ಗದಗ, 27 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ನೆಲ ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಇಲ್ಲಿಂದ 20 ಕಿ.ಮೀ ಸುತ್ತಲೂ ವಿಶ್ವ ಪಾರಂಪರಿಕ ಸ್ಥಳ ಆಗಲು ಅರ್ಹತೆ ಪಡೆದ ಸ್ಥಳಗಳಾಗಿವೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಅವರು ಹೇಳಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪ್ರವಾಸೋದ್ಯಮ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಇವರುಗಳ ಸಹಯೋಗದಲ್ಲಿ ವಿವಿ ಕೌಸಲ್ಯ ವಿಕಾಸ ಭವನದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನ-2025 ಕಾರ್ಯಕ್ರಮ ಉದ್ಘಾಟಿಸಿ ಸಚಿವ ಎಚ್ ಕೆ ಪಾಟೀಲ ಅವರು ಮಾತನಾಡಿದರು.
ಹತ್ತಿರದ ಲಕ್ಕುಂಡಿಯಲ್ಲಿ ತಲಾ 101 ಭಾವಿ, ದೇವಸ್ಥಾನಗಳಿವೆ. ವಿಶಾಲವಾದ ಕೆರೆ, ದೊಡ್ಡಬಸಪ್ಪನ ದೇವಾಲಯದ ಶೈಲಿ ಡಂಬಳದಲ್ಲಿದೆ. ಪ್ರಾಚಿನವಾದ ದೇವಾಲಯ, ಪರಿಸರ, ಸೌಹಾರ್ದಯುತ ಬದುಕು ಮುಳಗುಂದದಲ್ಲಿ ಸಿಗುತ್ತವೆ. ಗದಗ ತಾಲ್ಲೂಕ ಸೇರಿದಂತೆ, ಜಿಲ್ಲೆಯ ಸೂಡಿ, ಕೊಟಮುಚಗಿ, ಗಜೇಂದ್ರಗಡ, ನರಗುಂದ ಇವೆಲ್ಲವೂ ಪ್ರವಾಸಿ ತಾಣಗಳಾಗಿವೆ. ಇವೆಲ್ಲವುಗಳು ಗದಗ ಜಿಲ್ಲೆಯಲ್ಲಿರುವುದು ನಮಗೆಲ್ಲ ಹೆಮ್ಮೆ ಎಂದರು.
ರಾಜ್ಯ ಸರ್ಕಾರದಿಂದ 1,200 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಅದರಲ್ಲಿ 48 ತಾಣಗಳು ಗದಗ ಜಿಲ್ಲೆಯಲ್ಲಿವೆ ಎನ್ನುವುದು ನಮ್ಮ ಹೆಮ್ಮೆಯಾಗಿದೆ. ಕಪ್ಪತ್ತಗುಡ್ಡ, ಪ್ರಾಣಿ ಸಂಗ್ರಹಾಲಯ ಸೇರಿದಂತೆ ಹಲವಾರು ಪ್ರದೇಶಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೆಲವೇ ತಿಂಗಳಲ್ಲಿ ಯುನೆಸ್ಕೊದಿಂದ ಲಕ್ಕುಂಡಿ ಐತಿಹಾಸಿಕ ವಿಶ್ವ ಪಾರಂಪರಿಕ ಸ್ಥಳ ಅಂತ ಗುರುತಿಸುವ ಕಾಲ ಬರಲಿದೆ ಎಂದು ಸಚಿವ ಎಚ್ ಕೆ ಪಾಟೀಲ ಅವರು ವಿಶ್ವಾಸ ವ್ಯಕ್ತ ಪಡಿಸಿದರು.
ಲಕ್ಕುಂಡಿಯಲ್ಲಿ ಈಗಾಗಲೇ ಉತ್ಖನನ ಪ್ರಾರಂಭ ಮಾಡಲಾಗಿದೆ. ಒಂದೇ ದಿನದಲ್ಲಿ 1,100 ಪ್ರಾಚ್ಯಾವಶೇಷಗಳನ್ನು ಸಂಗ್ರಹ ಮಾಡಲಾಗಿದೆ. ನಮ್ಮ ಸುತ್ತ-ಮುತ್ತ ಐತಿಹಾಸಿಕ ಪ್ರಾಚ್ಯಾವಶೇಷ ಸಂಪತ್ತು ಇದೆ. ಇದರ ಬಗ್ಗೆ ವಿಶೇಷ ಅಭಿಮಾನ ಇದೆ. ವಿದೇಶಕ್ಕೆ ಹೊಲಿಕೆ ಮಾಡಿದರೇ ಭಾರತದಲ್ಲಿ ಅತೀ ಹೆಚ್ಚು ಆಶ್ಚರ್ಯಕರ ಪ್ರವಾಸಿ ತಾಣಗಳಿವೆ ಎಂದರು.
ಕರ್ನಾಟಕದ ಕಾಸರಗೋಡದಿಂದ ಕಾರವಾರದ ವರೆಗೆ ಅಂದಾಜು 320 ಕಿ. ಮೀ ಸುಂದರ ಪ್ರವಾಸಿ ತಾಣವಾಗಿದೆ. ಪ್ರವಾಸೋಧ್ಯಮ ಐಶಾರಾಮಿ ಜನರ ಖುಷಿಯ ಉದ್ಯಮ ಅಲ್ಲ. ಪ್ರವಾಸೋಧ್ಯಮ ಜನರ ಮನಸ್ಸಿನಲ್ಲಿ ಬದಲಾವಣೆ ತರವುದಾಗಿದೆ. ಕೋಶ ಓದು, ದೇಶ ಸುತ್ತಬೇಕು ಎನ್ನುವ ಗಾದೆ ಇದೆ. ದೇಶ ಸುತ್ತುವುದರಿಂದ ಬದುಕಿನಲ್ಲಿ ಬದಲಾವಣೆ ಆಗಲು ಸಾಧ್ಯವಾಗುತ್ತದೆ ಎಂದು ಎಚ್ ಕೆ ಪಾಟೀಲ ನುಡಿದರು.
ರಾಜ್ಯ ಸರ್ಕಾರ ಪ್ರವಾಸೋದ್ಯಮಕ್ಕೆ ತನ್ನದೇ ಆದ ನೀತಿ ಹೊಂದಿದೆ. ಪ್ರವಾಸೋದ್ಯಮ ಆದಾಯದ ಮೂಲ ಅಂತ ಹೇಳ್ತಾರೆ. ಆದರೆ, ಪ್ರವಾಸೋದ್ಯಮ ದುಡ್ಡಿಗಾಗಿ ಮಾಡುವುದಲ್ಲ. ಜನರ ಬದುಕಿನಲ್ಲಿ ಜ್ಞಾನಾರ್ಜನೆ ಮಾಡುವ ಕೇಂದ್ರವಾಗಿದೆ ಎಂದು ಹೇಳಿದರು.
ಭಾರತ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ವಿದೇಶದಲ್ಲಿ ಜೋಗ ಜಲಪಾತ, ಶರಾವತಿ ಜಲಪಾತ, ಲಕ್ಕುಂಡಿಯ ಬಸ್ತಿ, ಬಾದಾಮಿ, ಐಹೋಳೆಯಲ್ಲಿರುವ ಐತಿಹಾಸಿಕ ದೇವಸ್ಥಾನಗಳು ಕಾಣಸಿಗುವುದಿಲ್ಲ. ಜಿಲ್ಲೆಯ 48 ತಾಣ ಸೇರಿ ರಾಜ್ಯದ 1200 ತಾಣಗಳು ಒಳಗೊಂಡು ರಾಷ್ಟ್ರ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ. ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ರಾತ್ರಿ ವೇಳೆ ವಿಕ್ಷೀಸಲು ಅವಕಾಶ ಕಲ್ಪಿಸಿಕೊಡಲಾಗುವುದೆಂದು ಸಚಿವರು ತಿಳಿಸಿದರು.
ಇದೇ ವೇಳೆ ನಾನಾ ಸ್ಪರ್ದೆಗಳಲ್ಲಿ ಭಾಗವಹಿಸಿ ಜಯ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ. ಬಿ ಅಸೂಟಿ, ಸಿದ್ದು ಪಾಟೀಲ, ಪ್ರಭು ಬುರಬುರೆ, ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಸುರೇಶ ನಾಡಗೌಡರ, ಜಿಲ್ಲಾಧಿಕಾರಿ ಸಿ. ಎನ್ ಶ್ರೀಧರ್, ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಡಾ. ಶರಣು ಗೋಗೇರಿ, ಗಂಗಪ್ಪ ಎಂ, ಕೊಟ್ರೇಶ್ ವಿಭೂತಿ, ಪ್ರಶಾಂತ್ ಜೆ. ಸಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP