ಗದಗ, 29 ಜೂನ್ (ಹಿ.ಸ.) :
ಆ್ಯಂಕರ್ : ಅಂದಿನ ಶರಣರು ಈ ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, 12ನೇ ಶತಮಾನದಲ್ಲಿ ಬಾಳಿ ಹೋದ ಶರಣರ ವಚನಗಳನ್ನು ಜನ ಮಾನಸದಲ್ಲಿ ಬಿತ್ತುವ ಕಾರ್ಯವನ್ನು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಗಳು ಮಾಡಬೇಕು ಎಂದು ಶರಣು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಅಕ್ಕ ಮಹಾದೇವಿ ದೇವಸ್ಥಾನದಲ್ಲಿ ಜರುಗಿದ ಶ.ಸಾ.ಪ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬಸವಾದಿ ಶರಣರು ಬರೆದಿರುವ ವಚನಗಳು ಕನ್ನಡ ಸಾಹಿತ್ಯದ ಅಮೂಲ್ಯ ರತ್ನಗಳು. ಪ್ರತಿ ತಿಂಗಳಲ್ಲಿ ಎರಡು ಬಾರಿ ಶರಣ ಸಾಹಿತ್ಯ ಪರಿಷತ್ತಿನ ಗೋಷ್ಠಿಗಳು ನಡೆಯುವಂತಾಗುವ ಮೂಲಕ ಶರಣರ ವಚನಗಳ ಮಹತ್ವವನ್ನು ಇಂದಿನ ಮಕ್ಕಳಲ್ಲಿ ಬೆಳೆಸಬೇಕು. ಶರಣರ ನುಡಿಗಟ್ಟುಗಳನ್ನು ಕಂಠಪಾಠ ಮಾಡುವ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಶರಣರು ಕನ್ನಡ ಸಾಹಿತ್ಯಕ್ಕೆ ವಚನಗಳು ಮೂಲಕ ಚೈತನ್ಯ ತುಂಬುವ ಕೆಲಸ ಮಾಡಿದರು. ಶರಣರ ವಚನಗಳು ಎಂದೆಂದೂ ಅಳಿಸಲಾಗದ ಹಾಗೂ ಸಮಾಜದ ಅಂಕು-ಡೊಂಕು ತಿದ್ದುವ ಕಾರ್ಯ ಮಾಡುತ್ತಿವೆ. ಶರಣು ಸಾಹಿತ್ಯ ಪರಿಷತ್ತಿಗೆ ಸದಸ್ಯರನ್ನು ಮಾಡುವುದು, ದತ್ತಿ ನಿಧಿ ಸ್ಥಾಪನೆ ಮಾಡುವ ಮೂಲಕ ಶರಣರ ಚಿಂತನ ಮಂಥನ ನಡೆಸುವ ಮೂಲಕ ಜನ ಸಾಮಾನ್ಯರಲ್ಲಿ ವಚನಗಳು ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ ಎಂದರು.
ಲಕ್ಷ್ಮೀಶ್ವರ ತಾಲೂಕಿನಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನ ನಡೆಯಲಿ ಎಂಬುದು ಎಲ್ಲರ ಆಶಯವಾಗಿದೆ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಶರಣ ಸಾಹಿತ್ಯ ಸಮ್ಮೇಳನ ನಡೆಯುವ ಬಗ್ಗೆ ಚಿಂತನೆ ಮಾಡಲಾಗುತ್ತದೆ. ಜುಲೈ 2ರಂದು ವಚನ ಪಿತಾಮಹ ಫ.ಗು. ಹಳಕಟ್ಟಿ ಅವರು ಜನ್ಮ ದಿನಾಚರಣೆಯನ್ನು ಆಚರಿಸುವಂತೆ ಕೆ.ಎ. ಬಳಿಗೇರ ಮನವಿ ಮಾಡಿದರು.
ಈ ವೇಳೆ ಸುಲೋಚನಾ ಜವಾಯಿ ಸಹೋದರಿಯರು ಸಹೋದರ ದಿ. ಡಾ. ಎಸ್.ಬಿ. ಜವಾಯಿ ಹೆಸರಿನಲ್ಲಿ ದತ್ತಿದಾನ ನೀಡಿದರು. ಗದಗ ಮಹಿಳಾ ಕದಳಿ ವೇದಿಕೆಯ ಅಧ್ಯಕ್ಷೆ ಸುಧಾ ಹುಚ್ಚಣ್ಣವರ, ಬಂಡಾಯ ಸಾಹಿತಿ ಸಿ.ಜಿ. ಹಿರೇಮಠ, ಶಸಾಪ ತಾಲೂಕಾ ಅಧ್ಯಕ್ಷ ಎಲ್. ಎಸ್. ಅರಳಹಳ್ಳಿ, ನಿರ್ಮಲಾ ಅರಳಿ, ಅಶ್ವಿನಿ ಅಂಕಲಕೋಟಿ, ಪ್ರತಿಮಾ ಮಹಾಜನ್ಶೆಟ್ಟರ್, ಜೆ.ಎಸ್. ರಾಮಶೆಟ್ಟರ, ಮಾಲಾದೇವಿ ದಂದರಗಿ, ಬಸಣ್ಣ ಬೆಂಡಿಗೇರಿ ಮಾತನಾಡಿದರು. ಸಭೆಯಲ್ಲಿ ಎಂ.ಎಂ. ಹಿರೇಮಠ, ಬಸವರಾಜ ಸಂಗಪ್ಪ ಶೆಟ್ಟರ್, ಕವಿತಾ ಅರಳಿಹಳ್ಳಿ, ರತ್ನಾ ಕರ್ಕಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP