ಕೊಪ್ಪಳ, 22 ಜೂನ್ (ಹಿ.ಸ.) :
ಆ್ಯಂಕರ್ : ಕೆ.ಎಚ್. ಪಾಟೀಲ್ ಅವರು ತಮ್ಮ ಗೌಡಿಕೆಯನ್ನು ಮೀರಿ ಜನ ಸಮುದಾಯದ ಜೊತೆಗೆ ಗುರುತಿಸಿಕೊಳ್ಳುವುದರ ಜೊತೆಗೆ ಅವರು ಜನರ ಕಷ್ಟಗಳಿಗೆ ಸ್ಪಂದಿಸುವ ಹುಟ್ಟು ಹೋರಾಟಗಾರರಾಗಿದ್ದರು ಎಂದು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ಶಿರೂರ ಪುನರ್ವಸತಿ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ರವಿವಾರ ನಡೆದ ಮಾಜಿ ಸಚಿವ ದಿ. ಕೆ.ಎಚ್. ಪಾಟೀಲ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ರಾಜಕಾರಣದಲ್ಲಿ ಬಹಳ ವರ್ಷಗಳ ಕಾಲ ಜನ ಸಮುದಾಯದಲ್ಲಿ ಉಳಿದ ಕೆ.ಎಚ್. ಪಾಟೀಲ್ ಅವರ ಮೂರ್ತಿಯನ್ನು ಇಂದು ಸಂತೋಷದಿಂದ ಅನಾವರಣಗೊಳಿಸಿದ್ದೆನೆ. ನಾನು ಮೊದಲ ಬಾರಿ ಶಾಸಕನಾಗಿದ್ದಾಗ ಕೆ.ಎಚ್. ಪಾಟೀಲ್ ಅವರು ಕಂದಾಯ ಸಚಿವರಾಗಿದ್ದರು. ಯುವ ಉತ್ಸಾಹದ ಹೊಸ ಶಾಸಕರನ್ನು ಅವರು ಪ್ರೀತಿಯಿಂದ ಮಾತನಾಡಿಸುವುದರ ಜೊತೆಗೆ ನಮಗೆ ಪೆÇ್ರೀತ್ಸಾಹಿಸುತ್ತಿದ್ದರು. ಜನರ ಕಷ್ಟಗಳನ್ನು ದೂರ ಮಾಡುವ ಸಲುವಾಗಿ ಅವರು ಸಹಕಾರಿ ಕ್ಷೇತ್ರ. ಸಾಮಾಜಿಕ. ಆರ್ಥಿಕ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದರು ಎಂದರು.
ಮೂರ್ತಿಗಳು ನೋಡಿದಾಗ ಸ್ಪೂರ್ತಿಯಾಗುತ್ತದೆ. ಇಂದಿರಾಗಾಂಧಿ ಅವರ ಮೂರ್ತಿ ನೋಡಿದರೆ ಅವರು ಬಡವರಿಗಾಗಿ ಹಲವಾರು ಯೋಜನೆ ಜಾರಿಗೆ ತಂದರು ಎಂದು ನೆನೆಸುತ್ತೆವೆ. ಡಿ.ದೇವರಾಜ ಅರಸು ಅವರ ಮೂರ್ತಿ ನೋಡಿದರೆ ಅವರು ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕೆಲಸ ಮಾಡಿದರು ಎಂಬುದು ಹೇಗೆ ನೆನಪಿಗೆ ಬರುತ್ತದೆಯೊ ಹಾಗೆ ಕೆ.ಎಚ್. ಪಾಟೀಲ್ ಅವರ ಪ್ರತಿಮೆ ನೋಡಿದರೆ ಅವರ ಶಿಸ್ತಿನ ಶಿಫಾಯಿ ಹಾಗೂ ಹುಟ್ಟು ಹೋರಾಟಗಾರಿಕೆ ನೆನಪಿಗೆ ಬರುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರ 2 ವರ್ಷದಲ್ಲಿ ಅನೇಕ ಅಭಿವೃದ್ಧಿ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 52 ಸಾವಿರ ಕೋಟಿ ರೂ. ಹಣವನ್ನು ನಮ್ಮ ಸರ್ಕಾರ ಖರ್ಚು ಮಾಡುತ್ತಿದೆ. ಜನ ಸಮುದಾಯಕ್ಕೆ ಉತ್ತಮ ಆಡಳಿತ ನೀಡುವ ಸರ್ಕಾರ ಅದೇ ಒಳ್ಳೆಯ ಸರ್ಕಾರ. ಇನ್ನೂ 2 ವರ್ಷ 8 ತಿಂಗಳಲ್ಲಿ ನಮ್ಮ ಸರ್ಕಾರ ಅನೇಕ ಉತ್ತಮ ಯೋಜನೆಗಳನ್ನು ಜಾರಿ ಮಾಡಲಿದೆ. ಈ ವರ್ಷದ ಬಜೆಟನಲ್ಲಿ ಸರ್ಕಾರ ನೀರಾವರಿಗಾಗಿ 22 ಸಾವಿರ ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ ಎಂದು ಹೇಳಿದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ಮಾತನಾಡಿ, ನಾನು ಮತ್ತು ಭೋಸರಾಜು ಅವರು ಕೆ.ಎಚ್ ಪಾಟೀಲ್ ಅವರ ಜೊತೆಗೆ ಕೆಲಸ ಮಾಡಿದ್ದೆವೆ. ಅವರು ಒಳ್ಳೆಯ ಆಡಳಿತಗಾರರಾಗಿದ್ದರು. ಅವರು ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಅವರು ಮಾಡಿದ್ದಾರೆ. ತಮ್ಮ ಸರಳ ವ್ಯಕ್ತಿತ್ವದ ಜೊತೆಗೆ ಆಡಳಿತದಲ್ಲಿ ಹಿಡಿತ ಉಳ್ಳವರಾಗಿದ್ದರು. ಕೃಷಿ. ಸಹಕಾರ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರು. ಕೆ.ಎಚ್. ಪಾಟೀಲ್ ಅವರನ್ನು ಹುಲಕೋಟಿಯ ಹುಲಿ ಎಂದೆ ಕರೆಯುತ್ತಿದ್ದರು ಎಂದು ಹೇಳಿದರು.
ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ಮಾತನಾಡಿ, ಶಿರೂರ ಗ್ರಾಮದಲ್ಲಿ ಕೆ.ಹೆಚ್.ಪಾಟೀಲ್ ರವರ ಮೂರ್ತಿಯನ್ನು ಸುಂದರವಾಗಿ ಪ್ರತಿಷ್ಠಾಪನೆ ಮಾಡಿರುವುದು ನನಗೆ ಸಂತಸ ತಂದಿದೆ. ಹತ್ತಿ ಮಾರುವುದಕ್ಕಾಗಿ ರೈತರಿಗೆ ಬಹು ದೊಡ್ಡ ಸವಾಲಾಗಿದ್ದ ಸಂದರ್ಭದಲ್ಲಿ ಕೆ.ಹೆಚ್.ಪಾಟೀಲ್ ರವರು ಸಹಕಾರಿ ಕ್ಷೇತ್ರದ ಮುಖಾಂತರ ಹತ್ತಿ ಮಿಲ್ಗಳನ್ನು ಪ್ರಾರಂಭ ಮಾಡಿ ರೈತರಿಗೆ ರಕ್ಷಣೆ ಮಾಡಿದರು. ಸಾಮಾಜಿಕ ನ್ಯಾಯವನ್ನು ಒದಗಿಸಲು ಸಹಕಾರ ಕ್ಷೇತ್ರದ ಮೂಲಕ ಹೋರಾಟ ಮಾಡಿರುವ ಅವರನ್ನು ನೆನಪಿಸುವಂತಹ ಕಾರ್ಯವನ್ನು ಶಿರೂರು ಗ್ರಾಮದಲ್ಲಾಗಿದೆ. ನಮ್ಮ ತಂದೆ ಕೆ.ಹೆಚ್.ಪಾಟೀಲ್ ಅವರ ಬಗ್ಗೆ ಎಲ್ಲರು ತಮ್ಮ ಸಂಪರ್ಕ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದರು.
