ಕೆಪಿಎಂಇ, ಪಿಸಿಪಿಎನ್‍ಡಿಟಿ ಕಾಯ್ದೆಗಳ ಮಾರ್ಗಸೂಚಿ ಪಾಲನೆಯಾಗಲಿ : ಜಿಲ್ಲಾಧಿಕಾರಿ
ರಾಯಚೂರು, 07 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆ ಮತ್ತು ಕ್ಲಿನಿಕ್‍ಗಳು ಕೆಪಿಎಂಇ ಕಾಯ್ದೆಯಡಿ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ಕೆಪಿಎಂಇ ಕಾಯ್ದೆ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡು ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಹೇ
ಕೆಪಿಎಂಇ, ಪಿಸಿಪಿಎನ್‍ಡಿಟಿ ಕಾಯ್ದೆಗಳ ಮಾರ್ಗಸೂಚಿ ಪಾಲನೆಯಾಗಲಿ : ಜಿಲ್ಲಾಧಿಕಾರಿ


ಕೆಪಿಎಂಇ, ಪಿಸಿಪಿಎನ್‍ಡಿಟಿ ಕಾಯ್ದೆಗಳ ಮಾರ್ಗಸೂಚಿ ಪಾಲನೆಯಾಗಲಿ : ಜಿಲ್ಲಾಧಿಕಾರಿ


ರಾಯಚೂರು, 07 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆ ಮತ್ತು ಕ್ಲಿನಿಕ್‍ಗಳು ಕೆಪಿಎಂಇ ಕಾಯ್ದೆಯಡಿ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ಕೆಪಿಎಂಇ ಕಾಯ್ದೆ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡು ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಹೇಳಿದ್ದಾರೆ.

ಆಗಸ್ಟ್ 7ರಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಕೆಪಿಎಂಇ ಮತ್ತು ಪಿಸಿ&ಪಿಎನ್‍ಡಿಟಿ ಕಾಯ್ದೆಯ ಕುರಿತು ಒಂದು ದಿನದ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಸ್ಪತ್ರೆಗಳು ಸ್ವಚ್ಚವಾಗಿ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಸೇರಿದಂತೆ ಇತರೆ ಸೌಕರ್ಯ ಹೊಂದಿರಬೇಕು. ಕೆಲವು ಕ್ಲಿನಿಕ್‍ಗಳು ಮತ್ತು ಆಸ್ಪತ್ರೆಗಳು ಕೆಪಿಎಂಇ ಕಾಯ್ದೆ ಬಗ್ಗೆ ಗೊತ್ತಿದ್ದರು ಸಹ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದಿಲ್ಲ. ಇದರಿಂದಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತಂಡವೊಂದು ಬಂದು ಪರಿಶೀಲನೆ ನಡೆಸಿ ದಂಡ ವಿಧಿಸಿದೆ ಎಂದರು.

ಕೆಪಿಎಂಇ ಕಾಯ್ದೆ ಸರಿಯಾಗಿ ಪಾಲನೆ ಮಾಡಬೇಕು ಎಂದು ತಿಳಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ. ಗ್ರಾಮೀಣ ಭಾಗದಲ್ಲಿ ಆರ್‍ಎಂಪಿ ವೈದ್ಯರು ಕ್ಲಿನಿಕ್ ಇಟ್ಟುಕೊಂಡು ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಡೋಸ್ ನೀಡುತ್ತಾರೆ. ಕಾಯ್ದೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳುತ್ತಿಲ್ಲ. ಪರವಾನಗಿ ಇಲ್ಲದೆ ಆಸ್ಪತ್ರೆ ನಡೆಸುವವರ ವಿರುದ್ಧ ಕ್ರಮ ವಹಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಕೆಪಿಎಂಇ ಕಾಯ್ದೆ ಉಲ್ಲಂಘನೆ ಮಾಡುವ ಆಸ್ಪತ್ರೆಗಳ ವಿರುದ್ಧ ದಂಡ ವಿಧಿಸಿ ದೂರು ದಾಖಲು ಮಾಡಲಾಗುತ್ತದೆ ಎಂದು ತಿಳಿಸಿದರು.

