ಕೊಪ್ಪಳ, 24 ಜೂನ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲಾಡಳಿ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಸೆಲ್ಕೊ ಫೌಂಡೇಶನ್ ವತಿಯಿಂದ ಜೂನ್ 26 ಮತ್ತು 27 ರಂದು ಎರಡು ದಿನಗಳ ಕಾಲ ``ಕೊಪ್ಪಳ-ಸೌರ ಕೃಷಿ ಉದ್ಯೋಗ ಉತ್ಸವ''ವನ್ನು ಕೊಪ್ಪಳ ನಗರದ ಕಠಾರೆ ಕಲ್ಯಾಣ ಮಂಟಪದದಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗವನ್ನು ಜಿಲ್ಲೆಯ ರೈತರು ಪಡೆದುಕೊಳ್ಳಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಅವರು ತಿಳಿಸಿದ್ದಾರೆ.
ಅವರು ಮಂಗಳವಾರ ಕೊಪ್ಪಳ ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಕೊಪ್ಪಳ-ಸೌರ ಕೃಷಿ ಉದ್ಯೋಗ ಉತ್ಸವ-2025ರ ಕುರಿತು ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯ ರೈತರು, ಎಸ್.ಡಿ.ಓ., ಎಸ್.ಎಸ್.ಜಿ. ಎನ್.ಆರ್.ಎಲ್.ಎಂ.ಗಳಿಗೆ ಸ್ವಯಂ ಉದ್ಯೋಗಕ್ಕಾಗಿ ರೊಟ್ಟಿ ಮತ್ತು ಹಪ್ಪಳ ತಯಾರಿಸುವ ಯಂತ್ರಗಳನ್ನು ನೀಡಲಾಗಿದ್ದು, ಅವುಗಳನ್ನು ವಿದ್ಯುತ್ ಮೂಲಕ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರ ಬದಲಿಗೆ ಸೌರ ಶಕ್ತಿ ಮೂಲಕ ಯಾವ ರೀತಿ ಬಳಕೆ ಮಾಡಬೇಕೆಂಬುವುದನ್ನು 30ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆ ಹಾಗೂ ಸ್ಟಾಲ್ಗಳನ್ನು ಮಾಡಲಾಗುತ್ತಿದೆ. ಸೌರ ಶಕ್ತಿಯಿಂದ ಬಳಕೆ ಮಾಡಬಹುದಾದ ಕೃಷಿಗೆ ಸಂಬಂಧಿಸಿದ ಯಂತ್ರಗಳು, ಸ್ವ ಉದ್ಯೋಗಕ್ಕಾಗಿ ಬೇಕಾಗುವ ಯಂತ್ರೋಪಕರಣಗಳನ್ನು ಸಹಾಯಧನ ರೂಪದಲ್ಲಿ ನೀಡಲಾಗುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಸಾಲ ಮತ್ತು ಸಹಾಯಧನ ಸೌಲಭ್ಯಕ್ಕೆ ಸಂಬಧಿದಂತೆ ಸೂಕ್ತ ಮಾಹಿತಿ ನೀಡಲಾಗುವುದು ಹಾಗೂ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಚರ್ಚೆಗೂ ಅವಕಾಶ ಮಾಡಿಕೊಡಲಾಗುವುದು ಎಂದರು.
ರೈತರಿಗೆ ಮತ್ತು ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಹೊಂದಿಕೊಳ್ಳುವ ಮಹಿಳಾ ಹಾಗೂ ರೈತ ಸ್ನೇಹಿ ತಂತ್ರಜ್ಞಾನಗಳ ಕುರಿತು ತಿಳುವಳಿಕೆ ಹಾಗೂ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಎರಡು ದಿನಗಳ ಕಾಲ ನಡೆಯುವ ಕೊಪ್ಪಳ-ಸೌರ ಕೃಷಿ ಉದ್ಯೋಗ ಉತ್ಸವದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸೆಲ್ಕೊ ಫೌಂಡೇಶನ್ ತಂತ್ರಜ್ಞರು ಹಾಗೂ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ರೈತರು, ಸಂಜೀವಿನಿ ಮತ್ತು ಎನ್.ಆರ್.ಎಲ್.ಎಂ, ಸ್ವಸಹಾಯ ಗುಂಪುಗಳ ಸದಸ್ಯರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಸೆಲ್ಕೊ ಫೌಂಡೇಶನ್ ಮ್ಯಾನೆಜರ್ ಪ್ರಕಾಶ ಮೇಟಿ ಮಾತನಾಡಿ, ಕಳೆದ 15 ವರ್ಷಗಳಿಂದ ದೇಶಾದ್ಯಂತ ಸುಸ್ಥಿರ ಅಭಿವೃದ್ಧಿ ಹಾಗೂ ಸೌರ ವಿದ್ಯುತ್ ವಿಭಾಗದಲ್ಲಿ ಸೆಲ್ಕೋ ಫೌಂಡೇಶನ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಬರುತ್ತಿದೆ. ಜಿಲೆಯಾದ್ಯಂತ 200 ವಿಶೇಷಚೇತನರಿಗೆ ಸ್ವಾವಲಂಬನೆಯ ಜೀವನವನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದೆ ಹಾಗೂ 200ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರಗಳನ್ನು ಸೌರಯುಕ್ತಗಳನ್ನಾಗಿಸಿದೆ. ಕೃಷಿ ಹೈನುಗಾರಿಕೆ ಅವಲಂಬಿತ ರೈತರಿಗೆ 500 ಕ್ಕೂ ಹೆಚ್ಚು ಸೌರ ವಿದ್ಯುತ್ ಅಳವಡಿಸಲು ಯಶಸ್ವಿಯಾಗಿದ್ದೇವೆ. ಮಹಿಳೆಯರಿಗೆ ಮಾರುಕಟ್ಟೆಗೆ ಸಂಬಂಧಿಸಿದಂತೆ ತರಬೇತಿಯನ್ನು ನೀಡಿದ್ದೇವೆ ಎಂದರು.
ಕೊಪ್ಪಳ ನಗರದ ಕಠಾರೆ ಕಲ್ಯಾಣಮಂಟಪದಲ್ಲಿ ಜೂ. 26 ರಂದು ರೈತರಿಗೆ ಕೃಷಿಗೆ ಸಂಬಂಧಿಸಿದಂತೆ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಮತ್ತು ಜೂ. 27 ರಂದು ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಸೌರ ಸ್ವ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮ ರೈತರಿಗೆ ಹಾಗೂ ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಸೌರ ಸ್ವ ಉದ್ಯೋಗಕ್ಕೆ ತುಂಬಾ ಅನುಕೂಲವಾಗಲಿದ್ದು, ಮಹಿಳಾ ಹಾಗೂ ರೈತ ಸ್ನೇಹಿ ತಂತ್ರಜ್ಞಾನಗಳ ಕುರಿತು ತಿಳುವಳಿಕೆ ಮತ್ತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಇದರ ಸದುಪಯೋಗವನ್ನು ಕೊಪ್ಪಳ ಜಿಲ್ಲೆಯ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಜಿ. ಹಾಗೂ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು, ಸೆಲ್ಕೋ ಫೌಂಡೇಶನ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್