ವೀರಾಪೂರ, ಮುತ್ತಾಳ, ಮುದ್ಲಾಪುರ, ಶಿರೂರು ಸೇರಿದಂತೆ ಯಲಬುರ್ಗಾ ಕ್ಷೇತ್ರದಲ್ಲಿಂದು ಸಾಕಷ್ಟು ಅಭಿವೃದ್ಧಿಯಾಗಿದೆ. ಕಳೆದ 25, 30 ವರ್ಷಗಳ ಹಿಂದೆ ಯಲಬುರ್ಗಾ ಕ್ಷೇತ್ರವು ತೀರಾ ಹಿಂದುಳಿದ ಪ್ರದೇಶವಾಗಿತ್ತು. ಇಲ್ಲಿಯ ಜನರು ಆಸ್ಪತ್ರೆ, ಶಿಕ್ಷಣ ಕಲಿಕೆಗೆ ಹಾಗೂ ಹತ್ತಿಯಂತಹ ರೈತರ ಕೃಷಿ ಬೆಳೆಗಳನ್ನು ಮಾರಲು ಸಹ ಗದಗ ಜಿಲ್ಲೆಗೆ ಬರಬೇಕಾಗಿತ್ತು. ಬಸವರಾಜ ರಾಯರೆಡ್ಡಿಯವರು ಶಾಸಕರಾದ ನಂತರ ಈ ಕ್ಷೇತ್ರದಲ್ಲಿ ಹಲವಾರು ವಸತಿ ನಿಲಯಗಳು, ಶಾಲೆಗಳು, ಆಸ್ಪತ್ರೆ ಹೀಗೆ ವಿವಿಧ ಅಭಿವೃದ್ಧಿ ಕಾರ್ಯಗಳಾಗಿ ಜನರ ಬದುಕಿಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮಾದರಿ ಕ್ಷೇತ್ರ ಯಲಬುರ್ಗಾವಾಗಿದೆ. ಹೊಸ ಶಾಸಕರಾದವರಿಗೆ ಯಲಬುರ್ಗಾ ಕ್ಷೇತ್ರಕ್ಕೆ ಕರೆದುಕೊಂಡು ಬಂದು ತೋರಿಸಬೇಕು. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಡಿ ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಫಲಾನುಭವಿಗಳಿಗೆ ಸರ್ಕಾರದ ಸಹಾಯಧನ ದೊರೆಯುತ್ತಿದೆ. ಈ ಕಾರ್ಯಕ್ರಮದಿಂದ ರಾಜ್ಯದ ಬಡತನ ಪ್ರಮಾಣವು ಶೂನ್ಯಕ್ಕೆ ಬಂದಿದೆ. ರಾಜ್ಯದಲ್ಲಿ ಇದೊಂದು ದೊಡ್ಡ ಕ್ರಾಂತಿಕಾರಿಕ ಸಾಧನೆಯಾಗಿದೆ ಎಂದು ಹೇಳಿದರು.
ಕರ್ನಾಟಕ ವಿಧಾನ ಪರಿಷತ್ತಿನ ಸಭಾ ನಾಯಕರು ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಭೋಸರಾಜು ಅವರು ಮಾತನಾಡಿ, ಕೆ.ಎಚ್ ಪಾಟೀಲ್ ಅವರು ಸಂಘಟನೆ ಹಾಗೂ ಆಡಳಿತದ ಬಗ್ಗೆ ತಿಳಿಸಲು ನಮಗೆ ಮಾರ್ಗದರ್ಶಕರಾಗಿದ್ದರು, ಯಾವುದೇ ಸಂಘಟನೆ ವಿಷಯದಲ್ಲಿ ಚರ್ಚೆ ಬಂದಾಗ ನೇರವಾಗಿ ನಮಗೆಲ್ಲ ನಿರ್ದೇಶನ ಮಾಡುತ್ತಿದ್ದರು, ರಾಜ್ಯದ ಸಚಿವರಾಗಿದ್ದಾಗ ಅಧಿಕಾರಿಗಳಿಗೂ ಸಹ ನಿರ್ದೇಶನ ಮಾಡಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಅವರು ಮಾಡಿದ್ದಾರೆ. ನಮ್ಮ ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯ ಅನ್ಯಾಯ ಅಗುವ ಸಂದರ್ಭದಲ್ಲಿ ಅದು ರಾಜಕೀಯದಲ್ಲಿ ಇರಬಹುದು ಅಥವಾ ಆಡಳಿತದಲ್ಲಿ ಇರಬಹುದು, ಅದನ್ನು ನೇರವಾಗಿ ಪ್ರತಿಭಟಿಸಿ, ಹೇಳುವ ನಾಯಕರು ಆ ಕಾಲದಲ್ಲಿ ಅವರೊಬ್ಬರೆ ಇದ್ದುದು. ರಾಜ್ಯದ ಹಿತದೃಷ್ಟಿಯ ಜೊತೆಗೆ ಈ ಭಾಗದ ಹಿತದೃಷ್ಟಿಯನ್ನು ಸಹ ಅವರು ಕಡೆಗಣಿರಸಿಲ್ಲ, ಈ ಭಾಗದ ಅಭಿವೃದ್ಧಿಗೂ ಸಹ ಬಹಳ ಶ್ರಮಿಸಿದರು. ನನ್ನನ್ನು ಗುರುತಿಸಿ ರಾಜಕೀಯದಲ್ಲಿ ಪ್ರೋತ್ಸಾಹ ನೀಡಿದವರು ಯಾರಾದರು ಇದ್ದರೆ ಅದು ಕೆ.ಹೆಚ್.ಪಾಟೇಲ್ ಅವರು, ನಾನು ಇವತ್ತು ಅವರನ್ನು ಸ್ಮರಿಸುತ್ತೇನೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಕೊಪ್ಪಳ ತಾಲ್ಲೂಕಿನ ಹಿರೆಹಳ್ಳ ಡ್ಯಾಂ ನಿಂದಾಗಿ ಶಿರೂರ. ವೀರಾಪುತ. ಮುತ್ತಾಳ ಹಾಗೂ ಮುದ್ಲಾಪುರ ಗ್ರಾಮಗಳಲ್ಲಿ ಡ್ಯಾಂ ಪುಲ್ ಆದಾಗ, ಈ ಗ್ರಾಮಗಳಲ್ಲಿ ನೀರು ನಿಂತು ಬಿಡುತ್ತಿತ್ತು. 2002 ರಲ್ಲಿ ಈ ಗ್ರಾಮಗಳನ್ನು ಸ್ಥಳಾಂತರ ಮಾಡುವಂತೆ ಜನರ ಒತ್ತಾಯ ಇತ್ತು. ಇದನ್ನು ವಿಶೇಷ ಪ್ರಕರಣ ಎಂದು ತೆಗೆದುಕೊಂಡು ಶೀತ ಪ್ರದೇಶ ಎಂದು ಪರಿಗಣಿಸಿ ಧರ್ಮಸಿಂಗ್ ಅವರು ಮುಖ್ಯಮಂತ್ರಿ ಇದ್ದಾಗ 6 ಕೋಟಿ ಹಣವನ್ನು ಬಿಡುಗಡೆಮಾಡಿ ಭೂಮಿ ಖರೀದಿಸಿ ಈ ಗ್ರಾಮಗಳಲ್ಲಿ ಯಾರಿಂದಲೂ ಒಂದು ನ್ಯಾಯ ಪೈಸೆ ಹಣ ಪಡೆಯದೆ ಎಲ್ಲರಿಗೂ 5 ಲಕ್ಷ, 10 ಲಕ್ಷದಿಂದ ಹಿಡಿದು 50 ರಿಂದ 60 ಲಕ್ಷಗಳವಗೆರೆ ಹಣವನ್ನು ಕೊಟ್ಟ ಮೇಲೆ ಅವರು ಮನೆ ಕಟ್ಟಿಸಿಕೊಂಡರು. ಅಲ್ಲಿ ಸಿಮೆಂಟ್ ರಸ್ತೆ. ಲೈಟ್. ಬಸ್ ನಿಲ್ದಾಣ ಹೈಸ್ಕೂಲ್ ಮಾಡಿದ್ದೆವೆ ಎಂದರು.
ಕೆ.ಎಚ್. ಪಾಟೀಲ್ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಅವರು ರೈತಪರ ಕಳಕಳಿ ಉಳ್ಳವರಾಗಿದ್ದರು. ಉತ್ತರ ಕರ್ನಾಟಕದಲ್ಲಿ ಇಂತಹ ಸರಳ ಸಜ್ಜನಿಕೆಯ ರಾಜಕಾರಣಿಗಳ ಸಂಖ್ಯೆ ಕಡಿಮೆ ಇದೆ. ಮುಖ್ಯಮಂತ್ರಿ ಸಿದ್ರಾಮಯ್ಯನವರಿಗೆ ಬಡವರ ಬಗ್ಗೆ ಬಹಳ ಕಾಳಜಿ ಇರುವುದರಿಂದ ಅವರು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬರುವ ಮುಂದಿನ ಮೂರು ವರ್ಷ ನಮ್ಮ ಸರ್ಕಾರ ಪ್ರಾಮಾಣಿಕ ಸೇವೆ ಜನರಿಗೆ ನೀಡಲಿದೆ. ದಿ. ಕೆ.ಎಚ್. ಪಾಟೀಲ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ತಮಗೆಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.
ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ಟ್ಯಾಬ್ ವಿತರಣೆ: ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಕೊಪ್ಪಳ ಜಿಲ್ಲೆಗೆ ಮೊದಲನೇ ಹಂತದಲ್ಲಿ ಹಂಚಿಕೆಯಾದ 72 ಲ್ಯಾಪ್ಟ್ಯಾಬ್ಗಳನ್ನು ಸಾಂಕೇತಿಕವಾಗಿ ಕುಕನೂರು ಮತ್ತು ಯಲಬುರ್ಗಾ ತಾಲ್ಲೂಕಿನ ಗ್ರಾಮಗಳ ಗ್ರಾಮ ಆಡಳಿತಾಧಿಕಾರಿಗಳಿಗೆ ವಿತರಣೆ ಮಾಡಲಾಯಿತು.
ದಿ. ಕೆ.ಎಚ್.ಪಾಟೀಲ್ ಪುತ್ಥಳಿ ಅನಾವರಣ: ವೇದಿಕೆ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನಡೆದ ಮಾಜಿ ಮಂತ್ರಿಗಳಾದ ದಿ. ಕೆ.ಎಚ್.ಪಾಟೀಲ್ ರವರ ಪುತ್ಥಳಿ ಅನಾವರಣ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರಾದ ಬಸವರಾಜ ಹೊರಟ್ಟಿ ಅವರು ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಕುಂಬ ಹೊತ್ತ ಮಹಿಳೆಯರು ಹಾಗೂ ಕಲಾವಿದರು ಭಾಗವಹಿಸಿದ್ದರು. ದಿ. ಕೆ.ಎಚ್.ಪಾಟೀಲ್ ರವರ ಪುತ್ಥಳಿ ನಿರ್ಮಾಣ ಮಾಡಿದ ಸಿದ್ಧಾರ್ಥ ಪಾಟೀಲ್ ದಂಪತಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ, ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಮುನಿರಾಬಾದ್ ತುಂಗಭದ್ರಾ ಯೋಜನೆಯ (ಕಾಡಾ) ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹಸನಸಾಬ ನಬಿಸಾಬ ದೋಟಿಹಾಳ, ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಡಾ. ರಾಮ್ ಎಲ್. ಅರಸಿದ್ದಿ, ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ನೀರಾವರಿ ಕೇಂದ್ರ ವಲಯ ಮುನಿರಾಬಾದನ ಮುಖ್ಯ ಇಂಜೀನಿಯರ್ ಎಲ್.ಬಸವರಾಜ, ಕನೀನಿನಿ ಸಿಂಗಟಾಲೂರ ಏತ ನೀರಾವರಿ ಯೋಜನೆ ವಿಭಾಗ ನಂ.1 ಮುಂಡರಗಿಯ ಕಾರ್ಯ ನಿರ್ವಾಹಕ ಅಭಿಯಂತರರಾದ ಐ.ಪ್ರಕಾಶ, ಕನೀನಿನಿ ಸಿಂಗಟಾಲೂರ ಏತ ನೀರಾವರಿ ಯೋಜನೆ ಉಪ ವಿಭಾಗ ನಂ.3 ಅಳವಂಡಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಘವೇಂದ್ರಚಾರ್ಯ ಜೋಶಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್