ಕೋಲಾರ, ೨೪ ಜೂನ್ (ಹಿಸ) :
ಆ್ಯಂಕರ್ : ಕೇಂದ್ರದ ಬಿಜೆಪಿ ಸರ್ಕಾರ ಮಾವಿಗೆ ಬೆಂಬಲ ಬೆಲೆ ನೀಡಲು ಒಪ್ಪಿದ್ದರೂ ತನ್ನ ಪಾಲಿನ ಹಣ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿರುವ ರಾಜ್ಯದ ಗ್ಯಾರೆಂಟಿ ಲಾಟರಿಗಳ ಭ್ರಷ್ಟ ಸರ್ಕಾರ ಕೂಡಲೇ ನಿರ್ಧಾರ ಘೋಷಿಸದಿದ್ದರೆ ಜಿಲ್ಲೆಯ ಮಾವು ಬೆಳೆಗಾರರೊಂದಿಗೆ ವಿಧಾನ ಸೌಧದ ಮುಂದೆ ಮಾವು ಸುರಿದು ಪ್ರತಿಭಟನೆ ನಡೆಸುವುದಾಗಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ `ಒಂದು ದೇಶ ಒಂದು ಚುನಾವಣೆ' ಕುರಿತು ಚರ್ಚಿಸಲು ಆಗಮಿಸಿದ್ದ ಕೇಂದ್ರ ಕೃಷಿ ಸಚಿವ ಶಿವಾರಾಜ್ ಸಿಂಗ್ ಚೌವಾಣ್ ಅವರಿಗೆ ತಾವು ಮಾವು ಬೆಳೆಗಾರರೊಂದಿಗೆ ಮನವಿ ಸಲ್ಲಿಸಿದ್ದರ ಹಿನ್ನಲೆಯಲ್ಲಿ ಕೂಡಲೇ ಸ್ಪಂದಿಸಿದ ಕೇಂದ್ರ ಸಚಿವರು ಬೆಂಬಲ ಬೆಲೆಗೆ ರಾಜ್ಯ ಸರ್ಕಾರದ ಪಾಲಿನ ಹಣ ನೀಡಲು ಸೂಚಿಸಿ ಪತ್ರ ಬರೆಯಲಾಗಿತ್ತು. ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಕಳುಹಿಸಿರುವ ಸದರಿ ಪತ್ರದ ಪ್ರತಿ ಬಿಡುಗಡೆ ಮಾಡಿದರು.
ಈ ಮೊದಲು ಬೆಂಬಲ ಬೆಲೆ ಘೋಷಣೆಗೆ ಕೋರಿ ರಾಜ್ಯ ಸರ್ಕಾರ ಹಾಗೂ ಮುಖ್ಯ ಕಾರ್ಯದರ್ಶಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸಿ, ನಾವು ಬೆಂಬಲ ಬೆಲೆ ನೀಡಲು ಸಿದ್ದ. ನಿಮ್ಮ ಪಾಲಿನ ಹಣ ಘೋಷಿಸಿ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಆದರೆ ಭ್ರಷ್ಟ ಸರ್ಕಾರ ಈವರೆಗೂ ಮಾವಿಗೆ ತನ್ನ ಪಾಲಿನ ಬೆಂಬಲ ಬೆಲೆ ನೀಡುವ ಘೋಷಣೆ ಮಾಡಲೇ ಇಲ್ಲ ಎಂದು ಖಂಡಿಸಿದ ಅವರು, ಮಾವು ಸೀಸನ್ ಮುಗಿದ ನಂತರ ಇವರು ಬೆಂಬಲ ಬೆಲೆ ಘೋಷಣೆ ಮಾಡಬಹುದು ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡಲು ಒಪ್ಪಿದ್ದರೂ ಅದನ್ನು ರೈತರಿಗೆ ತಲುಪಿಸಲು ಸಹಾ ಈ ರಾಜ್ಯ ಸರ್ಕಾರದ ಮುಖ್ಯಮಂತ್ರಿ, ತೋಟಗಾರಿಕೆ,ಕೃಷಿ ಸಚಿವರಿಂದ ಸಾಧ್ಯವಾಗಿಲ್ಲ. ಅವರ ರೈತ ವಿರೋಧಿ ನಡತೆಗೆ ಇದು ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಈಗಾಗಲೇ ಜಿಲ್ಲೆಯ ಮಾವು ಬೆಳೆಗಾರರು ಶ್ರೀನಿವಾಸಪುರ ಬಂದ್ ಮಾಡಿದ್ದಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾವು ಸುರಿದು ರಸ್ತೆ ತಡೆ ಮಾಡಿದ್ದೂ ಆಯಿತು ಆದರೆ ಈವರೆಗೂ ರಾಜ್ಯ ಸರ್ಕಾರದಿಂದ ರೈತರ ಹೋರಾಟಕ್ಕೆ ಸ್ಪಂದಿಸುವ ಒಂದೇ ಒಂದು ಹೇಳಿಕೆ ಹೊರಬೀಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೋತಾಪುರಿ ತಳಿಯ ಮಾವಿಗೆ ಅತಿ ಜರೂರು ಬೆಂಬಲ ಬೆಲೆಯ ಅಗತ್ಯವಿದೆ. ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಿ ಕೇಂದ್ರದ ನೆರವಿಗೆ ರಾಜ್ಯದ ನೆರವೂ ಸೇರಿಸಿ ಬೆಂಬಲ ಬೆಲೆ ಘೋಷಣೆ ಮಾಡದಿದ್ದಲ್ಲಿ ವಿಧಾನ ಸೌಧದ ಮುಂದೆ ಜಿಲ್ಲೆಯ ಮಾವು ಸುರಿದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಈ ನಡುವೆ ತಮ್ಮ ಮನವಿಗೆ ಸ್ಪಂದಿಸಿ ಜಿಲ್ಲೆಯ ರೈತರ ತುರ್ತು ನೆರವಿಗೆ ಧಾವಿಸಿದ ಕೇಂದ್ರದ ಕೃಷಿ ಸಚಿವ ಶಿವರಾಜ್ಸಿಂಗ್ ಚೌಹಾಣ್ ಅವರಿಗೆ ಮುನಿಸ್ವಾಮಿ ಧನ್ಯವಾದ ಸಲ್ಲಿಸಿದರು.
ಚಿತ್ರ ; ಮಾಜಿ ಸಂಸದ ಎಸ್.ಮುನಿಸ್ವಾಮಿ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್