ಸುಕ್ಮಾ, 29 ಜುಲೈ (ಹಿ.ಸ.) :
ಆ್ಯಂಕರ್ : ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ಕೇರಳಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋಗುಂಡಾ ಬೆಟ್ಟಗಳಲ್ಲಿ ನಡೆದ ನಕ್ಸಲ್ ವಿರೋಧಿ ಶೋಧ ಕಾರ್ಯಾಚರಣೆಯ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ನಕ್ಸಲ್ ಮೃತಪಟ್ಟಿದ್ದು, ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯಗೊಂಡಿದ್ದಾರೆ.
ಸೋಮವಾರ ಸಂಜೆ ನಡೆದ ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಮೀಸಲು ಪೊಲೀಸ್ ಪಡೆ , ವಿಶೇಷ ಕಾರ್ಯಪಡೆ ಹಾಗೂ ಕೇಂದ್ರ ಭದ್ರತಾ ಪಡೆಗಳ ಜಂಟಿ ತಂಡ ಭಾಗವಹಿಸಿದ್ದವು. ಇಂದು ಬೆಳಿಗ್ಗೆವರೆಗೂ ಗುಂಡಿನ ಚಕಮಕಿ ಮುಂದುವರಿದಿದ್ದು, ಕಾರ್ಯಾಚರಣೆಯ ಮಧ್ಯೆ ನಕ್ಸಲರು ಇರಿಸಿದ್ದ ಐಇಡಿ ಬಾಂಬ್ ಸ್ಫೋಟಗೊಂಡು ಇಬ್ಬರು ಜವಾನರು ಗಾಯಗೊಂಡಿದ್ದಾರೆ.
ಗಾಯಗೊಂಡ ಮದ್ವಿ ಮುಖೇಶ್ ಮತ್ತು ಬರ್ಸೆ ರಾಮ ಎಂಬ ಜವಾನರಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಅವರನ್ನು ತುರ್ತಾಗಿ ರಾಯ್ಪುರಕ್ಕೆ ಹೆಲಿಕಾಪ್ಟರ್ ಮೂಲಕ ಕರೆದೊಯ್ಯಲಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ. ಶುಭಮ್ ಕುಜುರ್ ತಿಳಿಸಿದ್ದಾರೆ.
ನಕ್ಸಲರು ಪ್ರತಿ ವರ್ಷ ಜುಲೈ 28 ರಿಂದ ಆಗಸ್ಟ್ 3 ರವರೆಗೆ ಆಚರಿಸುವ 'ಹುತಾತ್ಮರ ಸಪ್ತಾಹ ಸಂದರ್ಭದಲ್ಲಿ ಬಸ್ತಾರ್ ವಿಭಾಗದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಗಿರುವ ಹಿನ್ನೆಲೆ, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿ ನಿರಂತರ ಶೋಧ ಕಾರ್ಯಾಚರಣೆ ನಡೆಸುವ ವೇಳೆ ಈ ಘಟನೆ ಸಂಭವಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa