ನವದೆಹಲಿ, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹಲವು ದಿನಗಳಿಂದ ಉಕ್ಕಿ ಹರಿಯುತ್ತಿರುವ ಯಮುನಾ ನದಿಯ ನೀರಿನ ಮಟ್ಟ ದೆಹಲಿಯಲ್ಲಿ ನಿಧಾನವಾಗಿ ಇಳಿಕೆಯಾಗುತ್ತಿದೆ. ಇಂದು ಬೆಳಿಗ್ಗೆ ಹಳೆಯ ರೈಲ್ವೆ ಸೇತುವೆ (ಲೋಹಾ ಪುಲ್) ಬಳಿ ನೀರಿನ ಮಟ್ಟ 207.33 ಮೀಟರ್ ದಾಖಲಾಗಿದೆ. ಬುಧವಾರ ಇದು ಈ ಋತುವಿನ ಗರಿಷ್ಠ 207.48 ಮೀಟರ್ ತಲುಪಿತ್ತು.
ಅಧಿಕಾರಿಗಳ ಪ್ರಕಾರ, ಬೆಳಿಗ್ಗೆ 6 ಗಂಟೆಗೆ ನೀರಿನ ಮಟ್ಟ 207.35 ಮೀಟರ್ ಇತ್ತು. ಸಂಜೆ ವೇಳೆಗೆ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಆದರೆ, ನದಿ ಅಪಾಯದ ಮಟ್ಟವನ್ನು ಇನ್ನೂ ಮೀರಿರುವುದರಿಂದ ತಗ್ಗು ಪ್ರದೇಶಗಳಲ್ಲಿ ಜಲಾವೃತ ಸ್ಥಿತಿ ಮುಂದುವರಿದಿದೆ.
ಹರಿಯಾಣದ ಹತ್ನಿ ಕುಂಡ್ ಬ್ಯಾರೇಜ್ನಿಂದ ಕಳೆದ ಕೆಲ ದಿನಗಳಲ್ಲಿ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ. ಸೋಮವಾರ ಗರಿಷ್ಠ 3.29 ಲಕ್ಷ ಕ್ಯೂಸೆಕ್, ಮಂಗಳವಾರ 2 ಲಕ್ಷ ಕ್ಯೂಸೆಕ್ ಹಾಗೂ ಬುಧವಾರ 1.75 ಲಕ್ಷ ಕ್ಯೂಸೆಕ್ ನೀರನ್ನು ಹರಿಯಬಿಡಲಾಗಿತ್ತು. ಪರಿಣಾಮವಾಗಿ, ಯಮುನಾ ಬಜಾರ್, ರಿಂಗ್ರೋಡ್, ಖಾದರ್ ಪ್ರದೇಶ, ರಾಜ್ಘಾಟ್–ಕಾಶ್ಮೀರಿ ಗೇಟ್ ರಸ್ತೆ ಭಾಗ ಜಲಾವೃತಗೊಂಡಿವೆ.
ದೆಹಲಿ, ಉತ್ತರ, ಈಶಾನ್ಯ, ಶಹದಾರ, ಮಧ್ಯ ಮತ್ತು ಆಗ್ನೇಯ ಜಿಲ್ಲೆಗಳಲ್ಲಿ ವಿಶೇಷ ಎಚ್ಚರಿಕಾ ಕ್ರಮ ಜಾರಿಯಲ್ಲಿದೆ. ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
ಜಿಲ್ಲಾಡಳಿತವು ನಾಗರಿಕರಿಗೆ ನದಿಯಲ್ಲಿ ಈಜುವುದು, ದೋಣಿ ವಿಹಾರ ಅಥವಾ ಮನರಂಜನೆಗಾಗಿ ಪ್ರವೇಶಿಸದಂತೆ ಎಚ್ಚರಿಕೆ ನೀಡಿದೆ. ಲೋಹಾ ಪುಲ್ ಬಳಿ ಪರಿಸ್ಥಿತಿಯನ್ನು 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa