ರಾಯಚೂರು, 24 ಜೂನ್ (ಹಿ.ಸ.) :
ಆ್ಯಂಕರ್ : ಹೊಸ ಗರ್ಭನಿರೋಧಕ ಕುರಿತು ವೈದ್ಯಾಧಿಕಾರಿಗಳು ಹಾಗೂ ಶ್ರೂಶಷಣಾಧಿಕಾರಿಗಳಿಗೆ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇತ್ತೀಚೆಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ಕುಟುಂಬ ಕಲ್ಯಾಣ ವಿಭಾಗದ ಉಪ ನಿರ್ದೇಶಕರಾದ ಡಾ.ಚಂದ್ರಿಕಾ ಬಿ. ಆರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಯಿ ಮತ್ತು ಮಕ್ಕಳ ಆರೋಗ್ಯ ಸರಿಯಾಗಿರಲು ಕುಟುಂಬ ಕಲ್ಯಾಣ ಕಾರ್ಯಕ್ರಮ ಅವಶ್ಯಕತೆಯಿದೆ. ಒಂದು ಮಗುವಿನಿಂದ ಮತ್ತೊಂದು ಮಗುವಿನ ಹೆರಿಗೆ ನಡುವೆ ಅಂತರ ಕಡಿಮೆ ಇದ್ದಲ್ಲಿ ಅದರಿಂದ ಮಹಿಳೆಯರಿಗೆ ರಕ್ತಹಿನ್ನತೆಯಾಗಿ ತಾಯಿ ಹಾಗೂ ಶಿಶುವಿನ ಜೀವಕ್ಕೆ ಆಪಾಯವಾಗುವುದನ್ನು ತಡೆಗಟ್ಟಲು ಅಂತರ ಇಂಜೇಕ್ಷನ್ ಬಳಸುವುದು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.
ಹೆರಿಗೆಯಾದ 6 ವಾರಗಳ ನಂತರ ಈ ಇಂಜೇಕ್ಷನ್ ಪಡೆಯಬಹುದಾಗಿದೆ. ಇದರಿಂದ ಒಂದು ಮಗುವಿನಿಂದ ಮತ್ತೊಂದು ಮಗುವಿಗಾಗಿ ಗರ್ಭಧರಿಸಲು ಅಂತರವನ್ನು ಕಾಪಾಡಿಕೊಳ್ಳಲು ತುಂಬಾ ಉಪಯುಕ್ತವಾಗಿದೆ. ಈ ಅಂತರದ ಇಂಜೆಕ್ಷನ್ ಅನ್ನು ಪ್ರತಿ 3 ತಿಂಗಳಿಗೆ ಒಂದು ಬಾರಿ ಮಾಡಿಸಿಕೊಳ್ಳಬೇಕೆಂದರು.
ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಯಾದ ಅರ್ಹ ಫಲಾನುಭವಿಗಳ ಪೈಕಿ ಸಾಂಕೇತಿಕವಾಗಿ 6 ಜನ ತಾಯಂದಿರರಿಗೆ ಇಂಜೆಕ್ಷನ್ ನೀಡಲಾಯಿತು. ನಂತರ ವೈದ್ಯಾಧಿಕಾರಿಗಳಿಗೆ ಹಾಗೂ ಶುಶ್ರೂಷಣಾಧಿಕಾರಿಗಳಿಗೆ ಅಂತರ ಇಂಜೆಕ್ಷನ್ ಕುರಿತು ತರಬೇತಿ ನೀಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಪ್ರಾಸ್ತಾವಿಕ ಮಾತನಾಡಿ, ಕುಟುಂಬ ಕಲ್ಯಾಣ ಯೋಜನೆಯ ವಿಧಾನಗಳಾದ ತಾತ್ಕಾಲಿಕ ವಿಧಾನದ ಇಂಜೆಕ್ಷನ್ ತುಂಬಾ ಸರಳ ಮತ್ತು ಸುರಕ್ಷಿತವಾಗಿದೆ. ಮಹಿಳೆಯರು ಇದನ್ನು ಪಡೆಯುವುದರಿಂದ ಅಂತರದ ಹೆರಿಗೆ ಕಾಪಾಡಬಹುದು. ಇದರಿಂದ ತಾಯಿ ಮತ್ತು ಮಗು ಕ್ಷೇಮವಾಗಿರುತ್ತಾರೆ. ಇದನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಯಂದಿರಿಗೆ ಸಲಹೆ ಮಾಡಿದರು.
ಇದೇ ಸಂದರ್ಭದಲ್ಲಿ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶಿವಕುಮಾರ, ಸ್ತ್ರೀರೋಗ ತಜ್ಞರಾದ ಶ್ರೀಲತಾ ಪಾಟೀಲ್, ಡಾ.ಮಯಾಂಕ, ಸಲಹೆಗಾರರಾದ ಸತೀಶ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್