ಬಳ್ಳಾರಿ, 28 ಜೂನ್ (ಹಿ.ಸ.):
ಆ್ಯಂಕರ್: ಮೀಸಲು ಅರಣ್ಯ ಪ್ರದೇಶವಾಗಿರುವ ವಿಠಲಾಪುರ ಮತ್ತು ತುಮಟಿ ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ಅವಕಾಶ ನೀಡಲು ಕೋರಿ ವಿಠಲಾಪುರ ಕುರಿಗಾಹಿಗಳು ಜಿಲ್ಲಾಧಿಕಾರಿಗಳನ್ನು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಬಂದಿದ್ದ ಕುರಿಗಾಹಿಗಳು, ಎರಡನೇ ಶನಿವಾರ ಕಚೇರಿಯ ರಜೆ ಇದ್ದ ಕಾರಣ ಮಾಧ್ಯಮಗಳ ಜೊತೆ ಮಾತನಾಡಿ, ಪ್ರತಿ ವರ್ಷ ನಮ್ಮ ಗ್ರಾಮದ ಸುತ್ತಲಿನ ಅರಣ್ಯ ಪ್ರದೇಶದದ ಒಂದು ಭಾಗಕ್ಕೆ ಫಿನಿಶಿಂಗ್ ಹಾಕಿ ಇನ್ನೊಂದು ಭಾಗವನ್ನು ಕುರಿ ಮೇಯಿಸಲು ಅವಕಾಶ ಮಾಡಿಕೊಡುತ್ತಿದ್ದರು. ಆದರೆ, ಈ ವರ್ಷ ಅರಣ್ಯದ ಎಲ್ಲಾ ಭಾಗಕ್ಕೆ ಮುಳ್ಳು ತಂತಿಯನ್ನ ಹಾಕಿ ಅರಣ್ಯಕ್ಕೆ ಹೋಗಿ ಬರಲು ತಡೆಯೊಡ್ಡಿದ್ದಾರೆ ಎಂದು ಹೇಳಿದರು.
ಮುಂಗಾರು ಮಳೆ ಆರಂಭವಾಗಿದೆ. ರೈತರು ಬಿತ್ತನೆ ನಡೆಸಿದ್ದಾರೆ. ಕುರಿ ಮೇಯಿಸಲು ನಮಗೆ ಕಷ್ಟವಾಗಿದೆ, ಕಾರಣ ಅರಣ್ಯದ ಒಂದು ಭಾಗದಲ್ಲಿ ಕುರಿ ಮೇಯಿಸಲು ಅವಕಾಶ ನೀಡಬೇಕು. ವಿಠಲಾಪುರ ಗ್ರಾಮದಲ್ಲಿ 250 ಕುರಿಗಾಯಿ ಕುಟುಂಬಗಳಿದ್ದು ಹದಿನೈದು ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳಿವೆ. ನಮಗೆ ಕುರಿ ಮೇಯಿಸುವುದು ಬಿಟ್ಟು ಯಾವುದೇ ಉದ್ಯೋಗ ಬರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಕುರುಬರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ. ಮೋಹನ್, ಜಿಲ್ಲಾ ಅಧ್ಯಕ್ಷ ಡಾ. ಗಾದಿಲಿಂಗನಗೌಡ ಇನ್ನಿತರರು ಈ ಸಂದರ್ಭದಲ್ಲಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್