ಹೊಸಪೇಟೆ, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಒದಗಿಸುವಲ್ಲಿ ಸಂಸ್ಕರಣೆ ಪ್ರಮುಖವಾಗಿದೆ. ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಸಂಸ್ಕರಣಾ ಉದ್ದಿಮೆ ಆರಂಭಿಸಿದರೇ ಪ್ರಗತಿ ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಕೆಪೆಕ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಧಾನಿಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಮತ್ತು ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಭೂಮಿ ಕಡಿಮೆಯಾಗಿ ಆಹಾರ ಉತ್ಪಾದನೆ ಕೊರತೆಯಾಗದೆಂಬುದು ಹುಸಿಯಾಗಿದೆ. ಕಡಿಮೆ ಭೂಮಿಯಲ್ಲಿ ಹೆಚ್ಚು ಆಹಾರ ಉತ್ಪಾದನೆಗೊಳಿಸಿರುವುದಕ್ಕೆ ರೈತರು ಮತ್ತು ಕೃಷಿ ವಿಜ್ಞಾನಿಗಳು ಯಶಸ್ಸು ಕಂಡಿದ್ದಾರೆ. ಬೆಳೆದ ಬೆಳೆಯನ್ನು ಸಂರಕ್ಷಿಸುವಲ್ಲಿ ಸಂಸ್ಕರಣಾ ಸವಾಲಾಗಿ ಪರಿಣಮಿಸಿದೆ. ಆತ್ಮ ನಿರ್ಭರ ಭಾರತ ಅಭಿಯಾನದಡಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ ರೈತರಿಗೆ ಅವಕಾಶಗಳನ್ನು ನೀಡಲಾಗಿದೆ.
ಈ ಯೋಜನೆಯಡಿಯಲ್ಲಿ ಶೇ.50 ರಷ್ಟು ಅಥವಾ ಗರಿಷ್ಟ ರೂ.15 ಲಕ್ಷರೂಗಳ ಸಹಾಯಧನ ಪಡೆಯಲು ಅವಕಾಶವಿದೆ. ರೈತರು ಬೆಳೆದ ಬೆಳೆಗಳನ್ನು ಸಂಸ್ಕರಿಸಿ ತಮ್ಮದೇ ಬ್ರಾಂಡಿಂಗ್ ಮೂಲಕ ಮಾರುಕಟ್ಟೆಯನ್ನು ತಲುಪಲು ಯೋಜನೆಯ ಸದುಪಯೋಗಪಡೆಯಬೇಕಿದೆ. ಪ್ರಾದೇಶಿಕ ಮತ್ತು ಸಿರಿಧಾನ್ಯಗಳ ಬೆಳೆಗಳನ್ನು ಸಂರಕ್ಷಿಸಿ ನೇರಮಾರುಕಟ್ಟೆ ಸೃಷ್ಟಿಸಿಕೊಂಡರೇ ಆರ್ಥಿಕವಾಗಿ ಸಬಲತೆಯನ್ನು ಪಡೆಯಬಹುದು ಎಂದರು.
ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ ಅವರು ಮಾತನಾಡಿ, ಕಿರು ಅಹಾರ ಸಂಸ್ಕರಣಾ ಘಟಕಗಳ ಆರಂಭಿಸಲು ಬ್ಯಾಂಕ್ಗಳಿಂದ ಆರ್ಥಿಕ ಸಹಾಯ ನೀಡುವುದು ಮುಖ್ಯವಾಗಿದೆ. ಘಟಕ ನಿರ್ಮಾಣಕ್ಕೆ ಆಸಕ್ತಿ ತೋರುವ ರೈತರಿಗೆ ಸಾಲ ಸೌಲಭ್ಯವನ್ನು ವಿಳಂಬ ಮಾಡದೇ ನೀಡಬೇಕು. ವಿವಿಧ ಇಲಾಖೆಗಳು ಅರ್ಹ ಫಲಾನುಭವಿಗಳಿಗೆ ಆರ್ಥಿಕ ಸೌಲಭ್ಯ ಕುರಿತು ಜಾಗೃತಿ ಮೂಡಿಸಬೇಕಿದೆ. ಯೋಜನೆಯಡಿ ವಿವಿಧ ಅಹಾರ ಸಂಸ್ಕರಣಾ ಉದ್ದಿಮೆಗಳಿಗೆ ಉತ್ತೇಜನೆ ನೀಡಬೇಕು. ಪ್ರಮುಖವಾಗಿ ಸಿರಿಧಾನ್ಯಗಳ ಮತ್ತು ಇತರೆ ಧಾನ್ಯಗಳ ಸಂಸ್ಕರಣೆ, ಬೆಲ್ಲ, ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರೆಸ್ಡ್ ಆಯಿಲ್, ಮೆಣಿಸಿನ ಪುಡಿ ಘಟಕಗಳು, ಶುಂಠಿ ಸಂಸ್ಕರಣಾ ಘಟಕಗಳು, ಅನಾನಸ್ ಸಂಸ್ಕರಣಾ ಘಟಕಗಳು, ಮಸಾಲ ಉತ್ಪನ್ನಗಳ ಘಟಕಗಳು, ತೆಂಗಿನ ಉತ್ಪನ್ನಗಳ ಘಟಕ, ಕುಕ್ಕುಟ ಉತ್ಪನ್ನಗಳು, ಸಾಗರ ಉತ್ಪನ್ನಗಳು ಸೇರಿದಂತೆ ವಿವಿಧ ಹಣ್ಣು ಮತ್ತು ತರಕಾರಿಗಳ ಉತ್ಪನ್ನಗಳ ಸಂಸ್ಕರಣಾ ಘಟಕಗಳನ್ನು ಆರಂಭಿಸಲು ರೈತರಿಗೆ ಮಾಹಿತಿ ನೀಡಬೇಕು ಎಂದರು.
ಕೆಪೆಕ್ ವ್ಯವಸ್ಥಾಪಕ ನಿರ್ದೇಶಕರಾದ ಶಿವಪ್ರಕಾಶ್ ಮಾತನಾಡಿ, ರೈತರು ಬೆಳೆದ ಆಹಾರ ಬೆಳೆಗಳ ಪರ್ಯಾಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವಲ್ಲಿ ಕಿರು ಸಂಸ್ಕರಣಾ ಘಟಕಗಳು ಪ್ರಮುಖ ಪಾತ್ರವಹಿಸಲಿವೆ. ಬೇರೆ ಯಾವುದೇ ಕ್ಷೇತ್ರಗಳಿಗಿಂತ ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರುವುದಿಲ್ಲ. ಕಿರು ಆಹಾರ ಸಂಸ್ಕರಣಾ ಘಟಕ ಆರಂಭಿಸಲು ರಾಜ್ಯಾದ್ಯಂತ 2000 ಘಟಕಗಳಿಗೆ ಬ್ಯಾಂಕ್ಗಳಿಂದ ಸಬ್ಸಿಡಿ ಸಹಿತ ಸಾಲಗಳನ್ನು ನೀಡಲಾಗಿದೆ.
ಕೋಲ್ಡ್ ಪ್ರೆಸ್ಡ್ ಆಯಿಲ್ ಘಟಕಗಳಿಗೆ 1200 ಘಟಕಗಳಿಗೆ ಸಬ್ಸಿಡಿ ಸಹಿತ ಸಾಲಗಳನ್ನು ನೀಡಲಾಗಿದೆ. ಸಕ್ಕರೆ ಬಳಕೆಯ ಪರ್ಯಾಯವಾಗಿ ಬೆಲ್ಲ ಬಳಕೆಗೆ ಪ್ರೋತ್ಸಾಹಿಸಿ ಘಟಕಗಳಿಗೆ ಪ್ರೋತ್ಸಾಹಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಹಾರ ಕೇಂದ್ರಗಳನ್ನು ಆರಂಭಿಸಿ ಸಿರಿಧಾನ್ಯ ಮಿಲೆಟ್ಗಳು ಸೇರಿದಂತೆ ಪ್ರಾದೇಶಿಕ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಕೃಷಿ ಇಲಾಖೆಗಳಿಂದ ಕಿರು ಉತ್ಪನ್ನ ಆಹಾರ ಸಂಸ್ಕರಣ ಘಟಕಗಳನ್ನು ಆರಂಭಿಸಿ ಯಶಸ್ಸು ಕಂಡಿರುವ ಯಶೋಗಾಥೆಗಳನ್ನು ಸಂಚಿಕೆ ರೂಪದಲ್ಲಿ ಹೊರತಂದು ಮುಖ್ಯಮಂತ್ರಿಗಳಿಂದ ಬಿಡುಗಡೆಗೊಳಿಸಲು ಚಿಂತನೆ ನಡೆಸಲಾಗಿದೆ ಎಂದರು.
ಬಳಿಕ ಕಾರ್ಯಕ್ರಮದಲ್ಲಿ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕಗಳನ್ನು ಆರಂಭಿಸಿ ಯಶಸ್ಸು ಕಂಡಿರುವ ಉದ್ಯಮಿಗಳಾದ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದ ಆನಂದ ಸಜ್ಜನ್, ಹೊಸಪೇಟೆಯ ಪದಕಿ ಎಂಟರಪ್ರೈಸಸ್ ಸತೀಶ್ ಕುಮಾರ ಪದಕಿ, ಹಗರಿಬೊಮ್ಮನಹಳ್ಳಿಯ ನಂದಿ ಇಂಡಸ್ಟ್ರಿಸ್ನ ಶಿವಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಿ.ಟಿ.ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 92 ಫಲಾನುಭವಿಗಳ ಅರ್ಜಿಗಳಲ್ಲಿ 36 ಸಿರಿಧಾನ್ಯಗಳ ಉತ್ಪನ್ನಗಳನ್ನು ತಯಾರು ಮಾಡಲು ಮಂಜೂರಾಗಿದೆ. 8 ಬೇಕರಿ ಉತ್ಪನ್ನಗಳನ್ನು, 4 ಮೆಣಸಿಕಾಯಿ ಉತ್ಪನ್ನಗಳು, 4 ಎಣ್ಣೆ ಆಧಾರಿತ ಉತ್ಪನ್ನಗಳು, 3 ಹಾಲಿನ ಉತ್ಪನ್ನಗಳು, 3 ಗೋಧಿ ಆಧಾರಿತ ಉತ್ಪನ್ನಗಳು, 2 ಬೆಲ್ಲ ಆಧಾರಿತ ಉತ್ಪನ್ನಗಳು, 2 ಅಕ್ಕಿ ಆಧಾರಿತ ಉತ್ಪನ್ನಗಳು, 2 ಮಸಾಲ ಉತ್ಪನ್ನಗಳು ಹಾಗೂ 28 ಇತರೆ ಉತ್ಪನ್ನಗಳನ್ನು ತಯಾರಿಸಲು ಉದ್ಯಮಿಗಳಿಗೆ ಈಗಾಗಲೇ ಬ್ಯಾಂಕ್ ಸಾಲ ಮಂಜೂರು ಆಗಿರುತ್ತದೆ. ಈ ಯೋಜನೆಯಿಂದ ರೈತರಿಗೆ ಹೆಚ್ಚಿನ ಆದಾಯ ಹಾಗೂ ಉದ್ಯೋಗ ಸೃಜಿಸಿದಂತಾಗಿದೆ ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಕೆಪೆಕ್ ಸಹಾಯಕ ಕೃಷಿ ನಿರ್ದೇಶಕರಾದ ಚಂದ್ರಕುಮಾರ್, ಕೃಷಿ ಇಲಾಖೆ ಉಪನಿರ್ದೇಶಕ ನಯೀಮ್ ಪಾμÁ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ವೀರೇಂದ್ರ ಕುಮಾರ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳು ವಿಜಯಕುಮಾರ್, ಹೊಸಪೇಟೆ ಸಹಾಯಕ ಕೃಷಿ ನಿರ್ದೇಶಕರು ಮನೋಹರ್ ಗೌಡ, ಹಗರಿ ಕೃಷಿ ಕಾಲೇಜು ವಿಜ್ಞಾನಿ ಡಾ.ಶಿಲ್ಪಾ, ಹಡಗಲಿ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನ ಡಾ.ಮಂಜುನಾಥ ಬಾನವಳಿ, ಜಿಲ್ಲೆಯ ಎಲ್ಲಾ ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕ್ಗಳ ವ್ಯವಸ್ಥಾಪಕರು ಸಭೆಯಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್