ಬಳ್ಳಾರಿ, 24 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಆಧಾರ್ ನೋಂದಣಿಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ ಮತ್ತು ಸರ್ಕಾರದಿಂದ ಬರುವ ಯೋಜನೆಗಳನ್ನು ದೊರಕಿಸಿಕೊಡುವ ಅಭಿಯಾನವನ್ನು ಕಾರ್ಯಗತಗೊಳಿಸಲು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ `ಜಿಲ್ಲಾ ಸಾಥಿ ಸಮಿತಿ’ಯನ್ನು ರಚಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ತಿಳಿಸಿದ್ದಾರೆ.
18 ವರ್ಷದೊಳಗಿನ ನಿರ್ಗತಿಕ ಮಕ್ಕಳು ಅಂದರೆ ಸರ್ಕಾರಿ ಸಂಸ್ಥೆಗಳಲ್ಲಿ ಪಾಲನೆ ಪಡೆಯುತ್ತಿರುವ ಅಥವಾ ಆಶ್ರಯ ಮತ್ತು ರಕ್ಷಣೆ ಪಡೆಯುತ್ತಿರುವ ಮಕ್ಕಳು, ಬೀದಿಗಳಲ್ಲಿ, ಕೊಳಗೇರಿಗಳಲ್ಲಿ ಅಥವಾ ರೈಲ್ವೆ ನಿಲ್ದಾಣಗಳಲ್ಲಿ ವಾಸಿಸುತ್ತಿರುವ ಮಕ್ಕಳು, ಮಕ್ಕಳ ಆರೈಕೆ ಸ್ಥಳಗಳಲ್ಲಿ ವಾಸಿಸುವ ಮಕ್ಕಳು, ಅನಾಥರು, ಪರಿತ್ಯಕ್ತ ಮಕ್ಕಳು, ಏಕ ಪಾಲಕ ಮಕ್ಕಳು, ಕಳ್ಳ ಸಾಗಾಣಿಕೆಯಲ್ಲಿ ಸಿಲುಕಿದ ಮಕ್ಕಳು, ಬಾಲ ಕಾರ್ಮಿಕ ಮಕ್ಕಳು, ಭಿಕ್ಷಾಟನೆ ಮಾಡುತ್ತಿರುವ ಮಕ್ಕಳು, ಒಂಟಿಯಾಗಿರುವ ಮಕ್ಕಳು, ಮಾದಕ ವ್ಯಸನ ಮಕ್ಕಳು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಹಿಂಸೆ ಮತ್ತು ಅತ್ಯಾಚಾರಕ್ಕೆ ಒಳಗಾದ ಮಕ್ಕಳು, ಜೀತ ಪದ್ಧತಿಯಿಂದ ರಕ್ಷಿಸಲ್ಪಟ್ಟಿರುವ ಮಕ್ಕಳು, ಅನೌಪಚಾರಿಕ ಆಶ್ರಯಗಳಲ್ಲಿ ಅಥವಾ ನೋಂದಾಯಿಸದ ಮಕ್ಕಳ ಆರೈಕೆ ಮನೆಗಳಲ್ಲಿ ವಾಸಿಸುವ ಮಕ್ಕಳನ್ನು ಗುರುತಿಸಿ ಅವರಿಗೆ ಆಧಾರ್ ದಾಖಲಾತಿಯನ್ನು ಮಾಡಿಸಿ, ಕಾನೂನಿನ ನೆರವು, ಆರೋಗ್ಯ ರಕ್ಷಣೆ, ಶಿಕ್ಷಣ ಹಾಗೂ ಸರ್ಕಾರದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಮತ್ತು ಆ ಮಕ್ಕಳ ಪೆÇೀಷಕರನ್ನು ತಂದೆ-ತಾಯಿಗಳನ್ನು ಗುರುತಿಸಿ ಅವರನ್ನು ಕುಟುಂಬಕ್ಕೆ ಮರಳಿಸಲಾಗುತ್ತದೆ. ಇದು ಜಿಲ್ಲಾ ಸಾಥಿ ಸಮಿತಿಯ ಅಭಿಯಾನದ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಾಲನೆ ಮತ್ತು ಸಂರಕ್ಷಣೆ ಅಗತ್ಯವಿರುವ ಮಕ್ಕಳಿಗೆ ಆಧಾರ್ ನೋಂದಣಿ, ಸರಕಾರಿ ಯೋಜನೆಗಳ ಸೇರ್ಪಡೆ ಮತ್ತು ಟ್ರ್ಯಾಕಿಂಗ್ಗಾಗಿ ‘ಸಾಥಿ' ಅಭಿಯಾನದ ಸಮಿತಿಯನ್ನು ರಚಿಸಲಾಗಿದ್ದು, ಸಾಥಿ ಅಭಿಯಾನ ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಸದಸ್ಯರಾಗಿ ಎರಡು ಜಿಲ್ಲೆಯ ತಾಲ್ಲೂಕುಗಳ ತಹಶೀಲ್ದಾರರು, ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿಗಳು, ಡಿಡಿಪಿಐ, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಪೆÇೀಲೀಸ್ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ಅನಾಥಾಶ್ರಮ ಮತ್ತು ಮಕ್ಕಳ ಕಾಳಜಿ ಕೇಂದ್ರಗಳ ಅಧಿಕಾರಿಗಳು, ಪ್ಯಾನಲ್ ವಕೀಲರು ಮತ್ತು ಅರೆ-ಕಾಲಿಕ ಕಾನೂನು ಸ್ವಯಂ ಸೇವಕರು ಸಮಿತಿಯೊಂದಿಗೆ ಕಾಲೇಜು ವಿದ್ಯಾರ್ಥಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರೇತರ ಸಂಘಟನೆ (ಎನ್ಜಿಓ) ಗಳು ಸಹ ಕೆಲಸ ನಿರ್ವಹಿಸುತ್ತಾರೆ.
ಈ ಅಭಿಯಾನಕ್ಕೆ ಸಾರ್ವಜನಿಕರು ಸಹ ಕೈ ಜೋಡಿಸಿದಾಗ ಮಾತ್ರ ಯಶಸ್ವಿಯಾಗುತ್ತದೆ. ಹಾಗಾಗಿ ಸಾರ್ವಜನಿಕರು ಯಾವುದೇ ರೀತಿಯ ನಿರ್ಗತಿಕ ಮಕ್ಕಳನ್ನು ನೋಡಿದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದೂ.08392-278077, ಮೊ.9141193929, ಮಕ್ಕಳ ಸಹಾಯವಾಣಿ ಸಂಖ್ಯೆ 1098 ಹಾಗೂ ಉಚಿತ ಕಾನೂನು ಸೇವೆ ಸಂಖ್ಯೆ 15100 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್