ನೆಟ್ವರ್ಕ್ ಇಲ್ಲದ ಗ್ರಾಮಗಳಲ್ಲಿ ಸಾಮಾಜಿಕ ಸಮೀಕ್ಷೆಗೆ ಕೋಲಾರ ಜಿಲ್ಲಾಡಳಿತದಿಂದ ವಿಶೇಷ ಶಿಬಿರ
ನೆಟ್ವರ್ಕ್ ಇಲ್ಲದ ಗ್ರಾಮಗಳಲ್ಲಿ ಸಾಮಾಜಿಕ ಸಮೀಕ್ಷೆಗೆ ಕೋಲಾರ ಜಿಲ್ಲಾಡಳಿತದಿಂದ ವಿಶೇಷ ಶಿಬಿರ
ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ


ಕೋಲಾರ, ೨೮ ಸೆಪ್ಟೆಂಬರ್ (ಹಿ.ಸ) :

ಆ್ಯಂಕರ್ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಅಕ್ಟೋಬರ್ .೭ ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಈ ಸಮೀಕ್ಷೆಗೆ ಮೊಬೈಲ್ ನೆಟ್ವರ್ಕ್ ಸಂಪರ್ಕ ಸಮಸ್ಯೆ ಎದುರಾದ ಗ್ರಾಮಗಳಲ್ಲಿ ಇತರೆ ಯಾವುದಾದರೂ ಸರ್ಕಾರಿ ಕಟ್ಟಡದಲ್ಲಿ ವಿಶೇಷ ಶಿಬಿರ ಏರ್ಪಡಿಸಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ೬ ನೆಟ್‌ವರ್ಕ್ ಇಲ್ಲದ ಗ್ರಾಮಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ಇಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಸಮೀಕ್ಷೆಯನ್ನು ಆನ್‌ಲೈನ್ ಆಯಪ್ ಮೂಲಕ ಮಾಡಬೇಕಿದ್ದು, ಗಡಿ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇದ್ದು, ಸಮೀಕ್ಷೆ ಕಷ್ಟವಾಗುತ್ತಿದೆ. ಈ ಹಿಂದೆ ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ವೇಳೆ ಆಗಿರುವ ತೊಂದರೆ ಗಮನದಲ್ಲಿ ಇರಿಸಿಕೊಂಡು ಸಮೀಕ್ಷೆ ಸುಗಮಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ನೆಟ್‌ವರ್ಕ್ ಇಲ್ಲದ ಗ್ರಾಮಗಳಲ್ಲಿ ಕ್ಯಾಂಪ್‌ಗಳನ್ನು ನಡೆಸಿ ಸಮೀಕ್ಷೆ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ. ಸಮೀಪದಲ್ಲಿ ನೆಟ್‌ವರ್ಕ್ ಇರುವ ಸ್ಥಳಗಳಲ್ಲಿನ ಸರ್ಕಾರಿ ಕಚೇರಿಗಳನ್ನು ಗುರುತಿಸಲಾಗಿದೆ. ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಹೋಬಳಿಯ, ಬೈರಗನಪಲ್ಲಿ ಗ್ರಾಮಪಂಚಾಯ್ತಿಯ ಚಿಲ್ಲಾರಪಲ್ಲಿ ಗ್ರಾಮಸ್ಥರು ಬೈರಗನಪಲ್ಲಿ ಗ್ರಾಮಪಂಚಾಯತ್ ಕಟ್ಟಡದಲ್ಲಿ, ಕೋಡಪಲ್ಲಿ ಗ್ರಾಮಪಂಚಾಯ್ತಿಯ ತಿಮ್ಮನಪಲ್ಲಿ ಗ್ರಾಮಸ್ಥರು ಬೈರಾಗನಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೂರಿಗೇಪಲ್ಲಿ ಗ್ರಾಮಪಂಚಾಯ್ತಿಯ ಮಂಗಸವಾರಿಪಲ್ಲಿಯ ಗ್ರಾಮಸ್ಥರು ಕದಿರಂಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಮೀಕ್ಷೆಗೆ ಮಾಹಿತಿ ನೀಡಬಹುದಾಗಿದೆ.

ನೆಲವಂಕಿ ಹೋಬಳಿಯ ಪಾತನೆಲವಂಕಿ ಗ್ರಾಮಪಂಚಾಯತಿಯ ಕೊಪ್ಪವಾರಿಪಲ್ಲಿ ಗ್ರಾಮಸ್ಥರು ಕೊಪ್ಪವಾರಿಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪುಲುಗುರಿಕೋಟ ಗ್ರಾಮಪಂಚಾಯ್ತಿಯ ಕೊತ್ತಬಾಲಪಲ್ಲಿ ಗ್ರಾಮಸ್ಥರು ಕೊತ್ತಬಾಲಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಪಂಡಿವಾರಿಪಲ್ಲಿ ಗ್ರಾಮಸ್ಥರು ಅದೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಈ ರೀತಿಯ ಕ್ಯಾಂಪ್‌ಗಳಲ್ಲಿ ಮಾಹಿತಿ ನೀಡಬಹುದು. ಶಿಬಿರಗಳಲ್ಲಿ ದಿನಕ್ಕೆ ೫ರಿಂದ ೧೦ ಕುಟುಂಬಗಳಿಗೆ ಸಮಯ ನಿಗದಿ ಮಾಡಿ ಕರೆಸಿಕೊಂಡು ಸಮೀಕ್ಷೆ ನಡೆಸಲಾಗುವುದು. ಶಿಬಿರ ನಡೆಸುವ ಸ್ಥಳದ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ಸಮೀಕ್ಷೆಯಿಂದ ಯಾರೊಬ್ಬರೂ ಹೊರಗುಳಿಯದಂತೆ ಕ್ರಮ ವಹಿಸಲಾಗಿದೆ. ಈ ಸಮೀಕ್ಷೆ ಸಂಪೂರ್ಣವಾಗಿ ಐಚ್ಚಿಕ ವಾಗಿದ್ದು, ಸಾರ್ವಜನಿಕರು ಸ್ವಇಚ್ಛೆ ಯಿಂದ ಸಮೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿತ್ರ : ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande