ದೋಷ ರಹಿತ ಮತದಾರರ ಪಟ್ಟಿ ತಯಾರಿಸಿ - ಜಿಲ್ಲಾಧಿಕಾರಿ ಸಿದ್ರಾಮೇಶ್ವರ
ಕೊಪ್ಪಳ, 29 ಜೂನ್ (ಹಿ.ಸ.) : ಆ್ಯಂಕರ್ : ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಬಿ.ಎಲ್.ಓ.ಗಳ ಮೂಲಕ ಪ್ರತಿ ಮನೆ ಮನೆಗೆ ಸಮೀಕ್ಷೆ ನಡೆಸಿ, ದೋಷ ರಹಿತ ಮತದಾರರ ಪಟ್ಟಿಯನ್ನು ತಯಾರಿಸುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಹೇಳಿದ್ದಾರೆ. ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ
ದೋಷ ರಹಿತ ಮತದಾರರ ಪಟ್ಟಿ ತಯಾರಿಸಿ - ಜಿಲ್ಲಾಧಿಕಾರಿ ಸಿದ್ರಾಮೇಶ್ವರ


ದೋಷ ರಹಿತ ಮತದಾರರ ಪಟ್ಟಿ ತಯಾರಿಸಿ - ಜಿಲ್ಲಾಧಿಕಾರಿ ಸಿದ್ರಾಮೇಶ್ವರ


ಕೊಪ್ಪಳ, 29 ಜೂನ್ (ಹಿ.ಸ.) :

ಆ್ಯಂಕರ್ : ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಬಿ.ಎಲ್.ಓ.ಗಳ ಮೂಲಕ ಪ್ರತಿ ಮನೆ ಮನೆಗೆ ಸಮೀಕ್ಷೆ ನಡೆಸಿ, ದೋಷ ರಹಿತ ಮತದಾರರ ಪಟ್ಟಿಯನ್ನು ತಯಾರಿಸುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಹೇಳಿದ್ದಾರೆ.

ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ವಿಧಾನಸಭಾ ಕ್ಷೇತ್ರದ ಮಾಸ್ಟರ್ ಟ್ರೈನರ್ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳುಗಳ ಮೊದಲವಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ತಿದ್ದುಪಡಿ ಮತ್ತು ಹೊಸ ಮತದಾರರ ಸೇರ್ಪಡೆಗೆ ಅವಕಾಶವಿರುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ನೇಮಕಗೊಂಡಿರುವ ಬಿ.ಎಲ್.ಓ.ಗಳು ತಮಗೆ ವಹಿಸಿದ‌ ಪಟ್ಟಿಯನ್ನು ತೆಗೆದುಕೊಂಡು ಕೂಲಂಕಷವಾಗಿ ಪರಿಶೀಲಿಸಿ, ಪ್ರತಿ ಮನೆ ಮನೆಗೆ ಹೋಗಿ ಪರಿಶೀಲನೆ ಮಾಡಬೇಕು ಎಂದರು.

ಇದರಲ್ಲಿ 18 ವರ್ಷ ಪೂರ್ಣಗೊಂಡಿರುವ ಹೊಸ ಮತದಾರರ ಹೆಸರನ್ನು ಸೇರಿಸಲು ಮತ್ತು ಸ್ಥಳಾಂತರಗೊಂಡ ಹಾಗೂ ಮರಣ ಹೊಂದಿದ ಮತದಾರರ ಹೆಸರನ್ನು ತೆಗೆದು ಹಾಕಲು ಅವಕಾಶವಿರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಬಿ.ಎಲ್.ಓ.ಗಳಿಗೆ ಸೂಕ್ತ ತರಬೇತಿ ನೀಡಿ, ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಮಾಸ್ಟರ್ ಟ್ರೈನರ್ ಗಳಿಗೆ ಸೂಚನೆ ನೀಡಿದರು.

ಚುನಾವಣಾ ನೋಂದಣಾಧಿಕಾರಿ (ಇ.ಆರ್.ಓ) ಅಥವಾ ಸಹಾಯಕ ಚುನಾವಣಾ ನೋಂದಣಾಧಿಕಾರಿ (ಎ.ಇ.ಆರ್.ಓ) ರವರ ನಿಯಂತ್ರಣ ಮತ್ತು ಮೇಲ್ವಿಚಾರಣೆಯಲ್ಲಿ ಬಿಎಲ್‌ಒ ತನಗೆ ನಿಯೋಜಿಸಲಾದ ಭಾಗ, ಮತಗಟ್ಟೆ, ಮತದಾನ ಪ್ರದೇಶದ ಮತದಾರರ ಪಟ್ಟಿಯನ್ನು ನವೀಕರಿಸಬೇಕು. ಮೊದಲನೆಯದಾಗಿ ಬಿ.ಎಲ್.ಓ.ಗಳು ಮತದಾರರ ಪಟ್ಟಿಯಲ್ಲಿ ಉಲ್ಲೇಖಿಸಲಾದ ಪ್ರದೇಶ ಅಥವಾ ಭಾಗಕ್ಕೆ ಭೇಟಿ ನೀಡಬೇಕು. ತಮಗೆ ಒದಗಿಸಲಾದ ಮತದಾರರ ಪಟ್ಟಿಯು ಪ್ರಸ್ತುತ ಮತದಾರರ ಪಟ್ಟಿಯಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಮತದಾರರ ಪಟ್ಟಿಯ ವಿಭಾಗಗಳು, ಮತಗಟ್ಟೆಯ ಪ್ರದೇಶಗಳು ಮತ್ತು ಸಂಬಂಧಪಟ್ಟ ಪ್ರದೇಶ, ಭಾಗಕ್ಕೆ ಹಂಚಿಕೆಯಾದ ಮತದಾರರ ಸಂಖ್ಯೆಯ ಬಗ್ಗೆ ಮಾಹಿತಿಯನ್ನು ಪಡೆಯುವುದು ಅಗತ್ಯವಾಗಿರುತ್ತದೆ‌ ಎಂದರು.

ಬಿ.ಎಲ್.ಓ.ಗಳು ತಮಗೆ ನಿಯೋಜಿಸಲಾದ ಭಾಗಕ್ಕೆ ಸಂಬಂಧಿಸಿದ ಪಟ್ಟಿಯನ್ನು ಪರಿಶೀಲನೆ ಮಾಡಬೇಕು. ಮತಗಟ್ಟೆ ಭಾಗದ ಪ್ರದೇಶಗಳಿಗೆ ಆಗಾಗ್ಗೆ ಭೇಟಿ ನೀಡುವುದು ಮತ್ತು ಸ್ಥಳೀಯ ಜನರೊಂದಿಗೆ, ವಿಶೇಷವಾಗಿ ಹಿರಿಯರು ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಬೇಕು. ತೆಗೆದುಹಾಕಬೇಕಾದ ಪಟ್ಟಿಯಲ್ಲಿರುವ ಮೃತ, ಸ್ಥಳಾಂತರಗೊಂಡ ಅಥವಾ ಪುನರಾವರ್ತಿತ ನಕಲಿ ಮತದಾರರ ಹೆಸರುಗಳನ್ನು ಗುರುತಿಸುವುದು ಹಾಗೂ ಮತದಾರರ ಪಟ್ಟಿಯಲ್ಲಿ ಗುರುತಿಸಿರುವ ಪಿಎಸ್ಇ & ಡಿಎಸ್ಇ ಮಾಹಿತಿಯ ವರದಿಯನ್ನು ಇ.ಆರ್.ಓ.ಗಳಿಗೆ ಸಲ್ಲಿಸಬೇಕು. ರಾಜ್ಯ ಮತ್ತು ರಾಷ್ಟ್ರೀಯ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬಿ.ಎಲ್.ಎ.ಗಳಿಗೆ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಲು ಅನುವು ಮಾಡಿಕೊಡಬೇಕು ಮತ್ತು ತಿದ್ದುಪಡಿಗಳನ್ನು ಗುರುತಿಸಬೇಕು. ಅಂಚೆ ಕಚೇರಿಯಿಂದ ಹಿಂತಿರುಗಿಸಲಾದ ಮತದಾರರ ಗುರುತಿನ ಚೀಟಿ (ಇಪಿಐಸಿ)ಗಳನ್ನು ವಿತರಿಸಬೇಕಾಗಿದ್ದು, ಈ ಬಗ್ಗೆ ಎಲ್ಲಾ ಬಿ.ಎಲ್.ಎ.ಗಳಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.

ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಅವರು ಮಾತನಾಡಿ, ಬೂತ್ ಮಟ್ಟದ ಅಧಿಕಾರಿಗಳು ಇ.ಆರ್.ಓ / ಎ.ಇ.ಆರ್.ಓ ಪರವಾಗಿ ಅರ್ಜಿದಾರರಿಂದ (ಮತದಾರರು ಮತ್ತು ನಿರೀಕ್ಷಿತ ಮತದಾರರು) ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಅರ್ಜಿ ನಮೂನೆ 6, 7 ಮತ್ತು 8 ರಲ್ಲಿ ಸ್ವೀಕರಿಸಬೇಕು. ಹಕ್ಕುಗಳು ಮತ್ತು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಪರಿಶೀಲನೆ ಮಾಡಿ ಮತ್ತು ಕ್ಷೇತ್ರ ಭೇಟಿಯ ನಂತರ, ವರದಿಯನ್ನು ಇ.ಆರ್.ಓ.ಗೆ ಸಲ್ಲಿಸಬೇಕು. ಮನೆ ಮನೆಗೆ ಭೇಟಿ ನೀಡಿ, ಒಂದಕ್ಕಿಂತ ಹೆಚ್ಚು ಬಾರಿ ಕಾಣಿಸಿಕೊಳ್ಳುತ್ತಿರುವ ಹೆಸರುಗಳು, ವರ್ಗಾವಣೆಗೊಂಡ, ಸ್ಥಳಾಂತರಗೊಂಡ, ವಲಸೆ ಬಂದ ಅಥವಾ ಮೃತ ಮತದಾರರನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಆಕ್ಷೇಪಣೆಗಳನ್ನು ಸ್ವೀಕರಿಸಿದ ಮತದಾರರಿಗೆ ನೋಟಿಸ್‌ ನೀಡಲು ವರದಿ ಅಥವಾ ನಮೂನೆಗಳನ್ನು ಇ.ಆರ್.ಒ.ಗಳಿಗೆ ಸಲ್ಲಿಸಬೇಕು. ಗೊತ್ತುಪಡಿಸಿದ ಸ್ಥಳಗಳಲ್ಲಿ ಕರಡು ಮತದಾರರ ಪಟ್ಟಿ ಹಾಗೂ ನಿಗದಿತ ಪ್ರಕಟಣೆಗಳನ್ನು ಪ್ರದರ್ಶಿಸಬೇಕು. ಮನೆ ಸಂಖ್ಯೆಗಳು ಲಭ್ಯವಿಲ್ಲದ ಮನೆಗಳಿಗೆ ಕಾಲ್ಪನಿಕ ಸಂಖ್ಯೆ ನೀಡಿ. ಮನೆ ಮನೆಗೆ ಭೇಟಿ ನೀಡುವ ಮೂಲಕ ಹಕ್ಕುಗಳು ಅಥವಾ ಆಕ್ಷೇಪಣೆಗಳ ಕುರಿತು ಸ್ಥಳ ಪರಿಶೀಲನೆ ಮಾಡಿ ನಂತರ ಇ.ಆರ್.ಓ.ಗಳಿಗೆ ತಮ್ಮ ವರದಿಯನ್ನು ಸಲ್ಲಿಸಬೇಕು. ಬಿ.ಎಲ್‌.ಎ.ಗಳ ಜೊತೆ ಸಮನ್ವಯ ಸಾಧಿಸಬೇಕು. ನಜ್ರ ನಕ್ಷೆಯನ್ನು ಸಿದ್ಧಪಡಿಸಬೇಕು. ಮೃತ ಮತ್ತು ಸ್ಥಳಾಂತರಗೊಂಡ ಮತದಾರರನ್ನು ಗುರುತಿಸುವಂತೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ಮನೆ-ಮನೆ ಸಮೀಕ್ಷೆಯ ದಾಖಲೆಯನ್ನು ಬಿ.ಎಲ್.ಓ ರಿಜಿಸ್ಟರ್ನಲ್ಲಿ ನಿರ್ವಹಿಸಬೇಕು. ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಮೊದಲು, ಬಿ.ಎಲ್.ಓ.ಗಳು ಸಂಬಂಧಪಟ್ಟ ಮತದಾನ ಕೇಂದ್ರದ ಮತದಾರರ ಮಾಹಿತಿಯನ್ನು ಮತ್ತು ನಮೂನೆ 1-8 ಅನ್ನು ನಿರ್ವಹಿಸಬೇಕು. ಬಿ.ಎಲ್.ಓ ರಿಜಿಸ್ಟರ್ 'ಬಿ.ಎಲ್.ಓ ಆ್ಯಪ್' ನಲ್ಲಿ ಲಭ್ಯವಿದೆ ಎಂದು ಹೇಳಿದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, ಬೂತ್ ಮಟ್ಟದ ಅಧಿಕಾರಿಗಳು ಭಾರತ ಚುನಾವಣಾ ಆಯೋಗ ನೀಡಿರುವ ಕ್ರಮಗಳನ್ನು ಅನುಸರಿಸಬೇಕು. ಮನೆ ಮನೆ ಸಮೀಕ್ಷೆ ವೇಳೆ ಮೊದಲು ಸ್ವಂತ ಪರಿಚಯ ಮಾಡಿಕೊಂಡು ತಮ್ಮ ಗುರುತಿನ ಚೀಟಿಯನ್ನು ಅಥವಾ ನೇಮಕಾತಿ ಪತ್ರವನ್ನು ತೋರಿಸಬೇಕು ಹಾಗೂ ಭಾರತ ಚುನಾವಣಾ ಆಯೋಗದ ಪ್ರತಿನಿಧಿಯಾಗಿ ಮನೆಗೆ ಬಂದಿರುವ ಉದ್ದೇಶವನ್ನು ತಿಳಿಸಬೇಕು.

ನಿಮ್ಮ ಮೇಲಾಧಿಕಾರಿಯ (ಇ.ಆರ್.ಓ) ಹೆಸರು, ಹುದ್ದೆ, ವಿಳಾಸ ಮತ್ತು ಮೊಬೈಲ್ ನಂಬರನ್ನು ಮತದಾರರಿಗೆ ಒದಗಿಸಬೇಕು. ಮನೆ ಮನೆಗೆ ಭೇಟಿ ನೀಡಿದಾಗ, ಮೊದಲು ಮತದಾರರ ಪಟ್ಟಿಯನ್ನು ತೋರಿಸಿ, ಪಟ್ಟಿಯಲ್ಲಿರುವ ಮನೆಯ ಎಲ್ಲಾ ಮತದಾರರ ಹೆಸರುಗಳನ್ನು ಓದಿ ಹೇಳಿ, ಮನೆಯಲ್ಲಿರುವ ಯಾವುದೇ ಸದಸ್ಯರ ಹೆಸರು ಬಿಟ್ಟುಹೋಗಿದೆಯೇ?, 18 ವರ್ಷಕ್ಕಿಂತ ಮೇಲ್ಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಬೇಕೇ?, ಹೀಗೆ ನೀಡಿರುವ ಪ್ರಶ್ನೆಗಳನ್ನು ಕೇಳಿ, ಮಾಹಿತಿಯನ್ನು ಸಂಗ್ರಹಿಸಬೇಕು. ಯಾವುದೇ ಮತದಾರರು ಅವರ ಮನೆಯಲ್ಲಿ ಇರದಿದ್ದರೆ, ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಂತರ, ನಿಗದಿತ ನಮೂನೆಯಲ್ಲಿ ಮತದಾರರ ಮನೆಯಲ್ಲಿ ನೋಟಿಸ್‌ ಅಂಟಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕಛೇರಿಯ ಚುನಾವಣಾ ತಹಶಿಲ್ದಾರ ರವಿ ವಸ್ತ್ರದ್ ಸೇರಿದಂತೆ ವಿವಿಧ ತಾಲ್ಲೂಕುಗಳ ತಹಶಿಲ್ದಾರರು, ಜಿಲ್ಲಾಧಿಕಾರಿ ಕಛೇರಿಯ ಚುನಾವಣಾ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಮಾಸ್ಟರ್ ಟ್ರೈನರ್ ಗಳು ಹಾಗೂ ಮತ್ತಿತರರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande