ವಿಜಯಪುರ, 16 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸನಾತನ ಧರ್ಮದಲ್ಲಿ ಗೋವಿಗೆ ಅತ್ಯಂತ ಪಾವಿತ್ರ್ಯತೆಯನ್ನು ನೀಡಲಾಗಿದೆ. ಗೋ ಮಾತೆ ಸಂತತಿ ರಕ್ಷಣೆ ಇಂದಿನ ಅಗತ್ಯವಾಗಿದ್ದು ಪ್ರತಿಯೊಬ್ಬರೂ ಅದನ್ನು ಪಾಲಿಸುವಂತೆ ಪತ್ರಕರ್ತ ಮತ್ತು ಶ್ರೀ ಮಠದ ಗೌರವಾಧ್ಯಕ್ಷ ಗೋಪಾಲ ನಾಯಕ ಕರೆ ನೀಡಿದರು.
ನಗರದ ಕೃಷ್ಣ-ವಾದಿರಾಜ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹಮ್ಮಿಕೊಂಡ ಅಖಂಡ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕೃಷ್ಣ ಪರಮಾತ್ಮ ಖುದ್ದು ಗೋಪಾಲಕನಾಗಿ ಗೋ ಸಂತತಿ ರಕ್ಷಣೆಗೆ ಬಹು ದೊಡ್ಡ ಸಂದೇಶ ನೀಡಿದ್ದಾನೆ. ನಮೋ ಬ್ರಹ್ಮಣ್ಯ ದೇವಾಯ ಗೋ ಬ್ರಾಹ್ಮಣ ಹಿತಾಯಚ ಜಗದ್ ಹಿತಾಯ ಕೃಷ್ಣಾಯ ಗೋವಿಂದಾಯ ನಮೋನಮ: ಎಂಬುದು ನಿತ್ಯ ಪಠಿಸುವ ಶ್ಲೋಕ. ವಿಶ್ವ ರಕ್ಷಣೆಯಲ್ಲಿ ಗೋ ಪಾತ್ರ ಮಹತ್ವದ್ದು. ತಾಯಿ ಇಲ್ಲದಿದ್ದರೂ ಮಕ್ಕಳ ರಕ್ಷಣೆಗೆ ಗೋ ಕ್ಷೀರ ಉಪಯೋಗಿಸಲಾಗುತ್ತದೆ. ಗೋ ಮೂತ್ರ ಹಾಗೂ ಸೆಗಣೆ ಔಷಧೀಯ ಗುಣಗಳನ್ನು ಹೊಂದಿವೆ ಎಂಬುದು ಕೂಡ ಗೊತ್ತಿದ್ದ ಸಂಗತಿ ಎಂದು ವಿವರಿಸಿದರು.
ಶ್ರೀ ಮಠದ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತನಾಡಿ ಹಿಂದು ಧರ್ಮ ರಕ್ಷಣೆಯಲ್ಲಿ ದೇವಸ್ಥಾನಗಳ ಪಾತ್ರ ಬಹು ದೊಡ್ಡದು ಎಂದರು. ಮಹಿಳಾ ಭಜನಾ ಮಂಡಳಿಗಳು ಸನಾತನ ಧರ್ಮ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎಂದರು.
ಆಶೀರ್ವಚನ ನೀಡಿದ ಪಂಡಿತ ವಾಸುದೇವ ಆಚಾರ್ಯ ಮೋಕ್ಷ ಸಾಧನೆಗೆ ಪರಮಾತ್ಮನ ಧ್ಯಾನ ಅವಶ್ಯ ಬೇಕು. ಶಾಸ್ತ್ರ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕೆಂದರು.
ಪ್ರಾರಂಭದಲ್ಲಿ ಅನಿತಾ ಪದಕಿ ಸ್ವಾಗತಿಸಿದರು. ಶ್ರೀಮಠದ ಧರ್ಮದರ್ಶಿ ಮಂಡಳಿ ಸದಸ್ಯರಾದ ಡಾ.ಮಲಘಾಣ, ವ್ಹಿ.ಬಿ.ಕುಲಕರ್ಣಿ, ಅಶೋಕರಾವ್, ವಿಕಾಸ ಪದಕಿ ವಿಜಯ ಜೋಶಿ ಸಲಹಾ ಸಮೀತಿ ಸದಸ್ಯ ಶ್ರೀಕೃಷ್ಣ ಪಡಗಾನೂರ ಮತ್ತು ವಿಶೇಷ ಅತಿಥಿ ಡಾ ಢಾಣಕಶಿರೂರ ಉಪಸ್ಥಿತರಿದ್ದರು. ರಾತ್ರಿ ೧೨ ರವರೆಗೂ ಭಜನೆ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande