ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ದೇಶದ ಮುತ್ಸದ್ದಿ ರಾಜಕಾರಣಿ : ನ್ಯಾ. ಗೋಪಾಲಗೌಡ
ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ದೇಶದ ಮುತ್ಸದ್ದಿ ರಾಜಕಾರಣಿ : ನ್ಯಾ. ಗೋಪಾಲಗೌಡ
ಕೋಲಾರ ತಾಲ್ಲೂಕಿನ ಪಿ.ಎಂ.ಶ್ರೀ ಜವಹಾರ್ ನವೋದಯ ಶಾಲೆಯಲ್ಲಿ ನಡೆದ ಕೆ.ಸಿ.ರೆಡ್ಡಿ ಸಾಂಸ್ಕೃತಿಕ ಉತ್ಸವವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಉದ್ಘಾಟಿಸಿದರು.


ಕೋಲಾರ, ೨೯ ಜೂನ್ (ಹಿ.ಸ) :

ಆ್ಯಂಕರ್ : ಮೈಸೂರು ರಾಜ್ಯದ ಪ್ರಥಮ ಮುಖ್ಯ ಮಂತ್ರಿ ದಿವಂಗತ ಕೆ.ಸಿ.ರೆಡ್ಡಿಯವರು ದೇಶ ಕಂಡ ಅಪರೂಪದ ಮುತ್ಸದ್ಧಿ ರಾಜಕಾಣಿಯಾಗಿದ್ದರು. ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ರೆಡ್ಡಿಯವರು ದೇಶ ಮತ್ತು ನಾಡು ಕಟ್ಟಲು ಚರಿತ್ರೆಯಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ.ದೇಶದ ಸ್ವಾತಂತ್ರ ಸಂಗ್ರಾಮದ ಇತಿಹಾಸದಲ್ಲಿ ರೆಡ್ಡಿಯವರ ಹೆಜ್ಜೆ ಗುರುತುಗಳನ್ನು ಕಾಣಬಹುದಾಗಿದೆ. ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿ ಗ್ರಾಮದಲ್ಲಿ ಜನಿಸಿದ ರೆಡ್ಡಿಯವರು ಎಲ್.ಎಲ್.ಬಿ ಪದವಿ ಅಂದಿನ ಮದರಾಸಿನಲ್ಲಿ ವ್ಯಾಸಂಗ ಮಾಡಿದ್ದರು. ಅವರು ರೈತರು ಹಾಗು ಕಾರ್ಮಿಕರ ಒಳಿತಿಗಾಗಿ ಅಪಾರವಾದ ಕೊಡುಗೆ ನಿಡಿದ್ದಾರೆ ಎಂದು ಸುಪ್ರೀಮ್ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಪ್ರಾಯಪಟ್ಟರು.

ಕೋಲಾರ ತಾಲ್ಲೂಕಿನ ವಕ್ಕಲೇರಿಯ ಜವಹಾರ್ ನವೋದಯ ಶಾಲೆಯಲ್ಲಿ ಬೆಂಗಳೂರಿನ ಕೆ.ಸಿ.ರೆಡ್ಡಿ ಸರೋಜಮ್ಮ ಪ್ರತಿಷ್ಠಾನದಿಂದ ನಡೆದ ಕೆ,ಸಿ ರೆಡ್ಡಿ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರದಲ್ಲಿ ನೆಹರು ಸಚಿವ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿದ್ದಾಗ ಬೆಂಗಳೂರಿನಲ್ಲಿ ಭಾರಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಸಾವಿರಾರು ಮಂದಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿದರು. ಏ.ಟಿ.ಏ ಹೆಚ್ ಎಂ ಟಿ ಬಿಹೆಚ್‌ಇಲ್ ಮತ್ತು ಬಿ.ಇ.ಎಲ್ ಕಾರ್ಖಾನೆಗಳನ್ನು ಸ್ಥಾಪನೆ ಮಾಡುವ ಮೂಲಕ ಬೆಂಗಳೂರು ಕೈಗಾರಿಕಾ ನಗರವಾಗಿ ಬೆಳೆಯಲು ಕಾರಣರಾದರು. ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿ ಸದನದಲ್ಲಿ ರೈತರು ಕಾರ್ಮಿಕರ ಪರ ಶಾಸನಗಳನ್ನು ರಚನೆ ಮಾಡಿದ್ದರು. ಅವರೊಬ್ಬ ಜನಪರ ರಾಜಕಾರಣಿಯಾಗಿದ್ದರು. ಸದಾ ಜನ ಸಾಮಾನ್ಯರ ಒಳಿತಿಗಾಗಿ ದುಡಿದು ಜನಮಾನಸದಲ್ಲಿ ಈಗಲು ಉಳಿದ್ದಾರೆ ಎಂದು ಸ್ಮರಿಸಿದರು.

ಅವರ ಮೊಮ್ಮಗಳಾದ ವಸಂತಕವಿತ ಇತಿಹಾಸದಲ್ಲಿ ಕೆ.ಸಿ ರೆಡ್ಡಿಯವರ ಹೆಸರು ಸದಾ ಹಸಿರಾಗಿರಲು ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ.ಕೆ.ಸಿ.ರೆಡ್ಡಿ ಸರೋಜಮ್ಮ ಪ್ರತಿಷ್ಠಾನದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ಧಾರೆ. ವಿಧಾನ ಸೌದದ ಮುಂದೆ ಕೆ.ಸಿ. ರೆಡ್ಡಿಯವರ ಪ್ರತಿಮೆಯನ್ನು ಸ್ಥಾಪನೆ ಮಾಡಲು ಕಾರಣಕರ್ತರಾಗಿದ್ದಾರೆ ಎಂದು ಶ್ಲಾಘಿಸಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ .ಸುದರ್ಶನ್ ಮಾತನಾಡಿ ಬೆಂಗಳೂರಿನಲ್ಲಿ ವಿಧಾನಸೆಧ ನಿರ್ಮಾಣಕ್ಕೆ ಕೆ.ಸಿ.ರೆಡ್ಡಿಯವರು ಅಂದಿನ ಭಾರತ ಪ್ರಧಾನಿ ನೆಹರುರವರ ಸಮ್ಮುಖದಲ್ಲಿ ಅಡಿಪಾಯ ಹಾಕಿದರು. ಒಂದು ವೇಳೆ ಕೆ,ಸಿ.ರೆಡ್ಡಿಯವರು ಅಂದು ವಿಧಾನಸೌಧಕ್ಕೆ ಅಡಿಪಾಯ ಹಾಕದಿದ್ದರೆ ಬೆಂಗಳೂರು ಕರ್ನಾಟಕದ ರಾಜಧಾನಿ ಆಗುತ್ತಿರಲಿಲ್ಲ. ಇತಿಹಾಸದಲ್ಲಿ ವಿಧಾನಸೌಧ ದೊಡ್ಡ ಹೆಗ್ಗುರುತು ಆಗಿದೆ. ರೆಡ್ಡಿಯವರು ಮುಖ್ಯ ಮಂತ್ರಿ ಆಗುವ ಮೊದಲು ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರು. ಅವರು ದೇಶದ ವಿಮೋಚನೆಗಾಗಿ ಮಹಾತ್ಮ ಗಾಂದಿಯವರೊ0ದಿಗೆ ಹೋರಟ ನಡೆಸಿದ್ದರು. ಮಹಾತ್ಮ ಗಾಂಧಿ ಕೋಲಾರಕ್ಕೆ ಆಗಮಿಸಿದಾಗ ಹರಿಜನೋದ್ದಾರ ಕಾರ್ಯಕ್ರಮಗಳಿಗೆ ದೇಣಿಗೆ ಸಂಗ್ರಹ ಮಾಡಿದ್ದರು. ಬಂಗಾರಪೇಟೆಗೆ ಮಹಾತ್ಮಾ ಗಾಂಧಿ ಆಗಮಿಸಿದಾದ ಕೆ.ಸಿ.ರೆಡ್ಡಿ ಸೇರಿದಂತೆ ಇತರ ಸ್ವಾತಂತ್ರ ಹೋರಾಟಗಾರರು ಮಹಾತ್ಮಗಾಂಧಿಯವರನ್ನು ರೈಲ್ವೆ ನಿಲ್ದಾಣದಿಂದ ಮೆರವಣಿಗೆಯಲ್ಲಿ ಕರೆತಂದರು ಎಂದು ತಿಳಿಸಿದರು.

ಕೆ.ಸಿ.ರೆಡ್ಡಿ ಸರೋಜಮ್ಮ ಫೌಂಡೇಷನ್ ಸಂಸ್ಥಾಪಕಿ ವಸಂತ ಕವಿತ ಕೆ.ಸಿ.ರೆಡ್ಡಿ ಮಾತನಾಡಿ ನಮ್ಮ ರಾಜ್ಯ ಅಲ್ಲದೆ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಬಿಹಾರದ ಬೋರ್ಕಲಾದಲ್ಲಿ ಅಂದಿನ ದಿನಗಳಲ್ಲೇ ಕೈಗಾರಿಕಾ ಸಚಿವರಾಗಿದ್ದಾಗ ಉಕ್ಕು ಕಾರ್ಖಾನೆಯನ್ನು ಅನುಷ್ಠಾನ ಮಾಡಿದ್ದರು. ಮಹಿಳೆಯರ ಸಬಲೀಕರಣಕ್ಕೆ ಕೋಲಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾರ್ಯಕ್ರಮ ಅನುಷ್ಠಾನ ಮಾಡಿದ್ದರು. ಕೋಲಾರ ತಾಲ್ಲೂಕಿನ ಪಿಎಲ್‌ಡಿ ಬ್ಯಾಂಕ್ ಸ್ಥಾಪನೆ ಮಾಡಿ ಮೊದಲ ಅಧ್ಯಕ್ಷರಾಗಿದ್ದರು. ಬ್ಯಾಂಕ್ ಮೂಲಕ ಕೃಷಿಕರಿಗೆ ಆರ್ಥಿಕ ನೆರವು ಕಲ್ಪಿಸಿದ್ದರು. ಕೆ.ಸಿ. ರೆಡ್ಡಿಯವರನ್ನು ಸದಾ ಸ್ಮರಿಸಲು ಕೋಲಾರದಲ್ಲಿ ಅವರ ಪ್ರತಿಮೆ ಅನಾವರಣ ಮಾಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಪ್ರತಿಮೆ ಅನಾವರಣ ಮಾಡಬೇಕು ಅವರನ್ನು ಸ್ಮರಿಸುವುದೇ ಅವರಿಗೆ ನಾವು ನೀಡುವ ಕೊಡುಗೆ ಎಂದರು.

ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ಕೋಲಾರ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಾ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಕಾರ್ಯಾದ್ಯಕ್ಷ ಊರುಬಾಗಿಲು ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ವೆಂಕಟಪತಿಯಪ್ಪ, ಜವಹಾರ್ ನವೋದಯ ಶಾಲೆಯ ಪ್ರಾಂಶುಪಾಲ ಇ ಉಮಾಪತಿ ರೆಡ್ಡಿ ಉಪ ಪ್ರಾಂಶುಪಾಲರಾದ ಆರ್. ಉಮಾ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ಕೆ.ಸಿ. ಅನಂತಕುಮಾರ್ ಭಾಗವಹಿಸಿದ್ದರು.

ಚಿತ್ರ :ಕೋಲಾರ ತಾಲ್ಲೂಕಿನ ಪಿ.ಎಂ.ಶ್ರೀ ಜವಹಾರ್ ನವೋದಯ ಶಾಲೆಯಲ್ಲಿ ನಡೆದ ಕೆ.ಸಿ.ರೆಡ್ಡಿ ಸಾಂಸ್ಕೃತಿಕ ಉತ್ಸವವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande