
ನವದೆಹಲಿ, 17 ಫೆಬ್ರವರಿ (ಹಿ.ಸ.):
ಆ್ಯಂಕರ್:
ಕೃತಕ ಬುದ್ಧಿಮತ್ತೆ ಭಾರತದ ತಾಂತ್ರಿಕ ಪ್ರಗತಿಗೆ ಹೊಸ ಅಧ್ಯಾಯವನ್ನು ಸೇರಿಸಿ, ದೇಶವನ್ನು ಜಾಗತಿಕ ಜ್ಞಾನದ ಸೂಪರ್ ಪವರ್ ಆಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಮಂಗಳವಾರ ಭಾರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ-2026’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ “ಭಾರತದಲ್ಲಿ ಎಐ ಗಡಿಗಳನ್ನು ತಳ್ಳುವುದು” ಎಂಬ ವಿಶೇಷ ಅಧಿವೇಶನದಲ್ಲಿ ಮಾತನಾಡಿದರು. ಈ ಶೃಂಗಸಭೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಉಪಕ್ರಮದ ಭಾಗವಾಗಿದ್ದು, ಭಾರತದಲ್ಲಿ ಎಐ ಅಭಿವೃದ್ಧಿಯನ್ನು ಉತ್ತೇಜಿಸಿ ಜಾಗತಿಕ ವೇದಿಕೆಯಲ್ಲಿ ದೇಶದ ಸಾಮರ್ಥ್ಯವನ್ನು ಪ್ರದರ್ಶಿಸುವುದು ಇದರ ಉದ್ದೇಶ ಎಂದು ಹೇಳಿದರು.
ಭಾರತವು ವೇಗವಾಗಿ ಎಐ ಅನ್ನು ಅಳವಡಿಸಿಕೊಳ್ಳುತ್ತಿದ್ದು, “ಅಭಿವೃದ್ಧಿ ಹೊಂದಿದ ಭಾರತ 2047” ಗುರಿ ಸಾಧನೆಗೆ ಇದು ನಿರ್ಣಾಯಕವಾಗಲಿದೆ ಎಂದು ಪ್ರಧಾನ್ ತಿಳಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಎಐ ಬಳಕೆ ಮತ್ತು ಎಐ ಆಧಾರಿತ ಕಲಿಕೆ ಪರಸ್ಪರ ಪೂರಕವಾಗಿದ್ದು, ಯುವಜನತೆ ಹೊಸ ಚಿಂತನೆ ಮತ್ತು ನವೀನತೆಯ ಮೂಲಕ ಎಐ ಶಕ್ತಿಯನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಎಐ ಸಂಯೋಜನೆಗೆ ಸಚಿವಾಲಯ ಒತ್ತು ನೀಡಿದ್ದು, ಕಳೆದ ದಶಕದಲ್ಲಿ ಡಿಜಿಟಲ್ ವೇದಿಕೆಗಳು, ನೀತಿ ಚೌಕಟ್ಟುಗಳು, ಸಾಂಸ್ಥಿಕ ಸುಧಾರಣೆಗಳು ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಎಐ-ಸಕ್ರಿಯಗೊಳಿಸಿದ ಮೂಲಸೌಕರ್ಯ ನಿರ್ಮಾಣ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಜಯಂತ್ ಚೌಧರಿ ಮಾತನಾಡಿ, ಪ್ರಾಥಮಿಕ ಶಿಕ್ಷಣದಿಂದ ಸಂಶೋಧನೆ ಮತ್ತು ಜಾಗತಿಕ ನಾಯಕತ್ವದವರೆಗೆ ಎಐ ಏಕೀಕರಣದ ಕುರಿತು ಶೃಂಗಸಭೆಯಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆದಿವೆ ಎಂದು ಹೇಳಿದರು.
ಬಜೆಟ್ ಘೋಷಣೆಯ ನಂತರ ಸರ್ಕಾರವು ಐಐಟಿ ಮದ್ರಾಸ್ ನಲ್ಲಿ ಶಿಕ್ಷಣದಲ್ಲಿ ಎಐ ಗಾಗಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಿದೆ. ಅಧಿವೇಶನದಲ್ಲಿ ಉದ್ಯಮ ಮತ್ತು ಹೂಡಿಕೆ ವಲಯದ ಗಣ್ಯರು ಭಾಗವಹಿಸಿದರು. ಇವರಲ್ಲಿ ಜೊಹೊ ಕಾರ್ಪೊರೇಷನ್ ಸ್ಥಾಪಕ ಮತ್ತು ಸಿಇಒ ಡಾ. ಶ್ರೀಧರ್ ವೆಂಬು, ಪೀಕ್ XV ಪಾರ್ಟ್ನರ್ಸ್ ವ್ಯವಸ್ಥಾಪಕ ನಿರ್ದೇಶಕ ರಾಜನ್ ಆನಂದನ್, ಐಐಟಿ ಕಾನ್ಪುರ ನಿರ್ದೇಶಕ ಪ್ರೊ. ಮನೀಂದ್ರ ಅಗರವಾಲ್, ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ, ಐಐಟಿ ಜಮ್ಮು ನಿರ್ದೇಶಕ ಪ್ರೊ. ಮನೋಜ್ ಎಸ್. ಗೌರ್ ಸೇರಿದಂತೆ ಹಲವು ತಜ್ಞರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa