ಮಾಜಿ ಸೈನಿಕರ ಕಲ್ಯಾಣಕ್ಕೆ ಹೆಚ್ಚುವರಿ ನೆರವು : ಹಣಕಾಸು ಸಚಿವರಿಗೆ ರಾಹುಲ್ ಗಾಂಧಿ ಪತ್ರ
ನವದೆಹಲಿ, 28 ಫೆಬ್ರವರಿ (ಹಿ.ಸ.) : ಆ್ಯಂಕರ್ : ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆಗೆ ಸಮರ್ಪಕ ಬಜೆಟ್ ಹಂಚಿಕೆ ಮಾಡುವುದು ಹಾಗೂ ಅಂಗವೈಕಲ್ಯ ಪಿಂಚಣಿಯ ಮೇಲಿನ ಪ್ರಸ್ತಾವಿತ ಆದಾಯ ತೆರಿಗೆ ನಿಯಮವನ್ನು ಹಿಂತೆಗೆದುಕೊಳ್ಳುವಂತೆ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಕೇ
Rahul Gandhi


ನವದೆಹಲಿ, 28 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆಗೆ ಸಮರ್ಪಕ ಬಜೆಟ್ ಹಂಚಿಕೆ ಮಾಡುವುದು ಹಾಗೂ ಅಂಗವೈಕಲ್ಯ ಪಿಂಚಣಿಯ ಮೇಲಿನ ಪ್ರಸ್ತಾವಿತ ಆದಾಯ ತೆರಿಗೆ ನಿಯಮವನ್ನು ಹಿಂತೆಗೆದುಕೊಳ್ಳುವಂತೆ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.

ಫೆಬ್ರವರಿ 25ರಂದು ಬರೆದ ಪತ್ರದಲ್ಲಿ, ಸಶಸ್ತ್ರ ಪಡೆಗಳ ಸಿಬ್ಬಂದಿ ಹಾಗೂ ಮಾಜಿ ಸೈನಿಕರಿಗೆ ಸಂಬಂಧಿಸಿದ ಎರಡು ಮಹತ್ವದ ವಿಚಾರಗಳಿಗೆ ತಕ್ಷಣ ಗಮನ ಹರಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ₹12,000 ಕೋಟಿಗೂ ಅಧಿಕ ವೈದ್ಯಕೀಯ ಬಿಲ್ಗಳು ಬಾಕಿ ಉಳಿದಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಬಜೆಟ್ ಹಂಚಿಕೆ ಅಗತ್ಯಕ್ಕಿಂತ ಸುಮಾರು ಶೇಕಡಾ 30 ರಷ್ಟು ಕಡಿಮೆಯಾಗಿದೆ. ಪಾವತಿಗಳ ವಿಳಂಬದಿಂದ ಹಲವಾರು ಆಸ್ಪತ್ರೆಗಳು ಯೋಜನೆಯಿಂದ ಹಿಂದೆ ಸರಿಯುತ್ತಿವೆ. ಪರಿಣಾಮವಾಗಿ, ಮಾಜಿ ಸೈನಿಕರು ಚಿಕಿತ್ಸೆಗಾಗಿ ತಮ್ಮ ಖರ್ಚಿನಿಂದಲೇ ಹಣ ಪಾವತಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದು, ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ವಿಳಂಬ ಉಂಟಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನೊಂದು ಪ್ರಮುಖ ವಿಚಾರವಾಗಿ, ಈ ವರ್ಷದ ಹಣಕಾಸು ಮಸೂದೆಯಲ್ಲಿ ಸೇವೆಯಲ್ಲಿರುವ ಸೈನಿಕರ ಅಂಗವೈಕಲ್ಯ ಪಿಂಚಣಿಯ ಮೇಲೆ ಆದಾಯ ತೆರಿಗೆ ವಿಧಿಸುವ ಪ್ರಸ್ತಾಪವನ್ನು ಅವರು ತೀವ್ರವಾಗಿ ವಿರೋಧಿಸಿದ್ದಾರೆ. 1922ರಿಂದ ಈವರೆಗೆ ಅಂಗವೈಕಲ್ಯ ಪಿಂಚಣಿಗೆ ತೆರಿಗೆ ವಿಧಿಸುವ ಪರಿಸ್ಥಿತಿ ಉದ್ಭವಿಸಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಂಗವೈಕಲ್ಯ ಪಿಂಚಣಿ ಆದಾಯವಲ್ಲ, ಅದು ಸೇವೆಯ ಸಂದರ್ಭದಲ್ಲಿ ಉಂಟಾದ ಗಾಯಗಳಿಗೆ ನೀಡುವ ಪರಿಹಾರವಾಗಿದೆ. ಆದ್ದರಿಂದ, ಅದಕ್ಕೆ ತೆರಿಗೆ ವಿಧಿಸುವುದು ನ್ಯಾಯಸಮ್ಮತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಸೈನಿಕರ ನಿಯೋಗವು ತಮ್ಮನ್ನು ಭೇಟಿ ಮಾಡಿ ಈ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸರ್ಕಾರವು ತಕ್ಷಣ ಕ್ರಮ ಕೈಗೊಂಡು ಮಾಜಿ ಸೈನಿಕರ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande