
ಜೈಪುರ್, 28 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಜ್ಮೀರ್ನಲ್ಲಿ ಗರ್ಭಕಂಠದ ಕ್ಯಾನ್ಸರ್ ವಿರುದ್ಧದ ರಾಷ್ಟ್ರೀಯ ಎಚ್ ಪಿವಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ, ರಾಜ್ಯದ ಜನತೆಗೆ ₹16,686 ಕೋಟಿ ಮೌಲ್ಯದ 43 ಪ್ರಮುಖ ಕಾಮಗಾರಿಗಳು ಮತ್ತು ಯೋಜನೆಗಳನ್ನು ಸಮರ್ಪಿಸಿದರು.
ಕಾಯದ್ ವಿಶ್ರಾಮಸ್ಥಳಿಯ ಲಸಿಕಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ 9ರಿಂದ 14 ವರ್ಷದ ಐದು ಬಾಲಕಿಯರೊಂದಿಗೆ ಸಂವಾದ ನಡೆಸಿದರು. ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಜಾಗತಿಕವಾಗಿ ಶೇ.99ಕ್ಕೂ ಹೆಚ್ಚು ಪ್ರಕರಣಗಳಿಗೆ ಎಚ್ ಪಿವಿ ಸೋಂಕೇ ಪ್ರಮುಖ ಕಾರಣವೆಂದು ಅವರು ತಿಳಿಸಿದರು. ಲಸಿಕೆ ಪಡೆಯಲು ಯು-ವಿನ್ ವೇದಿಕೆಯಲ್ಲಿ ಕಡ್ಡಾಯ ನೋಂದಣಿ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯಪಾಲ ಹರಿಭಾವು ಬಾಗ್ಡೆ ಹಾಗೂ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಉಪಸ್ಥಿತರಿದ್ದರು.
₹4,516 ಕೋಟಿಗೂ ಅಧಿಕ ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು. ಬಂಡಿಕುಯಿ–ಜೈಪುರ ನಾಲ್ಕು ಪಥದ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ, ದೆಹಲಿ–ವಡೋದರಾ ಪ್ರವೇಶ ನಿಯಂತ್ರಿತ ಎಕ್ಸ್ಪ್ರೆಸ್ವೇ ಪ್ಯಾಕೇಜ್–14 ಸೇರಿದಂತೆ ಹಲವು ಕಾಮಗಾರಿಗಳು ಇದರಲ್ಲಿ ಸೇರಿವೆ. ರಾಷ್ಟ್ರೀಯ ಹೆದ್ದಾರಿ 248A, 89 ಸೇರಿದಂತೆ ವಿವಿಧ ಮಾರ್ಗಗಳ ಅಗಲೀಕರಣ, ಬಲಪಡಿಸುವ ಕಾಮಗಾರಿಗಳು ಕೈಗೊಳ್ಳಲಾಗುತ್ತಿದೆ.
ಜೈಪುರ, ಜೋಧಪುರ, ಬರಾನ್, ಸವಾಯಿಮಾಧೋಪುರ್ ಸೇರಿದಂತೆ ವಿವಿಧ ನಗರಗಳಲ್ಲಿ ಎತ್ತರದ ರಸ್ತೆ ಹಾಗೂ ನಾಲ್ಕು ಪಥದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಜೋಧ್ಪುರ ಪಾಲಿ ಮಾರ್ವಾರ್ ಕೈಗಾರಿಕಾ ಪ್ರದೇಶದಲ್ಲಿ ₹526 ಕೋಟಿ ಮೌಲ್ಯದ ಮೂಲಸೌಕರ್ಯ ಯೋಜನೆಗಳಿಗೆ ಅಡಿಪಾಯ ಹಾಕಲಾಯಿತು. ನೊನೆರಾ, ಪರ್ವಾನ್ ಅಕಾವಾದ್ ಹಾಗೂ ಬಿಕಾನೆರ್ ಪ್ರಮುಖ ಕುಡಿಯುವ ನೀರಿನ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಪ್ಯಾಕೇಜ್ಗಳನ್ನು ಘೋಷಿಸಲಾಯಿತು.
ಇದೇ ವೇಳೆ ₹3,616 ಕೋಟಿ ಮೌಲ್ಯದ ವಿದ್ಯುತ್ ಪ್ರಸರಣ ವ್ಯವಸ್ಥೆ ಉದ್ಘಾಟನೆಯಾಗಿ, ಐದು 220 ಕೆವಿ ಹಾಗೂ ಎರಡು 400 ಕೆವಿ ಗ್ರಿಡ್ ಸಬ್ಸ್ಟೇಷನ್ಗಳ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 21,863 ಯುವಕರಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಪಟ್ವಾರಿ, ತಾಂತ್ರಿಕ ಸಹಾಯಕರು, ಜಾನುವಾರು ಸಹಾಯಕರು, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ಹಲವು ಹುದ್ದೆಗಳು ಇದರಲ್ಲಿವೆ.
ಆರೋಗ್ಯ, ರಸ್ತೆ, ಕುಡಿಯುವ ನೀರು, ಕೈಗಾರಿಕೆ ಹಾಗೂ ಇಂಧನ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯ ಕಾರ್ಯಗಳು ಮುಂದುವರಿಯಲಿವೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa