ರಾಯಚೂರು, 28 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಸಿಂಧನೂರು ನಗರಸಭೆ ವತಿಯಿಂದ ಭಾರತ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ಯೋಜನೆಯಡಿ ಸರ್ವರಿಗೂ ಸೂರು ಒದಗಿಸುವ ಉದ್ದೇಶದಿಂದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಡಿಯಲ್ಲಿ ಫಲಾನುಭವಿಯು ವಿವಾಹಿತ ಮಹಿಳೆ ಅಥವಾ ಏಕ ಮಹಿಳಾ ಒಡೆತನದ ಗೃಹಿಣಿಯಾಗಿರಬೇಕು. ಇವರನ್ನು ಹೊರತುಪಡಿಸಿ ಪುರುಷರಾಗಿದ್ದಲ್ಲಿ ಮಾಜಿ ಯೋಧರು, ವಿಧುರರು, ಅಂಗವಿಕಲರು, ಹಿರಿಯ ನಾಗರೀಕರು, ವಿಚ್ಚೇದಿತರು ಅರ್ಹರಾಗಿರುತ್ತಾರೆ.
ಫಲಾನುಭವಿ ಕುಟುಂಬದ ವಾರ್ಷಿಕ ಆದಾಯ ಇಡ್ಲೂಎಸ್ 3 ಲಕ್ಷದೊಳಗೆ ಇರಬೇಕು. ಎಲ್ಐಜಿ 3 ರಿಂದ 6 ಲಕ್ಷದೊಳಗೆ, ಎಮ್ಐಜಿ 6 ರಿಂದ 9 ಲಕ್ಷದೊಳಗೆ ಇರಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೇರೆ ಯಾವುದೇ ಯೋಜನೆ ಅಥವಾ ಇಲಾಖೆಯಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆಯ್ಕೆಯಾಗಿ 20 ವರ್ಷದಿಂದ ವಸತಿ ಯೋಜನೆಯಡಿಯಲ್ಲಿ ಸಹಾಯಧನ ಪಡೆದು ಮನೆ ನಿರ್ಮಾಣ ಮಾಡಿಕೊಂಡಿರಬಾರದು.
ಫಲಾನುಭವಿಯು ಸ್ವಂತ ನಿವೇಶನ ಹೊಂದಿದ್ದಲ್ಲಿ ನಿವೇಶನಕ್ಕೆ ಸಂಬಂಧಿಸಿದಂತೆ ಹಕ್ಕುಪತ್ರ, ಕ್ರಯ ಪತ್ರ/ ದಾನ ಪತ್ರ/ ಉಡುಗೊರೆ ಪತ್ರ/ ಖಾತಾ ಪತ್ರಗಳನ್ನು ಹೊಂದಿರಬೇಕು. ಈ ಯೋಜನೆಯಡಿಯಲ್ಲಿ ಒಂಟಿ ಮಹಿಳೆಯರು, ತೃತೀಯ ಲಿಂಗಿಗಳು, ಎಸ್.ಸಿ/ ಎಸ್.ಟಿ/ ಹಿಂದುಳಿದ/ ಅಲ್ಪ ಸಂಖ್ಯಾತ ವರ್ಗದವರು, ಸ್ವಚ್ಛತಾ ಕಾರ್ಮಿಕರು, ಪಿಎಂ ಸ್ವನಿಧಿ ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳು ಮತ್ತು ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯಡಿ ಗುರುತಿಸಿದ ಕುಶಲಕರ್ಮಿಗಳು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು ಯೋಜನೆಗೆ ಅರ್ಹ ಇರುತ್ತಾರೆ.
ದಾಖಲಾತಿಗಳು: ಆಧಾರ್ ಕಾರ್ಡ್ (ಮನೆಯ ಯಜಮಾನಿ/ ಹಾಗೂ ತಂದೆ/ ತಾಯಿ ಮತ್ತು ಪಡಿತರ ಚೀಟಿಯಲ್ಲಿ ಇರುವಂತಹ ಕುಟುಂಬ ಸದಸ್ಯರ ಆಧಾರ್ ಕಾರ್ಡಗಳು), ವಸತಿ ರಹಿತರಾದಲ್ಲಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು ಹಕ್ಕುಪತ್ರ/ ಕ್ರಯ ಪತ್ರ/ ದಾನ ಪತ್ರ/ ಉಡುಗೊರೆ ಪತ್ರ/ ಖಾತ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಖಾತೆಯ ವಿವರ, ನಿಗಧಿತ ನಮೂನೆ, ಮೊಬೈಲ್ ಸಂಖ್ಯೆ, ಪ್ಯಾನ್ ಕಾಡ್ನೊರ್ಂದಿಗೆ ವೆಬ್ಸೈಟ್ ವಿಳಾಸ: URL:http://pmay-urban.gov.in ನಲ್ಲಿ ಜುಲೈ 15 ರೊಳಗಾಗಿ ಅರ್ಜಿಸಲ್ಲಿಸಿ, ಅರ್ಜಿಯ ಪ್ರತಿಯನ್ನು ಈ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಸಂಬಂಧಪಟ್ಟ ವಿಷಯ ನಿರ್ವಾಹಕರನ್ನು ಸಂಪರ್ಕಿಸುವಂತೆ ಸಿಂಧನೂರು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್