ಗದಗ, 07 ಜೂನ್ (ಹಿ.ಸ.) :
ಆ್ಯಂಕರ್ : ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವ ಹಾಗೂ ದುರ್ಗವ್ವ ದೇವಿಯ ಜಾತ್ರೆ ಈ ವರ್ಷ ಅದ್ಧೂರಿಯಾಗಿ ನಡೆದಿದ್ದು, ಇಡೀ ಪಟ್ಟಣ ಭಕ್ತಿಭಾವ, ಭಾವೈಕ್ಯತೆ ಮತ್ತು ಸಾಂಪ್ರದಾಯಿಕ ಸಂಸ್ಕೃತಿಯ ಮೆರೆದರು.
ಈ ವಿಶೇಷ ಜಾತ್ರೆಯಲ್ಲಿ ಬಿಳಿ ಅಂಗಿ–ಬಿಳಿ ಲುಂಗಿ ಧರಿಸಿದ ಭಕ್ತರು ಹೆಗಲ ಮೇಲೆ ದೇವಿಯ ಪಲ್ಲಕ್ಕಿ ಹೊತ್ತು, ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ದೇವಿಯ ಪಲ್ಲಕ್ಕಿಯ ಹಿಂದೂ ಮುಂದೆ ಸಾಗಿದ ಭಕ್ತ ಸಾಗರ, ದೇವಿಗೆ ಮನೆ ಮನೆಗೆ ದರ್ಶನ ಕೊಡಿಸಿ, ಉತ್ಸವವನ್ನು ದೇವಭಕ್ತಿಯಿಂದ ಉಜ್ವಲಗೊಳಿಸಿದ ದೃಶ್ಯ ಎಲ್ಲರ ಕಣ್ತುಂಬಿಸಿತು.
ಗ್ರಾಮದ ಅನನ್ಯ ಸಂಪ್ರದಾಯದಂತೆ, ಈ ಐದು ದಿನಗಳ ಕಾಲ ಯಾರೂ ಚಪ್ಪಲಿ ಧರಿಸುವಂತಿಲ್ಲ. ಮನೆಯ ಒಲೆ ಉರಿಯುವುದಿಲ್ಲ, ರೊಟ್ಟಿ ಸಪ್ಪಳ ಮಾಡುವಂತಿಲ್ಲ. ಎಲ್ಲಾ ಗ್ರಾಮಸ್ಥರೂ ದೇವಿಯ ಭೋಜನ ವ್ಯವಸ್ಥೆಯ ಮೇಲೆ ಅವಲಂಬಿತರಾಗಿರುತ್ತಾರೆ. ವಿಶೇಷ ಅಂದರೆ, ಈ ಭೋಜನ ವ್ಯವಸ್ಥೆ ಎಲ್ಲ ಸಮುದಾಯದ ಬಂಧುಗಳಿಂದ ನಿಭಾಯಿಸಲ್ಪಡುತ್ತದೆ, ಇದು ಧರ್ಮ ಸೌಹಾರ್ದತೆಗೆ ನಿದರ್ಶನವಾಗಿದೆ.
ಜಾತ್ರೆಯಲ್ಲಿ ಭಾಗವಹಿಸುವುದು ಕೇವಲ ಗ್ರಾಮಸ್ಥರ ಮಾತ್ರವಲ್ಲ; ಮದುವೆಯಾಗಿ ಹೊರ ಹೋಗಿರುವ ಮಹಿಳೆಯರೂ ಈ ಸಂದರ್ಭದಲ್ಲಿ ಗ್ರಾಮಕ್ಕೆ ಹಿಂದಿರುಗಿ ದೇವಿಯ ದರ್ಶನ ಪಡೆಯುವುದು ಕಡ್ಡಾಯ. ಇಲ್ಲವಾದರೆ ಅವರು ಒಂಬತ್ತು ವರ್ಷ ಗ್ರಾಮ ಪ್ರವೇಶಿಸಲು ಅನುಮತಿಯಿಲ್ಲ ಎಂಬ ನಂಬಿಕೆ ಇರುತ್ತದೆ. ಈ ನಂಬಿಕೆಗಳಿಂದಲೇ ಇಡೀ ಬಂಧು ಬಳಗ ಈ ಸಂದರ್ಭದಲ್ಲಿ ಸೇರಿ, ಹಬ್ಬದ ಸಡಗರದಲ್ಲಿ ತೊಡಗಿರುತ್ತಾರೆ.
ಈ ಬಾರಿ ದೇವಿಯ ಹೊಸ ಮೂರ್ತಿಗಳ ಪ್ರತಿಷ್ಠಾಪನೆ ಕೂಡಾ ಮಾಡಲಾಗಿದೆ. ಒಂದು ಬಾರಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ನಂತರ, ಸುಮಾರು 12 ವರ್ಷಕ್ಕೆ ಒಂದು ಜಾತ್ರೆಗಳನ್ನು ಆಚರಿಸಲಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ನಾನಾ ಕಟ್ಟುನಿಟ್ಟಿನ ನಿಯಮಗಳನ್ನೂ ಪಾಲಿಸಲಾಗುತ್ತದೆ.
ಜಾತ್ರೆಯು ಜಾತಿ, ಧರ್ಮ ತರವಿಲ್ಲದಂತೆ ಎಲ್ಲರನ್ನೂ ಒಂದೇ ಎನ್ನುವ ಶಕ್ತಿಯಂತಿದೆ. ಮಕ್ಕಳು, ಯುವಕರು, ಹಿರಿಯರು ಎಲ್ಲರೂ ಒಂದೇ ತರದ ಉತ್ಸಾಹದಿಂದ ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದು, ಸಂಸ್ಕೃತಿಯ ಜೀವಂತ ಉದಾಹರಣೆಯಾಗಿದೆ.
ದೇವಿಯ ಜಾತ್ರೆ ಅಂದರೆ ಕೇವಲ ಧಾರ್ಮಿಕ ಆಚರಣೆ ಅಲ್ಲ, ಇದು ಭಾವನೆಗಳ ಹಬ್ಬ. ಎಲ್ಲರೂ ಸೇರಿ ಈ ಜಾತ್ರೆ ನಡೆಸೋದು ನಮ್ಮ ಒಗ್ಗಟ್ಟಿನ ಸಂಕೇತ, ಎಂದು ಹಿರಿಯ ನಿವಾಸಿ ಸರೋಜ
ಹೇಳಿದರು.
ಈ ಜಾತ್ರೆಯೂ ಒಂದು ನಿಜವಾದ ಭಕ್ತಿಯ ನೆರೆಹೊರೆ ಆಗಿದ್ದು, ಇಂತಹ ಸಾಂಪ್ರದಾಯಿಕ ಆಚರಣೆಗಳು ಮುಂದಿನ ತಲೆಮಾರಿಗೆ ಸಂಸ್ಕೃತಿಯ ಜೀವಂತ ಪಾಠ ನೀಡಬಲ್ಲವು ಎಂಬ ನಿರೀಕ್ಷೆ ಗ್ರಾಮಸ್ಥರದು.
ಮಳೆ ಬೆಳೆ ಚನ್ನಾಗಿ ಆಗುತ್ತದೆ ಎನ್ನುವ ನಂಬಿಕೆಯಿಂದ ಗ್ರಾಮಸ್ಥರು ಒಂದಾಗಿ ಆಚರಣೆ ಮಾಡುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP