ಕಲಬುರಗಿ, 07 ಜೂನ್ (ಹಿ.ಸ.) :
ಆ್ಯಂಕರ್ : ಕಲಬುರಗಿಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ಮಕ್ಕಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಸೌಕರ್ಯ ಒದಗಿಸಲಾಗುವುದು. ನಮ್ಮ ಭಾಗದ ಮಕ್ಕಳು ದೇಶ ಸೇವೆಗೈಯಲು ಸೈನಿಕರಾಗಿ ಆಯ್ಕೆಯಾಗುವಂತೆ ತರಬೇತಿ ಕೊಡಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗುಲಬರ್ಗಾ ವಿ.ವಿ. ಆವರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಆವರಣದಲ್ಲಿ ಎರಡನೇ ತಂಡದ ತರಬೇತಿಗೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ 100 ಸಂಖ್ಯೆ ಮಕ್ಕಳಿಗೆ ತರಬೇತಿ ನೀಡುವ ಸಾಮರ್ಥ್ಯ ಇದ್ದು, ಇದನ್ನು ಅಗತ್ಯವಿದ್ದಲ್ಲಿ 500 ಸಂಖ್ಯೆಗೆ ಹೆಚ್ಚಿಸಲು ಸಹ ಪ್ರಸ್ತಾವನೆ ಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಭಾರತ ದೇಶ ಇಂದು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗುವತ್ತ ದಾಪುಗಾಲು ಇಟ್ಟಿದೆ. ಇದಕ್ಕೆ ಪ್ರಜಾಫ್ರಭುತ್ವದ ವ್ಯವಸ್ಥೆ ಕಾರಣವಾದರೆ, ಪ್ರಜಾಪ್ರಭುತ್ವ ಉಳಿವಿಗೆ ಸೇನೆ ಪಾತ್ರ ಹೆಚ್ಚು. ದೇಶ ಸೇವೆಗೆ ತಾವೆಲ್ಲ ಮನೆ-ಮಠ ಬಿಟ್ಟು ಬಂದಿದ್ದೀರಿ. ಕಠಿಣ ಸೇವೆಯ ತರಬೇತಿಗೆ ತಾವೆಲ್ಲ ಅಣಿಯಾಗಿರುವುದು ತಮಗೆ ಸಂತೋಷ ತಂದಿದೆ ಎಂದ ಅವರು, ಕಾಲೇಜು ಮಟ್ಟದಲ್ಲಿ ಯುವಜನತೆಗೆ ಶಿಸ್ತಿನ ಅಭ್ಯಾಸ ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಅಮ್ಮ ಒಪ್ಪಿಗೆ ಇಲ್ಲದಕ್ಕಾಗಿ ತರಬೇತಿ ಮೊಟಕುಗೊಳಿಸಬೇಕೈತು
ನಾನು ಪ್ರೌಢ ಶಾಲೆಯಲ್ಲಿದ್ದಾಗ ಎನ್.ಸಿ.ಸಿ. ತರಬೇತಿ ಪಡೆದುಕೊಂಡಿರುವೆ. ಮುಂದೆ ಏರ್ ಫೋರ್ಸ್ನಲ್ಲಿ ತರಬೇತಿ ಪಡೆಯಲು ಹೋಗಿದ್ದೆ. ಕೆಲವು ದಿನ ತರಬೇತಿ ಸಹ ಪಡೆದಿದ್ದೆ. ಆದರೆ ತರಬೇತಿಗೆ ತಂದೆ-ತಾಯಿಯ ಸಹಿ ಕಡ್ಡಾಯವಾಗಿತ್ತು. ತಂದೆಯವರ ಸಹಿ ಮಾಡಿಸಿಕೊಂಡಿದೆ, ಅಮ್ಮ ಸಹಿ ಮಾಡಲು ನಿರಾಕರಿಸಿದರು. ಹೀಗಾಗಿ ಏರ್ ಫೋರ್ಸ್ ಮೂಲಕ ದೇಶ ಸೇವೆ ಮಾಡಬೇಕೆನ್ನುವ ಆಸೆ ಈಡೇರಿಲಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಬಾಲ್ಯದ ಘಟನೆಯ ಮೆಲುಕು ಹಾಕಿದರು.
ಇದೇ ಸಂದರ್ಭದಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು ತರಬೇತಿಯ ಪ್ರದರ್ಶನ ಮಾಡಿದಲ್ಲದೆ ಭಯೋತ್ಪಾದಕರು ದೇಶಕ್ಕೆ ನುಗ್ಗಿ ಬಂಕರ್ನಲ್ಲಿ ಅಡಗಿಕೊಂಡಾಗ ಅವರನ್ನು ಹೊಡೆದು ಬಂಕರ್ ಸರ್ವನಾಶ ಮಾಡುವ ಬಂಕರ್ ಡ್ರಿಲ್ ಮಕ್ಕಳಿಂದ ಪ್ರದರ್ಶನವಾಯಿತು.
ಕಾರ್ಯಕ್ರಮದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೋಮಶೇಖರ್ ವೈ. ಇದ್ದರು.
ಹಿಂದೂಸ್ತಾನ್ ಸಮಾಚಾರ್ / Samarth biral