ಗದಗ, 07 ಜೂನ್ (ಹಿ.ಸ.) :
ಆ್ಯಂಕರ್ : ಗದಗ ತಾಲೂಕಿನ ಮುಳಗುಂದ ಪಟ್ಟಣ ಪಂಚಾಯಿತಿಯ ವಾರ್ಡ್ ನಂ.3ರಲ್ಲಿನ ಶುದ್ಧ ನೀರಿನ ಘಟಕದ ಆವರಣ ರೋಗ-ರುಜಿನಗಳಿಗೆ ಆಹ್ವಾನ ನೀಡುತ್ತಿದ್ದು, ಸಾರ್ವಜನಿಕರು ಶುದ್ಧ ನೀರಿನ ಜೊತೆಯಲ್ಲಿ ರೋಗವನ್ನು ಸಹ ಉಚಿತವಾಗಿ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಲಕ್ಷಾಂತರ ರೂ ವೆಚ್ಚದಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಲಾಗಿದ್ದು, ಸದರಿ ಘಟಕದಲ್ಲಿ ಪ್ಲೋರೈಡ್ ಯುಕ್ತ ನೀರು ಸೋರಿಕೆಯಿಂದ ಕೊಳಚೆಯ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಬಂತೆಂದರೆ ಸಾಂಕ್ರಾಮಿಕ ಕಾಯಿಲೆಗಳು ಹರಡುವದು ಸಹಜ.
ಇಂತಹ ಸಂದರ್ಭದಲ್ಲಿ ಶುದ್ಧ ನೀರಿನ ಘಟಕದ ಆವರಣದಲ್ಲಿ ನಿತ್ಯ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿದೆ.
ಈ ಘಟಕದ ಅಕ್ಕ ಪಕ್ಕದಲ್ಲಿ ಬಸ್ ನಿಲ್ದಾಣ, ಇಂದಿರಾ ಕ್ಯಾಂಟೀನ್, ಕಂದಾಯ ಇಲಾಖೆ ಕಛೇರಿ, ಪ.ಪಂ, ಸಹಾಯಕ ಕೃಷಿ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದು, ಸದಾ ಜನಸಂದಣಿಯಿಂದ ಕೂಡಿರುತ್ತದೆ.
ಈ ಬಗ್ಗೆ ಪ.ಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಪ್ರತಿಕ್ರಿಯಿಸಿ, ಪೈಪ್ಲೈನ್ ಸೋರಿಕೆಯಿಂದ ನೀರು ನಿಲ್ಲುತ್ತಿದ್ದು, ಕೂಡಲೇ ಪೈಪ್ ಲೈನ್ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದಿದ್ದಾರೆ.
ಮುಳಗುಂದ ಪಟ್ಟಣವೇನೋ ಸ್ವಚ್ಛತೆಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಪ್ರಶಸ್ತಿ ಪಡೆದುಕೊಂಡಿದೆ.
ಆದರೆ ಈ ಪ್ರಶಸ್ತಿಗಳು ಕೇವಲ ದಾಖಲೆಗಳಿಗೆ ಮಾತ್ರ ಸಿಮಿತವಾಗಿದ್ದು, ಪ.ಪಂ ಅಧಿಕಾರಿಗಳಿಗೆ ಶುದ್ಧ ನೀರಿನ ಘಟಕದ ಆವರಣದಲ್ಲಿನ ಕಲುಷಿತ
ನೀರಿನ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Lalita MP