ಕೆಪಿಎಂಇ ಕಾಯ್ದೆ ಜಾರಿಯಾಗಿ ಸುಮಾರು ವರ್ಷಗಳಾದರೂ ಪಾಲನೆ ಮಾಡದೇ ಇರುವುದರಿಂದ ಸಾಕಷ್ಟು ಅನಾಹುತಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆಗಳು ಮತ್ತು ಕ್ಲಿನಿಕ್‍ಗಳು ಬಗ್ಗೆ ಮಾಹಿತಿ ಪಡೆದುಕೊಂಡು ಪರಿಶೀಲನೆ ಮಾಡಬೇಕು. ಐಎಂಎ ವೈದ್ಯಕೀಯ ಸಂಘವೂ ಇದಕ್ಕೆ ಬೆಂಬಲವಾಗಿದ್ದು, ಕಾಯ್ದೆಯನ್ನು ಪಾಲನೆ ಮಾಡುವಂತೆ ಹೇಳಿದರು.

ಈ ವೇಳೆ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷರಾದ ಶೈಲೇಶ ಅಮರಖೇಡ್ ಅವರು ಮಾತನಾಡಿ, ಜಿಲ್ಲೆಯಲ್ಲಿರುವ ಅನೇಕ ಆಸ್ಪತ್ರೆ ಮತ್ತು ಕ್ಲಿನಿಕ್‍ಗಳಿಗೆ ಕೆಪಿಎಂಇ ಕಾಯ್ದೆ ಬಗ್ಗೆ ಮಾಹಿತಿ ಇಲ್ಲ. ಇದ್ದರು ಸರಿಯಾಗಿ ಪಾಲನೆ ಮಾಡುತ್ತಿಲ್ಲ. 1994 ರಲ್ಲಿ ಕಾಯ್ದೆ ಜಾರಿಯಾಗಿದೆ. ಆಸ್ಪತ್ರೆಯಲ್ಲಿ ಗುಣಮಟ್ಟದ ಆರೋಗ್ಯವು ಪ್ರತಿಯೊಬ್ಬ ಜನಸಾಮಾನ್ಯರಿಗೂ ದೊರೆಯಲು ಈ ಕಾಯ್ದೆ ಜಾರಿಗೊಳಿಸಲಾಗಿದೆ. ಕೆಪಿಎಂಇ ಕಾಯ್ದೆ ಉಲ್ಲಂಘನೆ ಮಾಡುವುದು ಸರಿಯಲ್ಲ. ವೈದ್ಯಕೀಯ ವೃತ್ತಿಯಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬರು ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಬೇಕು ಎಂದರು.

ಈ ವೇಳ ಪಿಸಿಪಿಎನ್‍ಡಿಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷರಾದ ಡಾ.ಶಿವಪ್ಪ ಮಾಲಿಪಾಟೀಲ್ ಅವರು ಮಾತನಾಡಿ, ಮಹಾರಾಷ್ಟ್ರ ರಾಜ್ಯವು ಪಿಸಿಪಿಎನ್‍ಡಿಟಿ ಕಾಯ್ದೆಯ ಜಾರಿ ತಂದ ಮೊದಲ ರಾಜ್ಯವಾಗಿದೆ. ಪ್ರಸವಪೂರ್ವ ರೋಗನಿರ್ಣಯ ತಂತ್ರಗಳ ಕಾಯ್ದೆಯನ್ನು 1994 ರಲ್ಲಿ ಅಂಗೀಕರಿಸಲಾಯಿತು ಎಂದರು. ಪಿಎನ್‍ಡಿಟಿ ನೋಂದಣಿ, ಎಮ್‍ಟಿಪಿ ನೋಂದಣಿ ಬಗ್ಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಗಜಾನನ ಬಾಳೆ, ಬಸವಣ್ಣೆಪ್ಪ ಕುಲಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಕೆ.ಪಿ.ಎಂ.ಇ. ಕಾಯ್ದೆ ರಾಜ್ಯ ಸಮಿತಿ ಸದಸ್ಯರಾದ ಡಾ.ಮಧುಸೂದನ್ ಕಾರಿಗನೂರು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಕುಮಾರ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ಗಣೇಶ್, ಡಾ.ಎಂ.ಡಿ.ಶಾಕೀರ್, ಡಾ.ಚಂದ್ರಶೇಖರಯ್ಯ, ಡಾ.ಯಶೋಧ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ವ್ಯವಸ್ಥಾಪಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande