ಧಾರವಾಡ, 29 ಜೂನ್ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನ್ವಯ ಧಾರವಾಡ ಜಿಲ್ಲೆಯ ಆಯ್ದ ಹೋಬಳಿಗಳಲ್ಲಿ ಹಸಿಮೆಣಸಿನಕಾಯಿ ಮತ್ತು ಮಾವು ಬೆಳೆಗೆ ವಿಮೆ ಕೈಗೊಳ್ಳಲು ನೋಂದಣಿ ಪ್ರಾರಂಭವಾಗಿದೆ.
ಹಸಿಮೆಣಸಿನಕಾಯಿ ಬೆಳೆಗೆ ಧಾರವಾಡ, ಅಮ್ಮಿನಭಾವಿ, ಗರಗ, ದುಮ್ಮವಾಡ ಹಾಗೂ ಛಬ್ಬಿ ಹೋಬಳಿಗಳ ಆಯ್ದ ಗ್ರಾಮ ಪಂಚಾಯತಗಳನ್ನು ಹಾಗೂ ಮಾವು ಬೆಳೆಗೆ ಅಮ್ಮಿನಭಾವಿ, ಧಾರವಾಡ, ಗರಗ, ಅಳ್ನಾವರ, ಹುಬ್ಬಳ್ಳಿ, ಛಬ್ಬಿ, ಕಲಘಟಗಿ, ತಾ.ಹೊನ್ನಳ್ಳಿ, ದುಮ್ಮವಾಡ, ಕುಂದಗೋಳ ಮತ್ತು ಸಂಶಿ ಹೋಬಳಿಗಳ ಗ್ರಾಮ ಪಂಚಾಯತಗಳನ್ನು ಈ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ.
ಈ ಯೋಜನೆಗೆ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ನಿಗದಿಯಾಗಿದ್ದು, ಹಸಿಮೆಣಸಿನಕಾಯಿಗೆ ಪ್ರತಿ ಹೆಕ್ಟೇರ್ಗೆ ₹6745 ಮತ್ತು ಮಾವಿಗೆ ₹4000 ವಿಮಾ ಕಂತು ವಿಧಿಸಲಾಗಿದೆ. ಈ ಮೊತ್ತವನ್ನು ರೈತರು ಅಗಸ್ಟ್ 31, 2025ರೊಳಗಾಗಿ ಪಾವತಿಸಬೇಕಾಗುತ್ತದೆ. ನೋಂದಣಿಗೆ ಫಾರ್ಮ್ ಐಡಿ ಹೊಂದಿರುವುದು ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ಸ್ಥಳೀಯ ಬ್ಯಾಂಕ್ಗಳ ಸಿಬ್ಬಂದಿ ಅಥವಾ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿಯ ಜಿಲ್ಲಾ ಸಂಯೋಜಕರು ಶ್ರೀನಿವಾಸ ಟಿ (ಮೊ. 6366684606) ಮತ್ತು ರಾಮನಗೌಡ ಬಿರಾದಾರ್ (ಮೊ. 6361985987) ಅವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa