ಗದಗ, 29 ಜೂನ್ (ಹಿ.ಸ.) :
ಆ್ಯಂಕರ್ : ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಭರವಸೆ ನೀಡಿ ಈಗ ಕಾನೂನು ತೊಡಕು ಎಂಬ ನೆಪ ಮುಂದಿಡುತ್ತಿದ್ದಾರೆ. ಕಾನೂನು ತೊಡಕುಗಳಿಗೆ ಅವಕಾಶ ನೀಡದೆ ಎಲ್ಲ ಅತಿಥಿ ಉಪನ್ಯಾಸಕರನ್ನ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಬೇಕು. ಇಲ್ಲವಾದಲ್ಲಿ ಜುಲೈ 10ರಂದು ನಗರದ ಮುನ್ಸಿಪಲ್ ಮೈದಾನದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಆರ್.ಕಲ್ಮನಿ ತಿಳಿಸಿದರು.
ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 430 ಪ್ರಥಮದರ್ಜೆ ಕಾಲೇಜುಗಳಿದ್ದು, ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿಗೆ ಸರಕಾರಿ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಈಗಾಗಲೇ ಅರ್ಜಿ ಆಹ್ವಾನಿಸಿದ್ದು ಸ್ವಾಗತಾರ್ಹ. ಆದರೆ ಶೈಕ್ಷಣಿಕ ಅರ್ಹತೆ ಮತ್ತು ಸೇವಾನುಭವ ಇದ್ದವರನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು ಎಂದು ಉನ್ನತ ಶಿಕ್ಷಣ ತಿಳಿಸಿರುವುದು ಸಮಂಜಸವಲ್ಲ ಎಂದು ಹೇಳಿದರು.
ಅತಿಥಿ ಉಪನ್ಯಾಸಕರ ಆಯ್ಕೆಗೆ ಎಂ.ಫಿಲ್ ಪದವಿಯನ್ನು ಶೈಕ್ಷಣಿಕ ಅರ್ಹತೆ ಎಂದು ಪರಿಗಣಿಸಬೇಕು. ಆ ಮೂಲಕ ನೂರಾರು ಜನ ಎಂ.ಫಿಲ್ ಪದವೀಧರರ ಆತಂಕಕ್ಕೆ ತೆರೆ ಎಳೆಯಬೇಕು. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಒಂದು ವಾರದೊಳಗೆ ಸ್ಪಷ್ಟ ಮಾಹಿತಿ ನೀಡಿ ಬೇಕು ಎಂದು ಒತ್ತಾಯ ಮಾಡಿದರು.ಈಗಾಗಲೇ 10-15 ವರ್ಷಗಳಿಂದ ಸ.ಪ್ರದ ಕಾಲೇಜುಗಳಲ್ಲಿ ಬೋಧನೆ ಮಾಡಿದ ಅನುಭವ ಇರುವ ಮತ್ತು ಶೈಕ್ಷಣಿಕ ಅರ್ಹತೆ ಇಲ್ಲದ ಅನೇಕ ಅತಿಥಿ ಉಪನ್ಯಾಸಕರು ಸರಕಾರದ ಈ ಕ್ರಮದಿಂದ ಆತಂತ್ರರಾಗಿ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಚಿವರು ಮತ್ತು ಸರಕಾರವು ಅತಿಥಿ ಉಪನ್ಯಾಸಕರ ಪರ ಇದ್ದರೂ ಇಲಾಖೆಯ ಆಯಕಟ್ಟಿನ ಹುದ್ದೆಗಳಲ್ಲಿರುವ ಕೆಲವು ಅಧಿಕಾರಿಗಳು ಸರಕಾರದ ಹಾದಿ ತಪ್ಪಿಸುವ ಮೂಲಕ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ಪದೇ ಪದೇ ಕಾನೂನು ತೊಡಕು ಉಂಟುಮಾಡುವ ಮೂಲಕ ಅತಿಥಿ ಉಪನ್ಯಾಸಕರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ಉಪನ್ಯಾಸಕರನ್ನು ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಬೇಕು. ಇಲ್ಲದಿದ್ದರೆ ಕಾನೂನು ಸಚಿವರ ತವರು ಜಿಲ್ಲೆ ಗದಗದಲ್ಲಿ ರಾಜ್ಯದ ಎಲ್ಲ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ಹೋರಾಟ
ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಕೇವಲ ಅತಿಥಿ ಉಪನ್ಯಾಸಕರಿಗೆ ಮಾತ್ರ ಕಾನೂನು ತೊಡಕು ಹೇಳುವ ಸರಕಾರದ ವಿರುದ್ಧ ರಾಜ್ಯದ ಎಲ್ಲ ಅತಿಥಿ ಉಪನ್ಯಾಸಕರು ಈ ನಡೆಯನ್ನ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಹನುಮಂತಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎ.ಎ. ಸೊಪ್ಪಿಮಠ, ವಿರೇಶ ಬಡಿಗೇರ, ಸುಭಾಷ ಜಾಲಿಹಾಳ, ವಿಜಯಕುಮಾರ ದೇಸಾಯಿಗೌಡ್ರ, ಭಗತಸಿಂಗ್ ನವಲೂರಕರ, ಶರಣು ಮರಿಗುಪ್ಪಿ, ನಾಗರತ್ನ ಬಳ್ಳಾರಿ, ಪಾರ್ವತಿ ತಾರಿಹಾಳ, ಗೀತಾ ಮೇಟಿ, ಪದ್ಮಾ ತಳಕಲ್, ಆರೀಫಾಬಾನು, ಎಂ.ಸಿ. ಆಶಾ, ನಾಜಿಯಾ ಅತ್ತಹರ ಮುಂತಾದ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP