ಬಳ್ಳಾರಿ, 08 ಜೂನ್ (ಹಿ.ಸ.) :
ಆ್ಯಂಕರ್ : ವೀರಶೈವರಲ್ಲಿ `ದಾನ'ಗುಣವು ರಕ್ತಗತವಾಗಿದ್ದು, ಒಗ್ಗಟ್ಟು ಮೂಡಿದಲ್ಲಿ ವೀರಶೈವ ಸಮಾಜಕ್ಕೆ ಉತ್ತಮ ಭವಿಷ್ಯವಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ವೈ.ಎಂ. ಸತೀಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀ ಶರಣ ಸಕ್ಕರೆ ಕರಡೆಪ್ಪನವರ ಪ್ರಸಾದ ನಿಲಯದಲ್ಲಿ ಭಾನುವಾರ ನಡೆದ ವೀರಶೈವ ರುದ್ರಭೂಮಿ ಟ್ರಸ್ಟನ ನೂತನ ಕೈಲಾಸ ರಥದ ಸಮರ್ಪಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವೀರಶೈವ ಸಮಾಜದ ಮಠಗಳು - ಗುರು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಅನೇಕರು ಅನ್ನ, ಅಕ್ಷರ ಮತ್ತು ಆಶ್ರಯದ ದಾನವನ್ನು ಮಾಡುತ್ತಿದ್ದಾರೆ ಎಂದರು.
ಪ್ರಸ್ತುತ ದಿನಮಾನಗಳಲ್ಲಿ ವೀರಶೈವ ಸಮಾಜದಲ್ಲಿ ಒಗ್ಗಟ್ಟಿಲ್ಲ. ಮುಂದಿನ ಪೀಳಿಗೆಗೆ ಉತ್ತಮವಾದ ಭವಿಷ್ಯ ರೂಪುಗೊಳ್ಳಬೇಕು ಎನ್ನುವುದಾದಲ್ಲಿ ನಮ್ಮೆಲ್ಲರಲ್ಲಿ ಒಗ್ಗಟ್ಟು ಅತ್ಯಗತ್ಯ. ಇಲ್ಲವಾದಲ್ಲಿ ವೀರಶೈವ ಸಮಾಜಕ್ಕೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಕಾರಣ ಸಮಾಜದ ಭವಿಷ್ಯಕ್ಕಾಗಿ ನಾವೆಲ್ಲರೂ ಭಿನ್ನಾಭಿಪ್ರಾಯಗಳನ್ನು ಮರೆತು
ಒಂದಾಗೋಣ ಎಂದರು.
ಸಾನಿಧ್ಯವಹಿಸಿದ್ದ ಹರಗಿನಡೋಣಿ ಪಂಚವಣಗಿ ಮಠದ ಶ್ರೀಗಳು ಬಳ್ಳಾರಿ ಜಿಲ್ಲೆಯು ಭಕ್ತಿ ಮತ್ತು ದಾನಕ್ಕೆ ಖ್ಯಾತಿ ಪಡೆದಿದೆ. ಜಿಲ್ಲೆಯಲ್ಲಿ ಸಾಧುಗಳು, ಸಂತರು, ಪೀಠಾಧಿಪತಿಗಳು, ಆಚಾರ್ಯರು, ಆರೂಢರು, ಆರಾಧ್ಯರು ಹೀಗೇ ಧರ್ಮ ಸಂರಕ್ಷಣೆಗೆ ಎಲ್ಲರೂ ಇದ್ದಾರೆ. ವೀರಶೈವರ ಮೂಲಗುಣ ದಾಸೋಹ. `ರು' ಅಕ್ಷರ ಋಣಮೋಚಕ, `ದ್ರ' ಅಕ್ಷರ ದಾರಿದ್ರ್ಯ ವಿಮೋಚಕ. ಕಾರಣ ರುದ್ರಭೂಮಿ ಸಾಕಷ್ಟು ಮಹತ್ವವನ್ನು ಪಡೆದಿದೆ ಎಂದು ಆಶೀರ್ವದಿಸಿರು.
ಶ್ರೀಧರಗಡ್ಡೆಯ ಕೊಟ್ಟೂರು ಸ್ವಾಮಿ ಮಠದ ಮರಿದೇವರು, ಹಾನಗಲ್ಲು ಕುಮಾರೇಶ್ವರರು - ಸಿದ್ದಲಿಂಗ ಶಿವಾಚಾರ್ಯರು ಮತ್ತು ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಅವರ ದೂರದೃಷ್ಟಿಯ ಕಾರಣ `ವೀರಶೈವ' ಜಿಲ್ಲೆಯಲ್ಲಿ ಅಮರವಾಗಿದೆ. ವೀರಶೈವ ಮತ್ತು ರುದ್ರಭೂಮಿಗೆ ಸಾಕಷ್ಟು ಅರ್ಥವಿದೆ ಎಂದರು.
ನೂತನ ಕೈಲಾಸ ರಥದ ದಾನಿಗಳಾದ ಗುತ್ತಿಗೆದಾರರು, ಎಂ.ಎಸ್.ಜೆ. ಕನ್ಸ್ಟ್ರಕ್ಷನ್ಸ್ ಮಸುದಿಪುರದ ಸಿದ್ದರಾಮನಗೌಡ ಮತ್ತು ಶ್ರೀಮತಿ ಸಿದ್ದರಾಮನಗೌಡ, ವೀರಶೈವ ರುದ್ರಭೂಮಿಗೆ ಭೂಮಿಯನ್ನು ದಾನ ಮಾಡಿದ್ದ ಹಾವಳಿಗೆ ಮರಿಯಪ್ಪನ ಕುಟುಂಬದ ಸದಸ್ಯರು ಮತ್ತು ಇಬ್ರಾಹಿಂಪುರದ ದಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ - ಗೌರವಿಸಲಾಯಿತು.
ಸನ್ಮಾನಿತರ ಪರವಾಗಿ ಎಂ.ಎಸ್.ಜೆ. ಕನ್ಸ್ಟ್ರಕ್ಷನ್ಸ್ ಮಸುದಿಪುರದ ಸಿದ್ದರಾಮನಗೌಡರ ಪುತ್ರ ಚಂದ್ರ ಅವರು ಮಾತನಾಡಿ, ಮಾನವೀಯತೆ, ದಯೆ, ಧರ್ಮ ಮತ್ತು ಸಂಸ್ಕಾಗಳಿಂದ ಸಮಾಜಸೇವೆಯ ಚಿಂತನೆ ಮೂಡುತ್ತದೆ. ದಾನದ ಮೂಲಕ ಆತ್ಮತೃಪ್ತಿ - ಮನಃತೃಪ್ತಿ ಮೂಡಿ ಬದುಕು ಸಾರ್ಥಕತೆ ಪಡೆಯುತ್ತದೆ. ಈ ನಿಟ್ಟಿನಲ್ಲಿ ತಮ್ಮ ತಂದೆ ಶ್ರೀಯುತ ಮಸುದಿಪುರದ ಸಿದ್ದರಾಮನಗೌಡರು ಮತ್ತು ಕುಟುಂಬದ ಎಲ್ಲಾ ಸದಸ್ಯರು ನಡೆಸುತ್ತಿರುವ ಸೇವೆಗಳಲ್ಲಿ ಸಮಾಜಮುಖಿ ಚಿಂತನೆಗಳು ಸಜೀವವಾಗಿವೆ ಎಂದರು.
ವೀರಶೈವ ರುದ್ರಭೂಮಿ ಟ್ರಸ್ಟ್ ಅಧ್ಯಕ್ಷರಾದ ಬಿ.ಎಂ. ಶಿವನಗೌಡ ಅವರು ಅಧ್ಯಕ್ಷತೆವಹಿಸಿದ್ದರು. ವೀರಶೈವ ರುದ್ರಭೂಮಿ ಟ್ರಸ್ಟ ಖಜಾಂಚಿಗಳಾದ ಹಾವಿನಾಳ್ ಶರಣಬಸಪ್ಪ ಅವರು ಸ್ವಾಗತ ಕೋರಿದರು. ಕಾರ್ಯದರ್ಶಿಗಳಾದ ಗುರುಪಾದಯ್ಯ ಕಲ್ಮಠ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ವೀರಶೈವ ರುದ್ರಭೂಮಿ ಟ್ರಸ್ಟ್ ಸದಸ್ಯ ಬಾಡದ ಬದ್ರಿನಾಥ್ ವಂದನಾರ್ಪಣೆ ಸಲ್ಲಿಸಿದರು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಣೇಕಲ್ ಮಹಾಂತೇಶ್ ಮತ್ತು ವೀರಶೈವ ತರುಣ ಸಂಘದ ಅಧ್ಯಕ್ಷರಾದ ನಂದೀಶ್ ಮಠಂ ಅವರು ಅತಿಥಿಗಳಾಗಿದ್ದರು. ವೀರಶೈವ ರುದ್ರಭೂಮಿ ಟ್ರಸ್ಟ್ ಟ್ರಸ್ಟಿಗಳಾದ ಕಣ್ಣಿ ರಾಜಶೇಖರ್, ಬಿ. ವೀರಭದ್ರಗೌಡ, ಬೆಳಗಲ್ಲು ಕೇದಾರನಾಥ ಮತ್ತು ಕೊರ್ಲಗುಂದಿ ವಿಶ್ವನಾಥ್ ವೇದಿಕೆಯಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್