ಗದಗ, 07 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗ್ರಾಮೀಣ ಪ್ರದೇಶಗಳು ಶುಚಿತ್ವದಿಂದ ಕೂಡಿದ್ದರೆ ಗ್ರಾಮದಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಹರಡಲು ಸಾಧ್ಯವಾಗದು. ಗ್ರಾಮಕ್ಕೆ ರೋಗದ ಆಹ್ವಾನ ನೀಡುವವರು ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಕುತ್ತಾರೆ. ಗ್ರಾಮಕ್ಕೆ ಯಾವುದೇ ರೋಗ ಬರಬಾರದು ಎನ್ನುವವರು ಗ್ರಾಪಂ ನೀಡುವ ಮಾರ್ಗದರ್ಶನದಂತೆ ಕಸ ವಿಲೇವಾರಿ ಮಾಡಿ ತಮ್ಮ ಗ್ರಾಮವನ್ನು ಸ್ವಚ್ಛಂದವಾಗಿಟ್ಟುಕೊಳ್ತಾರೆ. ಇಡೀ ಗ್ರಾಮವೇ ಸ್ವಚ್ಛತೆಯಿಂದ ಕೂಡಿದ್ದರೆ ಗ್ರಾಮದ ಮಕ್ಕಳ ಭವಿಷ್ಯವು ಉಜ್ವಲವಾಗಿರುತ್ತದೆ. ಹೀಗೆ ಗ್ರಾಮೀಣ ಭಾಷೆಯ ಸೊಗಡಿನಲ್ಲೇ ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಕಸ ವಿಲೇವಾರಿ ಬಗ್ಗೆ ಗ್ರಾಮಸ್ಥರಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ, ಕಂದಕೂರು ಜಾಗೃತಿ ಮೂಡಿಸಿದ ವಿನೂತನ ಪ್ರಯತ್ನ ನೆರೆದ ಸಾರ್ವಜನಿಕರಲ್ಲಿ ಮತ್ತು ಗ್ರಾಮಸ್ಥರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿತು.
ಗದಗ ಜಿಲ್ಲೆಯ ಮಾರನಬಸರಿ ಗ್ರಾಮ ಪಂಚಾಯತ ಅಧ್ಯಕ್ಷ ವೀರಣ್ಣ ಮರಡಿ ಮತ್ತು ಸಹಾಯಕ ನಿರ್ದೇಶಕರು ಉದ್ಯೋಗ ಖಾತರಿ ಬಸವರಾಜ ಬಡಿಗೇರ ಹಾಗೂ ಪಿಡಿಒ ಎಸ್.ಆರ್.ಸಂಕನೂರ ಅವರ ಜೊತೆಗೂಡಿ ಮಾರನಬಸರಿ ಗ್ರಾಮದ ಹಳೆ ಪಂಚಾಯತ ಆವರಣ, ಬಸವೇಶ್ವರ ಓಣಿ, ಸಂಗೊಳ್ಳಿರಾಯಣ್ಣ ವೃತ್ತ ಹಾಗೂ ಬಸ್ ನಿಲ್ದಾಣದ ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಿದರು.
ಮನೆಯಲ್ಲಿ ಬಳಸಿ ಬೇಡವಾದ ಕಸವನ್ನು ಒಣ ಕಸ ಮತ್ತು ಹಸಿ ಕಸ ಎಂದು ಬೇರ್ಪಡಿಸಿ. ಒಣ ಕಸ ಮತ್ತು ಹಸಿ ಕಸ ಸಂಗ್ರಹಕ್ಕೆ ಗ್ರಾಪಂ ಅವರು ಪ್ರತ್ಯೇಕವಾಗಿ ಕಸದಬುಟ್ಟಿ ನೀಡಿದ್ದಾರೆ. ಕಸದಬುಟ್ಟಿಯಲ್ಲೇ ಕಸ ಸಂಗ್ರಹಿಸಿ ಕಸದ ವಾಹಿನಿ ಬಂದಾಗ ಸ್ವಚ್ಛತೆಗಾರರ ಮೂಲಕ ಕಸದವಾಹಿನಿಗೆ ಕಸ ಹಾಕಿ. ಮನೆ-ಗ್ರಾಮ ಕಸ ಮುಕ್ತವಾದರೆ ಗ್ರಾಮದ ವಾತಾವರಣ ಆರೋಗ್ಯಯುತವಾಗುತ್ತದೆ. ಇದಕ್ಕೆ ಮಾರನಬಸರಿ ಗ್ರಾಪಂ ಸಿಬ್ಬಂದಿ ಶ್ರಮಿಸುತ್ತಿದ್ದು ಗ್ರಾಮಸ್ಥರು ಕೂಡಾ ಕೈಜೋಡಿಸಿದಾಗ ಮಾತ್ರ ಗಾಂಧಿಜೀ ಅವರು ಕಂಡ ಗ್ರಾಮಗಳ ಅಭಿವೃದ್ಧಿ ಕನಸು ಕಾಣಲು ಸಾಧ್ಯ ಅಂತ ಗ್ರಾಮಸ್ಥರಲ್ಲಿ ತಿಳುವಳಿಕೆ ಮೂಡಿಸಿದರು.
ಇನ್ನೂ ಕಿರಾಣಿ ಅಂಗಡಿ, ಹೋಟೆಲ್ ಗಳಿಗೆ ತೆರಳಿ ಮಾಲೀಕರಲಿ ಸ್ವಚ್ಛತೆಯ ಪಾಠ ಮಾಡಿದ ಇಒ ಚಂದ್ರಶೇಖರ ಕಂದಕೂರ, ಪ್ಲಾಸ್ಟಿಕ್ ಕವರ್ ಗಳನ್ನು ಹೊರಗಡೆ ಬಿಸಾಡದೇ ಕಸದಬುಟ್ಟಿಯಲ್ಲಿ ಸಂಗ್ರಹಿಸಿ, ಅಂಗಡಿಗೆ ಬರುವ ಗ್ರಾಹಕರಲ್ಲಿ ಪ್ಲಾಸ್ಟಿಕ್ ಹಾಳೆ ತರದೆ ಪರಿಸರ ಸ್ನೇಹಿ ಕೈಚೀಲ ತಂದು ದಿನಸಿ ಖರೀದಿಸಿ ಅಂತ ತಿಳುವಳಿಕೆ ಮೂಡಿಸಿ ಎಂದರು. ಹೋಟೆಲ್ ಗಳಿಗೂ ತೆರಳಿ ಹೋಟೆಲ್ ಒಳಗಿನ ವಾತಾವರಣ ಪರಿಶೀಲಿಸಿ ಆಹಾರದ ತ್ಯಾಜ್ಯವನ್ನು ಸರಿಯಾದ ಕ್ರಮದಲ್ಲಿ ಸಂಗ್ರಹಿಸಿ ಕಸದವಾಹಿನಿಗೆ ಹಾಕಲು ಮನವಿ ಮಾಡಿದರು.
ಮಹಿಳಾ ಸಬಲೀಕರಣಕ್ಕೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸ್ವಚ್ಛ ಭಾರತ್ ಮಿಶನ್ ಅಡಿ ಕಸ ವಿಲೇವಾರಿ ವಾಹನಕ್ಕೆ ಮಹಿಳಾ ಡ್ರೈವರಗಳನ್ನೇ ನೇಮಕ ಮಾಡಲಾಗಿದೆ. ಮಾರನಬಸರಿ ಕಸದ ವಾಹಿನಿ ಡ್ರೈವರ್ ಗೀತಾ ಹಾದಿಮನಿ ಅವರ ಜೊತೆ ಇಒ ಚಂದ್ರಶೇಖರ ಕಂದಕೂರ ಸಮಾಲೋಚನೆ ನಡೆಸಿ ಪ್ರಾಮಾಣಿಕವಾಗಿ ತಮ್ಮ ಕೆಲಸವನ್ನು ನಿರ್ವಹಿಸುವಂತೆ ಸೂಚಿಸಿದರು. ನಿಮ್ಮ ಗ್ರಾಮಕ್ಕೆ ನೀವೇ ಸ್ವಚ್ಛತೆಯ ರಾಯಭಾರಿಗಳು, ಸ್ವಚ್ಛತೆ ಕುರಿತು ಗ್ರಾಮಸ್ಥರಿಗೆ ನೀವೇ ಮೊದಲ ಗುರುವಾಗಬೇಕು ಅಂತ ಅವರ ಕಾರ್ಯವನ್ನು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಮಾರನಬಸರಿ ಗ್ರಾಮ ಪಂಚಾಯತಿಯ ಮಂಜುಳಾ ಹಾದಿಮನಿ ಉಪಾಧ್ಯಕ್ಷರು, ಸದಸ್ಯರಾದ ಶಿವಕುಮಾರ ದಿಂಡೂರು, ಅಲ್ಲಾಸಾಬ ಬೋತೇಖಾನ್, ವೀರಪ್ಪ ನಿಡಗುಂದಿ, ದಿಲ್ಷಾದ್ ದೋಟಿಹಾಳ್, ಪಾತೀಮಾ ಸವಡಿ, ಹನಮ್ಮಪ್ಪ ತಳವಾರ ಮತ್ತು ಗ್ರಾಪಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP