ಗದಗ, 27 ಜುಲೈ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಈ ವರ್ಷ ಶ್ರೀ ಸಿದ್ಧಾರೂಡ ಕಥಾಮೃತ ಪುರಾಣ ಪ್ರಾರಂಭೋತ್ಸವ ಜುಲೈ 30ರಂದು ಶ್ರೀ ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮಿಗಳಿಂದ ಶುಭಾರಂಭಗೊಳ್ಳಲಿದೆ ಎಂದು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ ಹೇಳಿದರು.
ಅವರು ಈ ಕುರಿತು ಮಾಹಿತಿ ನೀಡಿ, ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪುರಾಣ ಕಾರ್ಯಕ್ರಮಗಳನ್ನು ಕಳೆದ 15 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಪ್ರಾರಂಭೋತ್ಸವ ದಿನ ಪಟ್ಟಣದ ಕೆಇಬಿಯ ಗಣೇಶ ದೇವಸ್ಥಾನದಿಂದ ಶೃಂಗರಿಸಿದ ಎತ್ತಿನ ಬಂಡಿಯಲ್ಲಿ ಭಜನೆ, ವಾದ್ಯ ಮೇಳದೊಂದಿಗೆ ಶ್ರೀ ಸಿದ್ಧಾರೂಡ ಕಥಾಮೃತ ಪುರಾಣ ಗ್ರಂಥದ ಮೆರವಣಿಗೆ ಪ್ರಮುಖ ಮಾರ್ಗದ ಮೂಲಕ ಸೋಮೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ.
ಸಂಜೆ 7.30 `ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಲಿದೆ. ದೇವಸ್ಥಾನ ಕಮಿಟಿಯ ಖಜಾಂಚಿ, ವರ್ತಕರಾದ ಬಸವೇಶ ಮಹಾಂತಶೆಟ್ಟರ ಉದ್ಘಾಟಿಸುವರು. ಅತಿಥಿಗಳಾಗಿ ಉದ್ಯಮಿ ಲೋಹಿತ ನೆಲವಿಗಿ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಅರ್ಚಕ ಕೃಷ್ಣಾಜಿ ಪೂಜಾರ ಉಪಸ್ಥಿತರಿರುವರು. ಗದುಗಿನ ಗಾನಯೋಗಿ ಲಿಂ. ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ ಶಿಷ್ಯ, ಜಲ್ಲಾಪುರದ ಗುರು ಶಾಂತಯ್ಯ ಶಾಸ್ತ್ರಿಗಳು ಆರಾಧ್ಯಮಠ ಪುರಾಣ ಪಠಣ/ಪ್ರವಚನ ವೈವರು.
ಧಾರವಾಡದ ವಿಜಯಕುಮಾರ ಸುತಾರ ತಬಲ ಸಾಥ್ ನೀಡುವರು.
ಅ.24ರವರೆಗೆ ನಡೆಯುವ ಶ್ರೀ ಸಿದ್ದಾರೂಡರ ಪುರಾಣ ಪ್ರವಚನದಲ್ಲಿ ಪಟ್ಟಣದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ವೇಳೆ ಬಸವೇಶ ಮಹಾಂತಶೆಟ್ಟರ, ಗೋಪಾಲ ಫಡ್ರಿಸ್, ಪೂರ್ಣಾಜಿ ಖರಾಟೆ, ಸುರೇಶ ರಾಚನಾಯಕರ, ಶಂಕರ ಬಾಳಿಕಾಯಿ, ಮಯೂರಗೌಡ ಪಾಟೀಲ, ಜಿ.ಎಸ್. ಗುಡಗೇರಿ, ವಿರೂಪಾಕ್ಷ ಆರ್. ಸಾತಪುತೆ, ಬಸವರಾಜ ಮೆಣಸಿನಕಾಯಿ ಸೇರಿ ಶ್ರೀ ಸೋಮೇಶ್ವರ ಪುರಾಣ ಸಮಿತಿ ಸದಸ್ಯರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP