಳಿಗೆ ದೊಡ್ಡ ಶಕ್ತಿ ತುಂಬುವ ಬೃಹತ್ ಯೋಜನೆಯಿದು. ಹಾಗಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಎಂದರು.
ಇನ್ನೊಂದೆಡೆ ಆಲಮಟ್ಟಿ ಜಲಾಶಯ ನಮ್ಮ ಜಿಲ್ಲೆಗೆ ದೊಡ್ಡ ವರದಾನವಾಗಿ ಹೊರಹೊಮ್ಮಲಿದೆ. ಇಲ್ಲಿಯವರೆಗೆ ಈ ಜಲಾಶಯಕ್ಕಾಗಿ ಬಹಳಷ್ಟು ಜಮೀನು ಕಳೆದುಕೊಂಡ ಸಂತ್ರಸ್ತರು ನಮ್ಮವರೇ. ಜೊತೆಗೆ ಔದ್ಯೋಗಿಕ ಕ್ರಾಂತಿಗೆ ಹೆಚ್ಚು ಜಮೀನು ಕಳೆದುಕೊಂಡವರು ಬಸವನಬಾಗೇವಾಡಿ ಮತಕ್ಷೇತ್ರದ ರೈತರು. ಹಾಗಾಗಿ ಸರಕಾರಿ ನೇಮಕಾತಿಯಲ್ಲಿ ಈ ಭಾಗದ ಸಂತ್ರಸ್ತರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಹಿರಿಯರು ಮನವಿ ಸಲ್ಲಿಸಿದ್ದಾರೆ. ಸಂತ್ರಸ್ತರ ಈ ಮನವಿಯನ್ನು ಸರಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಅಮ್ಯೂಸ್ಮೆಂಟ್ ಪಾರ್ಕ್ ಲೋಕಾರ್ಪಣೆ ಮಾಡಿದ್ದೇವೆ. ಆದರೆ ನಿತ್ಯ ಇಲ್ಲಿಗೆ ಆಗಮಿಸುವ ಶಾಲಾ ಮಕ್ಕಳಿಗೆ, ಹಿರಿಯರಿಗೆ ಇದರ ಉಪಯೋಗವಾಗಲಿದೆ. ಶಾಲಾ ಮಕ್ಕಳಿಗಂತೂ ಇದೊಂದು ದೊಡ್ಡ ಅವಕಾಶ ಎಂದರು.
*ನಿರ್ವಹಣೆ ನೋಡಿಕೊಳ್ಳಿ:* ಪಾರ್ಕ್ ಉದ್ಘಾಟನೆಯಾದರೆ ಸಾಲದು. ಇದು ನಿರ್ವಹಣೆ ಕೂಡಾ ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕು. ವರ್ಷಕ್ಕೆ 10 ಲಕ್ಷ ಪ್ರವಾಸಿಗರು ಇಲ್ಲಿಗೆ ಬರುವುದರಿಂದ ಈ ಪಾರ್ಕ್ ನಡೆಯುತ್ತದೆ ಎಂದರು. ಈ ಸುವರ್ಣ ಅವಕಾಶ ನಮ್ಮ ವಿದ್ಯಾರ್ಥಿಗಳಿಗೆ ಸಿಗಲಿದೆ ಎಂದರು.
ದಕ್ಷಿಣದಲ್ಲಿ ಕೆಆರ್ಎಸ್ ಮಾದರಿಯಲ್ಲಿ ಆಲಮಟ್ಟಿ ಜಲಾಶಯವನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು. ಭವಿಷ್ಯದ ದಿನಗಳಲ್ಲಿ ಆಲಮಟ್ಟಿಯನ್ನು ಐತಿಹಾಸಿಕ ಪ್ರವಾಸಿ ತಾಣವನ್ನಾಗಿ ಮಾಡುವ ದಿಶೆಯಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಬಿ.ಎಸ್ ಕವಲಗಿ, ಹಾಗೂ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ
ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣಮೂರ್ತಿ ಕುಲಕರ್ಣಿ,
ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಹಳೆಮನಿ,
ಆಲಮಟ್ಟಿ ಕೃಷ್ಣ ಭಾಗ್ಯ ಜಲ ನಿಗಮದ,ಮುಖ್ಯ ಇಂಜಿನೀಯರಾದ ಡಿ.ಬಸವರಾಜ,
ಬಿ ಎಸ್ ಪಾಟೀಲ, ಗೋವಿಂದ ರಾಠೋಡ, ಕೆ ಎಸ್ ಅಭಿಮನ್ಯು, ಎನ್ ಕೆ ಬಗಾಯತ ಸೇರಿದಂತೆ ಕೃಷ್ಣ ಭಾಗ್ಯ ಜಲ ನಿಗಮದ ಸಿಬ್ಬಂದಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande