ಯಾವಗಲ್ ಸೇತುವೆ ಮೇಲ್ದರ್ಜೆಗೆ ಏರಿಸಲು ಒತ್ತಾಯ
ಗದಗ, 29 ಜೂನ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಯಾವಗಲ್ ಗ್ರಾಮದ ಜನತೆ ವರ್ಷವಿಡಿ ಬೆಣ್ಣೆಹಳ್ಳದ ನೀರಿನ ಭೀತಿಯಲ್ಲಿ ಜೀವಿಸುತ್ತಿದ್ದಾರೆ. ಮಳೆಗಾಲ ಆರಂಭವಾದ ತಕ್ಷಣವೇ ಬೆಣ್ಣೆಹಳ್ಳವು ಉಕ್ಕಿ ಹರಿಯುತ್ತದೆ. ಈ ವೇಳೆ ಯಾವಗಲ್ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತವಾಗುತ್ತದೆ. ಪರಿಣಾಮವಾಗಿ ನರಗುಂದ ಯಾವಗಲ
ಪೋಟೋ


ಗದಗ, 29 ಜೂನ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಯಾವಗಲ್ ಗ್ರಾಮದ ಜನತೆ ವರ್ಷವಿಡಿ ಬೆಣ್ಣೆಹಳ್ಳದ ನೀರಿನ ಭೀತಿಯಲ್ಲಿ ಜೀವಿಸುತ್ತಿದ್ದಾರೆ. ಮಳೆಗಾಲ ಆರಂಭವಾದ ತಕ್ಷಣವೇ ಬೆಣ್ಣೆಹಳ್ಳವು ಉಕ್ಕಿ ಹರಿಯುತ್ತದೆ. ಈ ವೇಳೆ ಯಾವಗಲ್ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತವಾಗುತ್ತದೆ. ಪರಿಣಾಮವಾಗಿ ನರಗುಂದ ಯಾವಗಲ್ – ಗದಗ ಮತ್ತು ರೋಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಚಾರಕ್ಕೆ ತಡೆ ಬೀಳುತ್ತದೆ. ಪ್ರತಿ ದಿನ ಓಡಾಡುವ ಸಾವಿರಾರು ವಾಹನಗಳ ಓಡಾಟವೂ ಸ್ಥಗಿತವಾಗುತ್ತದೆ. ಈ ನಡುವೆ ಗ್ರಾಮಸ್ಥರು ತಮ್ಮ ಹಕ್ಕುಗಳಿಗಾಗಿ ದೀರ್ಘಕಾಲದಿಂದಾಗಿ ಹೋರಾಟ ನಡೆಸುತ್ತಿದ್ದಾರೆ.

ಸೇತುವೆ ಎತ್ತರ ಕಡಿಮೆ ಇರುವುದರಿಂದ ಕೇವಲ ಒಂದು-ಎರಡು ಸೆಂ.ಮೀ. ಹೆಚ್ಚಿದರೂ ನೀರು ಸೇತುವೆ ಮೇಲ್ಮೈಗೆ ಹರಿದುಬರುತ್ತದೆ. ಪರಿಣಾಮವಾಗಿ ಗ್ರಾಮಸ್ಥರು ಹಲವು ಕಿಲೋಮೀಟರ್ ಸುತ್ತು ಹಾಕಿ ಪ್ರಯಾಣಿಸಬೇಕಾಗುತ್ತದೆ. ಶಾಲಾ ಮಕ್ಕಳು, ಹಸುವಿಗೆ ಮೇವು ತರೋವರಿಂದ ಹಿಡಿದು, ಆಸ್ಪತ್ರೆಗೆ ಹೋಗಬೇಕಾದ ರೋಗಿಗಳವರೆಗೆ ತೊಂದರೆಯು ಮಾತ್ರವಲ್ಲದೇ ಜೀವಮಾನದ ಕಷ್ಟ ಅನುಭವಿಸುತ್ತಿದ್ದಾರೆ.

ಈ ಪ್ರದೇಶದ ಜನರು ಹಲವು ವರ್ಷಗಳಿಂದ ಶಾಸಕರಾದ ಸಿ.ಸಿ. ಪಾಟೀಲ ಅವರಿಗೆ ಸೇತುವೆಯ ಅಗತ್ಯವಿದೆ ಎಂದು ಮನವಿ ಸಲ್ಲಿಸಿದ್ದಾರೆ. “ಅನೇಕ ಬಾರಿ ಭೇಟಿಯಾಗಿ ಮನವಿ‌ ಮಾಡಿದ್ದಾರೆ.‌ಆದರೆ ಪ್ರತಿಯಾಗಿ ಅಸಾಧ್ಯ ಎಂಬ ಉತ್ತರ ಮಾತ್ರ ಬಂದಿದೆ” ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಲೇ ಕಾರ್ಯ ಆರಂಭಿಸಲಿ: ಗ್ರಾಮಸ್ಥರ ಒತ್ತಾಯ

“200 ಕೋಟಿ ರೂಪಾಯಿಗಳ ಅನುದಾನ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆದರೆ ಕಾಮಗಾರಿ ಆರಂಭವಾಗಿಲ್ಲ. ಇದು ವಂಚನೆಯಂತೆ ಭಾಸವಾಗುತ್ತಿದೆ,” ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಬೆಣ್ಣೆಹಳ್ಳ ಉಕ್ಕಿ ಹರಿಯುವ ಪ್ರತಿವರ್ಷವೂ ಇಂತಹ ದುಸ್ಥಿತಿ ಎದುರಾಗುತ್ತದೆ. ನೂರಾರು ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗುತ್ತದೆ. ಸಾಲದ ನಂಬಿಕೆಯಲ್ಲಿ ಬಿತ್ತನೆ ಮಾಡಿದ ಬೆಳೆ ನಾಶವಾಗುತ್ತದೆ.

ಸೀಮಿತ ಸಮಯದಲ್ಲಿ ಸಮಸ್ಯೆ ಬಗೆಹರಿಸುವ ಬದಲು, ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಎಂದಿನಂತೆ ಭರವಸೆ ನೀಡಿ ಕಾಲಹರಣ ಮಾಡುತ್ತಿದ್ದಾರೆ. “ಎಚ್.ಕೆ. ಪಾಟೀಲ ಅವರಿಗೂ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಅವರಿಂದಲೂ ಸ್ಪಷ್ಟ ಸ್ಪಂದನೆ ಬಂದಿಲ್ಲ” ಎಂದು ಗ್ರಾಮಸ್ಥರು ಹೇಳಿದ್ದಾರೆ.

ಗ್ರಾಮಸ್ಥರು ಇದೀಗ ತಮ್ಮ ಅಸಹನೆಯನ್ನು ತೀವ್ರಗೊಳಿಸಿದ್ದು, ಜನಪ್ರತಿನಿಧಿಗಳಿಗೆ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande