ಕೋಲಾರ, ೨೯ ಜುಲೈ (ಹಿ.ಸ.) :
ಆ್ಯಂಕರ್ : ಕೋಲಾರ ಜಿಲ್ಲೆಯ ವೇಮಗಲ್ ಮತ್ತು ಕೂರಗಲ್ ಪಟ್ಟಣ ಪಂಚಾಯತಿಯ ಚುನಾವಣೆಯ ದಿನಾಂಕ ನಿಗದಿ ಯಾಗಿದ್ದು ೨೯ ರಿಂದ ಚುನಾವಣೆ ಪ್ರದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನೂತನವಾಗಿ ರಚನೆಯಾಗಿರುವ ವೇಮಗಲ್- ಕೂರಗಲ್ ಪಟ್ಟಣ ಪಂಚಾಯತಿ ಚುನಾವಣೆ ಕುರಿತು ಮಾಧ್ಯಮಘೋಷ್ಟಿ ನಡೆಸಿ ಮಾತನಾಡಿದರು.
ಚುನಾವಣೆ ವೇಳಾಪಟ್ಟಿ:- ದಿನಾಂಕ ೨೯-೦೭-೨೦೨೫ ಮಂಗಳವಾರ ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ, ನಾಮಪತ್ರಗಳನ್ನು ಸಲ್ಲಿಸಲು ೦೫-೦೮-೨೦೨೫ ಮಂಗಳವಾರ ಕೊನೆಯ ದಿನವಾಗಿರುತ್ತದೆ, ೦೬-೦೮-೨೦೨೫ ಬುಧವಾರ ನಾಮಪತ್ರಗಳನ್ನು ಪರಿಶೀಲಿಸಲಾಗುತ್ತದೆ, ೦೮-೦೮-೨೦೨೫ ಶುಕ್ರವಾರ ಉಮೇದುವರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ ಹಾಗೂ ಮತದಾನವನ್ನು ದಿನಾಂಕ ೧೭-೦೮-೨೦೨೫ ಭಾನುವಾರ ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಡೆಯಲಿದೆ, ಮತದಾನ ಎಣಿಕೆಯನ್ನು ೨೦-೦೮-೨೦೨೫ ಬುಧವಾರ ಬೆಳಿಗ್ಗೆ ೮ ಗಂಟೆಯಿಂದ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ನಡೆಸಲಾಗುವುದು, ಚುನಾವಣೆಯನ್ನು ದಿನಾಂಕ ೨೦-೦೮-೨೦೨೫ ಬುಧವಾರಕ್ಕಿಂತ ಮುಂಚೆ ಮುಕ್ತಾಯಗೊಳಿಸಬೇಕಾಗಿದೆ. ಈ ಅವಧಿಯಲ್ಲಿ ಸದಾಚಾರ ಸಂಹಿತೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು, ಸರ್ಕಾರಿ ಅಧಿಕಾರಿಗಳು, ನೌಕರರು, ಉಲ್ಲಂಘನೆ ಆಗದಂತೆ ಪಾಲಿಸಬೇಕು ಎಂದು ತಿಳಿಸಿದರು.
ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ೧೭ ವಾರ್ಡುಗಳಿದ್ದು ೨ ಚುನಾವಣಾಧಿಕಾರಿಗಳನ್ನು ಮತ್ತು ೨ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಒಟ್ಟು ೨೨ ಮತಗಟ್ಟೆಗಳಿದ್ದು, ಅದರಲ್ಲಿ ೬೫೫೫ ಪುರುಷ ಮತದಾರರು, ೬೯೩೯ ಮಹಿಳಾ ಮತದಾರರು, ಒಟ್ಟು ೧೩೪೯೪ ಮತದಾರರಿರುವುದಾಗಿ ತಿಳಿಸಿದರು.
ಮತದಾರನಿಗೆ ಅಭ್ಯರ್ಥಿಯ ಪೂರ್ವಾಪರಗಳನ್ನು ತಿಳಿದುಕೊಳ್ಳಲು ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ನಮಪಾತ್ರದೊಂದಿಗೆ ತನ್ನ ಹಿನ್ನೆಲೆ, ಚರಾಸ್ತಿ ಮತ್ತು ಸ್ತಿರಸ್ತಿಗಳ ವಿವರಗಳ ತನ್ನ ಸ್ವವಿವರ, ವಿದ್ಯಾರ್ಹತೆ ಆದಾಯದ ಮೂಲಗಳನ್ನು ಪರಿಷ್ಕೃತ ನಮೂನೆಯಲ್ಲಿ ಘೋಷಣಾ ಪತ್ರ ಸಲ್ಲಿಸಬೇಕಾಗಿರುತ್ತದೆ ಎಂದರು.
ಪಟ್ಟಣ ಪಂಚಾಯತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಗರಿಷ್ಠ ಮಿತಿಯೂ ಸರ್ಕಾರದ ಅಧಿಸೂಚನೆಯಂತೆ ಒಂದು ಲಕ್ಷಗಳಾಗಿದ್ದು, ಈ ಸಂಬಂಧ ಅಭ್ಯರ್ಥಿಗಳು ಸಲ್ಲಿಸುವ ವೆಚ್ಚ ವಿವರಗಳನ್ನು ಪರಿಶೀಲಿಸಲು ಲೆಕ್ಕಪತ್ರ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ ಎಂದರು.
ಮತದಾನಕ್ಕಾಗಿ ರಾಜ್ಯ ಚುನಾವಣಾ ಆಯೋಗದ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತದೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಚುನಾವಣೆಗೂ ಸಹ ಮತಪತ್ರದಲ್ಲಿ ನೋಟ ಎಂದು ಮುದ್ರಿಸಲು ಅವಕಾಶ ಕಲ್ಪಿಸಲಾಗಿರುತ್ತದೆ ಹಾಗೂ ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ ಮುದ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗಳಲ್ಲಿ ಬಂದೋಬಸ್ತ್ ಮತ್ತು ಕಾನೂನು ವ್ಯವಸ್ಥೆಯನ್ನು ಕೈಗೊಳ್ಳಲು ಜಿಲ್ಲಾ ರಕ್ಷಣಾಧಿಕಾರಿಗಳಾದ ಬಿ.ನಿಖಿಲ್ ಅವರ ಸಹಕಾರವನ್ನು ಪಡೆಯಲಾಗುತ್ತದೆ ಎಂದರು.
ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ ೨೦೨೫ಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಈ ಕಚೇರಿಯ ಕಂಟ್ರೋಲ್ ರೂಂ ದೂ. ಸಂಖ್ಯೆ ೦೮೧೫೨-೨೪೩೫೦೬ ಹಾಗೂ ತಾಲೂಕು ಕಚೇರಿಯ ಕಂಟ್ರೋಲ್ ರೂಮ್ ದೂ. ಸಂಖ್ಯೆ ೦೮೧೫೨-೨೨೨೦೫೬ ಗಳು ಚಾಲನೆಯಲ್ಲಿರುತ್ತದೆ ಎಂದು ತಿಳಿಸಿದರು.
ರಾಜ್ಯ ಚುನಾವಣಾ ಆಯೋಗವು ಹೊರಡಿಸಿರುವ ವೇಳಾಪಟ್ಟಿಯಂತೆ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಸಾರ್ವಜನಿಕರು ಸೂಕ್ತ ಸಹಕಾರವನ್ನು ನೀಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ ಅವರು ಹಾಗೂ ಕೋಲಾರ ತಹಶೀಲ್ದಾರ್ ಡಾ.ನಯನ, ಮೀನುಗಾರಿಕೆ ಉಪ ನಿರ್ದೇಶಕರಾದ ರಾಜಣ್ಣ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಬೈರೇಗೌಡ, ಸಹಾಯಕ ಕೃಷಿ ನಿರ್ದೇಶಕರಾದ ಮುರಳಿ, ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಡಾ. ಶಿವಾರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ವೇಮಗಲ್- ಕೂರಗಲ್ ಪಟ್ಟಣ ಪಂಚಾಯತಿ ಚುನಾವಣೆಯ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾಹಿತಿ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್